ಕನ್ನಡಿಗರ ಬಗೆಗಿನ ನಿರ್ಲಕ್ಷ್ಯ ಸಹಿಸಲಾಗದು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡದ ಅಸ್ಮಿತೆಯ ಉಳಿವಿಗಾಗಿ ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕದಂಬ ಕನ್ನಡ ಸೈನ್ಯ, ಕಿಸಾನ್ ಸಂಘ, ಕ.ದ.ಸಂ ಕೃಷ್ಣಪ್ಪ ಸಂಘ ಸೇರಿದಂತೆ ಐದು ಸಂಘಟನೆಗಳ ಜೊತೆಗೂಡಿ ವಿಭಿನ್ನ ಚಳುವಳಿ ಮೂಲಕ ಹೋರಾಟ ಮಾಡಲು ತಿರ್ಮಾನಿಸಲಾಗಿದೆ. ಈ ಹೋರಾಟಕ್ಕೆ ಸಾಹಿತಿಗಳು ಬೆಂಬಲ ನೀಡಲಿದ್ದಾರೆ. ಜುಲೈ 5ರಂದು ಮಂಡ್ಯ ಜಿಲ್ಲೆಯಿಂದ ಪ್ರಾರಂಭಿಸಿ ಮೈಸೂರು, ಚಾಮರಾಜ ನಗರ, ಹಾವೇರಿಯಲ್ಲಿ ಮೊದಲ ಸುತ್ತಿನ ಹೋರಾಟ ಆರಂಭಿಸಿ, ನಂತರ ರಾಜ್ಯಾದ್ಯಂತ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಕದಂಬ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಹೇಳಿದರು.

Advertisement

ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರಭಿಮಾನಿ ಕನ್ನಡಿಗರು, ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ನಟ-ನಟಿಯರು, ಉನ್ನತ ಅಧಿಕಾರಿಗಳು, ನೌಕರರು, ಆಡಳಿತ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಕನ್ನಡ, ಕನ್ನಡಿಗರ ಶತ್ರುಗಳಾಗಿದ್ದಾರೆ. ಅವರೆಲ್ಲರನ್ನು ಸ್ವಾಭಿಮಾನಿಗಳನ್ನಾಗಿ ಎಚ್ಚರಿಸಲು ರಾಜ್ಯಾದ್ಯಂತ ಈ ಹೋರಾಟ ಹಮ್ಮಿಕೊಳ್ಳಲಾಗಿದೆ.

ನಮ್ಮ ವಿದ್ಯಾವಂತ ಕನ್ನಡಿಗರ ಭಾಷಾ ನಿರಭಿಮಾನ ಹಾಗೂ ಸರ್ಕಾರ ಹಾಗೂ ವಿರೋಧ ಪಕ್ಷಗಳನ್ನು ಎಚ್ಚರಿಸುವ ಅವಶ್ಯಕತೆ ಇದೆ. ಕನ್ನಡ ಮತ್ತು ಕನ್ನಡಿಗರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಸಹಿಸಿಸಲಾಗದು. ಅವರ್ಣನೀಯ ಕನ್ನಡ ನಾಡು ಜಾತಿ, ಮತ, ಧರ್ಮ, ರಾಜ್ಯ, ಪ್ರದೇಶ ಎಂದು ಯಾವುದೇ ಭೇದ-ಭಾವ ಮಾಡದೆ ಪರಭಾಷಿಕರಿಗೆ ಕನ್ನಡ ನಾಡು ಅವಕಾಶಗಳನ್ನು ಒದಗಿಸುತ್ತಾ ಬರುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಿಗರ ರಕ್ಷಣೆಗಾಗಿ ಮೂಂಚೂಣಿ ಪಾತ್ರ ವಹಿಸಬೇಕಾಗಿದ್ದ ಸಾಹಿತ್ಯ ಪರಿಷತ್ ಸ್ವ-ಹಿತಾಸಕ್ತಿಯಿಂದ ನಡೆದುಕೊಳ್ಳುತ್ತಿದೆ ಎಂಬ ಆರೋಪವಿದೆ. ಕನ್ನಡ ನಾಡು-ನುಡಿ, ನೆಲ-ಜಲ, ಕನ್ನಡಿಗರ ಸಂರಕ್ಷಣೆ, ಉದ್ಯೋಗಕ್ಕಾಗಿ ಹಿಂದಿ ಹೇರಿಕೆ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಪರಿಷತ್ತು ಕೇವಲ ಸಮ್ಮೇಳನದ ರಾಜನಾಗಿ ಮೆರೆಯುತ್ತಿದೆ. ಇಂತಹ ನಾಡದ್ರೋಹಿ ಪರಿಷತ್ತಿಗೆ ಸರ್ಕಾರ ಮೊದಲು ಅನುದಾನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಚಿಂತಾಜನಕ ಸ್ಥಿತಿಯಲ್ಲಿದ್ದು, ಇದುವರೆಗೆ 6 ಸಾವಿರ ಶಾಲೆಗಳನ್ನು ಮುಚ್ಚಲಾಗಿದೆ. ಸಾವಿರಾರು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂಬ ಆರೋಪವಿದೆ. ಹಣ ಎಷ್ಟಾದರೂ ಸರಿ ಸಾಲ-ಸೋಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇದಕ್ಕೆ ಸಂಪೂರ್ಣವಾಗಿ ಸರ್ಕಾರವೇ ಹೊಣೆ. ಏಕೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 80ರಷ್ಟು ಮಂತ್ರಿಗಳು, ಶಾಸಕರು, ಸಂಸದರ ಒಡೆತನದಲ್ಲಿವೆ. ಮುಂದೆ ಬಡವರು, ರೈತರು, ಕಾರ್ಮಿಕರ ಮಕ್ಕಳ ಪಾಲಿಗೆ ಶಿಕ್ಷಣ ಮರಿಚೀಕೆಯಾಗುತ್ತದೆ ಎಂದು ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು, ತುಮಕೂರಿನ ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಅದೇ ರೀತಿ ಅಂಧ-ಅನಾಥರ ಬಾಳಿನ ಬೆಳಕಾಗಿರುವ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹೆಸರನ್ನು ಗದುಗಿನ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕು. ಇಲ್ಲದಿದ್ದರೆ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆಗೂಡಿ ಉಗ್ರ ಹೋರಾಟ ಮಾಡಲಾಗುವುದು.

– ಎಂ.ಪಿ. ಮುಳಗುಂದ.

ರಾಜ್ಯಾಧ್ಯಕ್ಷ, ಪಂ. ಪುಟ್ಟರಾಜ ಗವಾಯಿಗಳ ರೈತ ಸಂಘ.

“ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಅನೇಕ ಹೋರಾಟಗಳು ನಡೆದಿವೆ. ಲಿಂ. ಜಗದ್ಗುರು ಶ್ರೀ ಸಿದ್ಧಲಿಂಗೇಶ್ವರ ಶ್ರೀಗಳು ಸೇರಿದಂತೆ ಅನೇಕರು ಕಪ್ಪತ್ತಗುಡ್ಡ ಉಳಿವಿಗಾಗಿ ಹೊರಟ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಅಳಿವಿನಂಚಿನಲ್ಲಿದೆ. ಕಪ್ಪತ್ತಗುಡ್ಡದ ಬಗ್ಗೆ ಕರ್ನಾಟಕದಲ್ಲಿರುವ ಮಕ್ಕಳಿಗೆ ತಿಳುವಳಿಕೆ ಬರುವ ಉದ್ದೇಶದಿಂದ ಪಠ್ಯಪುಸ್ತಕದಲ್ಲಿ ಪಾಠವನ್ನು ಅಳವಡಿಸಬೇಕು. ಇದರಿಂದಾಗಿ ಕಪ್ಪತ್ತಗುಡ್ಡದ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ”

– ಗವಿಸಿದ್ದಯ್ಯ ಹಳ್ಳಿಕೇರಿಮಠ.

ಕಪ್ಪತ್ತಗುಡ್ಡ ಸಂರಕ್ಷಣಾ ಹೋರಾಟಗಾರ.


Spread the love

LEAVE A REPLY

Please enter your comment!
Please enter your name here