ವಿಜಯಸಾಕ್ಷಿ ಸುದ್ದಿ, ಗದಗ: ವಾರ್ಡ್ ಸಭೆ, ಗ್ರಾ.ಪಂ ಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಸಭೆಗಳನ್ನು ಆದಷ್ಟು ಬೇಗ ರ್ಪೂಣಗೊಳಿಸಿ, ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ಸಿದ್ಧಗೊಳಿಸಿ ಸೆ. 30ರ ಒಳಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅ.2ರಂದು ಸಲ್ಲಿಸಿದ ಕರಡುಪ್ರತಿಗಳ ಪರಿಶೀಲಿಸಿ ಸರ್ಕಾರದ ಅನುಮೋದನೆಗೆ ಕಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಯೋಜನೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಮತ್ತು ನಗರದ ಪ್ರದೇಶಗಳಲ್ಲಿ ಆ. 30ರ ಒಳಗಾಗಿ ವಾರ್ಡ್ ಸಭೆ ನಡೆಸಬೇಕು. ಸೆ. 30ರ ಒಳಗಾಗಿ ಗ್ರಾ.ಪಂ ಸಭೆ ಜರುಗಿಸಬೇಕು. ತಾ.ಪಂ ಮತ್ತು ಸ್ಥಳೀಯ ಸಂಸ್ಥೆಯ ಸಭೆಗಳನ್ನು ಸೆ. 20ರ ಒಳಗಾಗಿ ಜರುಗಿಸಿ, ಅಭಿವೃದ್ಧಿ ಯೋಜನೆಗಳ ಕರಡು ಪ್ರತಿಗಳನ್ನು ಸೆ. 30ರ ಒಳಗಾಗಿ ಜಿ.ಪಂಗೆ ಸಲ್ಲಿಸಬೇಕು ಎಂದು ಗಡವು ನೀಡಿದರು.
ಇದೇ ವೇಳೆ ಸಭೆಗಳನ್ನು ಜರುಗಿಸದೇ ಅಭಿವೃದ್ಧಿ ಯೋಜನೆಗೆ ಕರಡು ಪ್ರತಿಯನ್ನು ತಯಾರಿಸಲು ಸಹಕಾರ ನೀಡದಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೊಟೀಸ್ ನೀಡಬೇಕು. ಕೆಳಹಂತದ ಅಧಿಕಾರಿಗಳಿಗೆ ಕರಡು ಪ್ರತಿ ಸಿದ್ಧತೆಯಲ್ಲಿ ಹಾಗೂ ಅಧಿಕಾರಿ ಕಾರ್ಯವ್ಯಾಪ್ತಿ ಏನು ಎಂಬುದರ ಕುರಿತು ಮಾರ್ಗಸೂಚಿ ಪ್ರತಿ ನೀಡುವ ಮೂಲಕ ಅಧಿಕಾರಿಗಳಿಗೆ ತಿಳುವಳಿಕೆ ನೀಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಡಳಿತ ಸೂಚಿತ ದಿನಾಂಕದ ಒಳಗೆ ವಾರ್ಡ್ಸಭೆ ಜರುಗಿಸಿ, ಕರಡು ಪ್ರತಿಗಳನ್ನು ಅನುಮೋದನೆಗೆ ಸಲ್ಲಿಸಬೇಕು. ಎಲ್ಲ ಸಭೆಗಳ ವಿಡಿಯೋಗ್ರಾಫ್ ಮಾಡಬೇಕು ಎಂದು ಸೂಚಿಸಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗ್ರಾ.ಪಂ ಸಭೆಗೆ ಸೆಕ್ರೆಟರಿ, ಪಿಡಿಒಗಳು ಹಾಜರಾಗದೇ ವೈಮನಸ್ಸು ಮೂಡಿ ಸಭೆ ಬರಕಾಸ್ತು ಆಗುತ್ತಿವೆ. ಗ್ರಾ.ಪಂ ಅಧ್ಯಕ್ಷನ ಆದೇಶದಂತೆ ಪಿಡಿಓ ಸಭೆ ಕರೆದಿರುತ್ತಾರೆ. ಹಾಗಾಗಿ ಎಲ್ಲರೂ ಸಭೆಗೆ ಹಾಜರಾಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಗ್ರಾಮ ಸಭೆಗಳನ್ನು ಬೆಳಗ್ಗೆ 10 ಗಂಟೆ ಒಳಗಾಗಿ ಜರಗಿಸುವುದು ಸೂಕ್ತ. ಕೆಲಸದ ಅವಧಿಯಲ್ಲಿ ಸಭೆಗಳನ್ನು ಹಮ್ಮಿಕೊಂಡರೆ ರೈತರು ಹೊಲಗದ್ದೆಗಳಿಗೆ ತೆರಳಿರುತ್ತಾರೆ. ಹಾಗಾಗಿ ಬೆಳಗಿನ ಜಾವ ಹಮ್ಮಿಕೊಳ್ಳುವುದು ಸೂಕ್ತ ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರು ಮಾತನಾಡಿ, ಮುಳಗುಂದದಲ್ಲಿ ಸಭೆ ನಡೆದಿದೆ. ಇನ್ನುಳಿದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಭೆ ನಡೆಸುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಜಿ.ಪಂ ಸಿಇಓ ಭರತ್ ಎಸ್ ಮಾತನಾಡಿ, ಕರಡು ಪ್ರತಿ ಸಲ್ಲಿಸುವಾಗ ದಾಖಲಾತಿಗಳನ್ನು ಪರಿರ್ಪೂಣಗೊಳಿಸಬೇಕು. ರಾಜ್ಯದಲ್ಲಿ ಮಾದರಿ ಗ್ರಾಮಸಭೆಗಳು ಜರುಗಬೇಕು ಎಂದರು.
ಸಭೆಯಲ್ಲಿ ತಾ.ಪಂ, ಗ್ರಾ.ಪಂ, ಜಿ.ಪಂ ಅಧಿಕಾರಿಗಳು, ಪಿಡಿಓಗಳು, ಸಹಕಾರ ಸಂಘ, ಹಾಲು ಉತ್ಪಾದಕರ ಒಕ್ಕೂಟಗಳ ಪದಾಧಿಕಾರಿಗಳು ಇದ್ದರು.
“ಈ ಹಿಂದಿನ ಗ್ರಾ.ಪಂ, ಸ್ಥಳೀಯ ಸಂಸ್ಥೆಗಳ ವಾರ್ಡ್ ಸಭೆ ನಡೆಯದಿರುವ ಕುರಿತು ಬೇಸರ ವ್ಯಕ್ತಪಡಿಸಿದ ಸಚಿವರು, ನಗರ ವ್ಯಾಪ್ತಿಯಲ್ಲಿ ಕೇವಲ 54 ವಾರ್ಡ್ ಸಭೆಗಳು ಜರುಗಿವೆ. ಇನ್ನೂ 150ಕ್ಕೂ ಅಧಿಕ ಸಭೆಗಳು ಜರುಗಬೇಕು. ಗ್ರಾಮೀಣ ಪ್ರದೇಶದಲ್ಲಿ ವಾರ್ಡ್ ಸಭೆ ಮತ್ತು ಗ್ರಾಮಸಭೆಗಳು ಜರುಗುತ್ತಿಲ್ಲ. ಕಾನೂನು ತಿರಸ್ಕರಿಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕನಿಕರ ತೋರದೆ ಕ್ರಮ ವಹಿಸಲಾಗುವುದು”
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.