ವಿಜಯಸಾಕ್ಷಿ ಸುದ್ದಿ, ಧಾರವಾಡ : ಕರ್ನಾಟಕ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ-ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೇ ಮಾದರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಗುರುವಾರ ಬೆಳಿಗ್ಗೆ ನಗರದ ಮಿನಿ ವಿಧಾನಸೌಧದ ಬಳಿ ಇರುವ ಇಂದಿರಾ ಕ್ಯಾಂಟೀನ್ನಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು.
ಇಂದಿರಾ ಕ್ಯಾಂಟೀನ್ ಅನ್ನುವುದು, ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್ನಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ನ ಪ್ಯಾಕೇಜ್ 1ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆವರಣ, ಹೊಸ ಬಸ್ ನಿಲ್ದಾಣ, ಎಸ್.ಎಮ್. ಕೃಷ್ಣ ನಗರ, ನ್ಯೂ ಇಂಗ್ಲೀಷ್ ಶಾಲೆ, ಸೋನಿಯಾ ಗಾಂಧಿ ನಗರದಲ್ಲಿ ಪ್ರತಿದಿನ ಬೆಳಗಿನ ಉಪಹಾರ 500, ಮಧ್ಯಾಹ್ನದ ಊಟ 500, ರಾತ್ರಿ ಊಟ 500 ಸೇರಿ ಒಟ್ಟು 1500 ಜನರಿಗೆ ಊಟ, ಉಪಹಾರ ಪೂರೈಸಲಾಗುತ್ತಿದೆ.
ಪ್ಯಾಕೇಜ್ 2ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹುಬ್ಬಳ್ಳಿಯ ಉಣಕಲ್, ಬೆಂಗೇರಿ ಸಂತೆ ಮೈದಾನದ ಕ್ಯಾಂಟೀನ್ಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
ಊಟದ ರುಚಿ ಸವಿದ ಸಚಿವ, ಡಿಸಿ
ಸಚಿವ ಸಂತೋಷ ಲಾಡ್ ಧಾರವಾಡ ನಗರದಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿ, ವಿವಿಧ ಪ್ರಕಾರದ ಉಪಹಾರ ಸೇವಿಸಿದರು. ಕ್ಯಾಂಟೀನ್ನಲ್ಲಿ ಸಚಿವ ಸಂತೋಷ ಲಾಡ್ ಹಾಗೂ ಡಿಸಿ ದಿವ್ಯ ಪ್ರಭು ಅವರು ಐದು ರೂ ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು.