ಬೆಂಗಳೂರು: ಚಾರಣಿಗರ ಸುರಕ್ಷತೆ ಕಾಪಾಡುವ ಜೊತೆಗೆ ಪರಿಸರ ಸೂಕ್ಷ್ಮತೆಯನ್ನು ರಕ್ಷಿಸುವ ಉದ್ದೇಶದಿಂದ, ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ಅರಣ್ಯ ವಲಯಗಳಲ್ಲಿ ಚಾರಣ ಮತ್ತು ಇಕೋ-ಟ್ರೇಲ್ ಚಟುವಟಿಕೆಗಳನ್ನು ನಿಯಂತ್ರಿಸಲು ಸಮಗ್ರ ‘ಮಾದರಿ ಕಾರ್ಯಾಚರಣೆ ವಿಧಾನ’ (ಎಸ್ಒಪಿ) ಜಾರಿಗೊಳಿಸಿದೆ.
ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಸುಮಾರು 39 ಸಂಭಾವ್ಯ ಚಾರಣ ಮಾರ್ಗಗಳಿವೆ. ಆದರೆ 2026ರಲ್ಲಿ ಸಂಭವಿಸಿದ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಚಿರತೆ ದಾಳಿ, ಕೊಡಗಿನ ತಡಿಯಂಡಮೋಲ್ನಲ್ಲಿ ನಾಪತ್ತೆಯಾಗಿದ್ದ ಚಾರಣಿಗನ ರಕ್ಷಣಾ ಕಾರ್ಯಾಚರಣೆ ಹಾಗೂ ಚಿಕ್ಕಮಗಳೂರಿನ ಬಂಡಾಜೆ ಜಲಪಾತದ ಬಳಿ ನಡೆದ ಘಟನೆಗಳು ದಟ್ಟ ಅರಣ್ಯ ಸಂಚಾರ,
ಹವಾಮಾನ ವೈಪರೀತ್ಯ, ಮೊಬೈಲ್ ನೆಟ್ವರ್ಕ್ ಕೊರತೆ ಹಾಗೂ ವನ್ಯಜೀವಿಗಳ ಓಡಾಟದಿಂದ ಉಂಟಾಗುವ ಅಪಾಯಗಳನ್ನು ಮುನ್ನೆಲೆಗೆ ತಂದಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಜಾರಿಗೊಳಿಸಲಾದ ನೂತನ ಎಸ್ಒಪಿ, ಅರಣ್ಯ ಪ್ರವೇಶದ ಮೇಲೆ ಕಟ್ಟುನಿಟ್ಟಿನ ಆಡಳಿತ ಸ್ಥಾಪಿಸಿದ್ದು, ಸಾರ್ವಜನಿಕರಿಗೆ ಮಾರ್ಗ ತೆರೆಯುವ ಮೊದಲು ಪ್ರತಿ ಮಾರ್ಗದ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಮುಖಾಂಶಗಳು ಹೀಗಿವೆ:
ಪ್ರವೇಶ ಸಾಮರ್ಥ್ಯ ನಿಯಂತ್ರಣ: ಚಾರಣ ಮಾರ್ಗಗಳಲ್ಲಿ ಜನಸಂದಣಿ ತಡೆಯಲು ಮತ್ತು ಅರಣ್ಯ ಸಿಬ್ಬಂದಿ ಪ್ರತಿ ಗುಂಪನ್ನೂ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ದಿನನಿತ್ಯದ ಪ್ರವೇಶ ಮಿತಿ ನಿಗದಿಪಡಿಸಲಾಗುವುದು.
ತರಬೇತಿ ಪಡೆದ ಪ್ರಕೃತಿ ಮಾರ್ಗದರ್ಶಿಗಳು: ಜೀವವೈವಿಧ್ಯ, ದಾರಿ ಗುರುತಿಸುವಿಕೆ, ಚಾರಣಿಗರ ಎಣಿಕೆ ಮತ್ತು ತುರ್ತು ನಿರ್ವಹಣೆಯಲ್ಲಿ ತರಬೇತಿ ಪಡೆದ ಸ್ಥಳೀಯ ಯುವಕರನ್ನು ಗೈಡ್ಗಳಾಗಿ ನಿಯೋಜಿಸಲಾಗುವುದು.
ತಂತ್ರಜ್ಞಾನ ಆಧಾರಿತ ಸುರಕ್ಷತಾ ಮೇಲ್ವಿಚಾರಣೆ: ಕಠಿಣ ಭೂಪ್ರದೇಶ ಹಾಗೂ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಚಾರಣಿಗರು ದಾರಿ ತಪ್ಪುವುದನ್ನು ತಡೆಯಲು ಜಿಪಿಎಸ್ ಆಧಾರಿತ ಸಂವಹನ ಸಾಧನ ಹಾಗೂ ಮೊಬೈಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು.
ಉತ್ತಮ ಚಾರಣ ಮೂಲಸೌಕರ್ಯ: ಸ್ಪಷ್ಟ ದಾರಿ ಸೂಚಿಗಳು, ಕುಡಿಯುವ ನೀರು, ವಿಶ್ರಾಂತಿ ತಾಣಗಳು ಹಾಗೂ ಬೇಸ್ ಕ್ಯಾಂಪ್ಗಳಲ್ಲಿ ಶೌಚಾಲಯ ಸೌಲಭ್ಯ ಒದಗಿಸಲಾಗುವುದು.
ವನ್ಯಜೀವಿ ಸಂರಕ್ಷಣಾ ನಿಯಮಗಳು: ಆನೆ, ಹುಲಿ, ಚಿರತೆ ಅಥವಾ ಕರಡಿಗಳಂತಹ ವನ್ಯಜೀವಿಗಳ ಸಂಚಾರ ಕಂಡುಬಂದಲ್ಲಿ ಆ ಮಾರ್ಗಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಅಥವಾ ನಿರ್ಬಂಧಿಸಲಾಗುವುದು.
ತ್ವರಿತ ತುರ್ತು ಸ್ಪಂದನೆ: ಅಪಘಾತ ಅಥವಾ ಚಾರಣಿಗರು ನಾಪತ್ತೆಯಾದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ, ಪೊಲೀಸ್, ಎಸ್ಡಿಆರ್ಎಫ್ ತಂಡಗಳು, ಡ್ರೋನ್ ಹಾಗೂ ಸ್ಥಳೀಯರನ್ನು ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ತೊಡಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು.
ಕಟ್ಟುನಿಟ್ಟಿನ ನಿಯಮ ಜಾರಿ: ನಿಯಮ ಉಲ್ಲಂಘಿಸುವ ಅಥವಾ ನಿಗದಿತ ಮಾರ್ಗ ಬಿಟ್ಟು ತೆರಳುವ ಚಾರಣಿಗರು ಮತ್ತು ಗೈಡ್ಗಳ ವಿರುದ್ಧ ಕಾನೂನು ಕ್ರಮ ಹಾಗೂ ಕಪ್ಪುಪಟ್ಟಿಗೆ ಸೇರಿಸುವ ಅವಕಾಶವಿದೆ.
ಅರಣ್ಯ ಚಾರಣ ಮಾರ್ಗಗಳು ಸಾಮಾನ್ಯ ಪ್ರವಾಸಿ ರಸ್ತೆಗಳಂತಲ್ಲ, ಅವು ಸೂಕ್ಷ್ಮ ವನ್ಯಜೀವಿ ಆವಾಸಸ್ಥಾನಗಳಾಗಿದ್ದು, ಹಂತ-ಹಂತವಾಗಿ ಸಿದ್ಧತೆ ಪರಿಶೀಲಿಸಿದ ನಂತರವೇ ತೆರೆಯಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ವನ್ಯಜೀವಿ ಸಂರಕ್ಷಣೆ ಮತ್ತು ಮಾನವ ಜೀವ ರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ, ಜವಾಬ್ದಾರಿಯುತ ಚಾರಣಿಗರಿಗೆ ಸುರಕ್ಷಿತ ಮತ್ತು ಸುಸ್ಥಿರ ಅನುಭವ ಒದಗಿಸುವುದೇ ನೂತನ ಮಾರ್ಗಸೂಚಿಗಳ ಮುಖ್ಯ ಉದ್ದೇಶ ಎಂದು ಅರಣ್ಯ ಇಲಾಖೆ ತಿಳಿಸಿದೆ.



