ಬೆಂಗಳೂರು:- ಕರ್ನಾಟಕದಲ್ಲಿ ನಿಫಾ ವೈರಸ್ ಆತಂಕ ಮನೆ ಮಾಡಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ.
ನಿಫಾ ವೈರಸ್ಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ ಆಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವೈರಸ್ ಭೀತಿ ಎದುರಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ನಿಫಾ ವೈರಸ್ಗೆ ಬಲಿಯಾದ ವಿದ್ಯಾರ್ಥಿಯ ಅಂತ್ಯಸಂಸ್ಕಾರಕ್ಕೆ ಇಲ್ಲಿಂದ ಕೆಲವರು ಕೇರಳಕ್ಕೆ ಹೋಗಿದ್ದಾರೆ. ಕೇರಳಕ್ಕೆ ಹೋಗಿರುವ 25 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದರು.
ಕೇರಳ ಮೂಲದ ವಿದ್ಯಾರ್ಥಿ ನಿಫಾ ವೈರಸ್ಗೆ ಬಲಿಯಾಗಿದ್ದಾರೆ. ಸೈಕಾಲಜಿ ಸ್ಟೂಡೆಂಟ್ ಆಗಿದ್ದ ಅವರ ಅಂತ್ಯ ಸಂಸ್ಕಾರಕ್ಕೆ ಇಲ್ಲಿಂದ ಕೆಲವರು ಕೇರಳಕ್ಕೆ ಹೋಗಿದ್ದರು. ಅವರ ಮೇಲೂ ನಿಗಾ ವಹಿಸಲಾಗಿದೆ. ಕೇರಳದಲ್ಲೂ ಇದರ ಬಗ್ಗೆ ನಿಗಾ ವಹಿಸಲಾಗಿದೆ. ಯರ್ಯಾರು ಕೇರಳಕ್ಕೆ ಹೋಗಿದ್ದರೋ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. 25 ಜನರನ್ನು ಟ್ರಾಕ್ ಮಾಡಲಾಗುತ್ತಿದೆ. ಅವರಿಗೆ ಯಾವ್ಯಾವ ಲಕ್ಷಣಗಳಿವೆ ಎಂದು ನೋಡುತ್ತಿದ್ದೇವೆ. ಮಂಗಳವಾರ ಅಥವಾ ಬುಧವಾರ ರಿಪೋರ್ಟ್ ಬರಬಹುದು ಎಂದರು.