ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದರ ಹಿಂದೆ ವಸೂಲಿ ಉದ್ದೇಶ ಇದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಸರ್ಕಾರದ ನಡೆ ಖಂಡಿಸಿರುವ ನಿಖಿಲ್, ಬೆಂಗಳೂರು ನಗರ ವಾಸಿಗಳಿಗೆ ಕಿರಿಕಿರಿ ಮಾಡುತ್ತಿದ್ದ ಟೋಯಿಂಗ್ ಪ್ರಕ್ರಿಯೆಯನ್ನು ಜನಾಕ್ರೋಶದ ಮೇರೆಗೆ 2022ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮರು ಆದೇಶ ಮಾಡಿರುವುದರ ಹಿಂದೆ, ವಸೂಲಿ ಉದ್ದೇಶ ಕಾಣುತ್ತಿದೆ. ಮೂಲಭೂತ ಸೌಕರ್ಯಗಳನ್ನು ಕೊಡದೇ ಜನರನ್ನು ಸತಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟು ಆದಾಯದ ಮೂಲಗಳನ್ನು ಹುಡುಕುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.
ಇತ್ತೀಚೆಗೆ ನೋಂದಣಿ ಶುಲ್ಕ, ಮೆಟ್ರೋ-ಬಸ್ ಪ್ರಯಾಣ ದರ ಹೆಚ್ಚಳ, ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಬಿಯರ್ ಹಾಗೂ ಮದ್ಯದ ಮೂಲ ಬೆಲೆಗಿಂತ ದುಪಟ್ಟು ಟ್ಯಾಕ್ಸ್ ಏರಿಕೆಯಂತಹ ಅವೈಜ್ಞಾನಿಕ ರೀತಿ ಅನುಸರಿಸಿದರೂ ಕೂಡ, ರಾಜ್ಯದ ಖಾಲಿ ಬೊಕ್ಕಸ ಸರಿಯಾದಂತೆ ಕಾಣುತ್ತಿಲ್ಲ. ಸಂಚಾರಿ ಪೊಲೀಸ್ ಹಾಗೂ ಟೋಯಿಂಗ್ ಮೂಲಕ ‘ಕಲೆಕ್ಷನ್’ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಈ ಸರ್ಕಾರದ ಪಿತೂರಿ ನಡೆದಿದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.