ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಅವರ ಮನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ಕೊಪ್ಪಳದಲ್ಲಿ ಪಕ್ಷ ಸಂಘಟನಾ ಪ್ರವಾಸ ಕೈಗೊಂಡಿದ್ದ ನಿಖಿಲ್ ಕುಮಾರಸ್ವಾಮಿ, ಮಹಾಂತಯ್ಯನಮಠ ಅವರ ಮನೆಗೆ ತೆರಳಿ ಕುಟುಂಬದವರ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬದೊಂದಿಗೆ ಮಹಾಂತಯ್ಯನಮಠ ಕುಟುಂಬ ಅನಾದಿ ಕಾಲದಿಂದಲೂ ಪರಸ್ಪರ ಸಂಬಂಧ ಹೊಂದಿದೆ. ದಿ. ಎಮ್.ಎಸ್. ಮಹಾಂತಯ್ಯಮಠ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಜನತಾ ಪಕ್ಷದಿಂದಲೂ ಜತೆಗಿದ್ದವರು. ಈ ಕುಟುಂಬದ ನಂಟು ಮರೆಯಲಾಗದು. ಎಮ್.ಎಸ್. ಮಹಾಂತಯ್ಯನಮಠ ಬಳಿಕ ಅವರ ಮಗನಾದ ವೀರೇಶ ಮಹಾಂತಯ್ಯನಮಠ ಕೂಡ ಜೆಡಿಎಸ್ನಲ್ಲಿಯೇ ಸಕ್ರಿಯವಾಗಿದ್ದಾರೆ.
ರಾಜಕೀಯದಲ್ಲಿ ಏನೇ ಸಮಸ್ಯೆ ಬಂದರೂ ನಮ್ಮನ್ನು ಬಿಟ್ಟುಕೊಟ್ಟಿಲ್ಲ. ಇಷ್ಟೊಂದು ಪ್ರೀತಿ ತೋರುವ ಮಹಾಂತಯ್ಯನಮಠ ಅವರ ಕುಟುಂಬದ ಪ್ರೀತಿ ಮರೆಯಲಾಗದು ಎಂದು ಸ್ಮರಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ ಬಾಬು, ಮಾಜಿ ಸಚಿವರಾದ ಬಂಡೆಪ್ಪ ಕಾಂಶಪೂರ, ಹನುಮಂತಪ್ಪ ಆಲ್ಕೋಡ, ವೆಂಕಟರಾವ್ ನಾಡಗೌಡ, ಶಾಸಕ ನೇಮಿರಾಜ್ ನಾಯ್ಕ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ರಾಜು ನಾಯಕ, ಮಹಾಂತಯ್ಯನಮಠ ಕುಟುಂಬದವರು ಇದ್ದರು.


