ವಿಜಯಸಾಕ್ಷಿ ಸುದ್ದಿ, ಗದಗ : ಸಂಕಟ, ತಳಮಳ, ಹಸಿವು, ಅಸಹಾಯಕತೆಗಳಿಗೆ ಮಾತ್ರವಲ್ಲ, ಭಾವನೆಗಳಿಗೂ ಬೆಲೆ ಕೊಡದೆ ಅಣುಬಾಂಬುಗಳ ರೀತಿ ಜನ ಬದಲಾಗುತ್ತಿರುವದು ಜಗತ್ತಿನ ಅಪಾಯದ ಸಂಕೇತದ ಸೂಚನೆ ಎಂದು ಹಿರಿಯ ಕವಿ, ಕತೆಗಾರ, ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ. ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.
ಅವರು ಗದಗಿನ ನಿರಂತರ ಪ್ರಕಾಶನ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ಹಾವೇರಿ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ `ನಿರಂತರ ಸಾಹಿತ್ಯ ಪುರಸ್ಕಾರ-2024′ ಸ್ವೀಕರಿಸಿ ಮಾತನಾಡಿದರು.
ತಸ್ಮಿನ ಪ್ರಕಾಶನದಿಂದ ಹಜರೇ ಸಾಬ್ ಬಿ.ನದಾಫ್ ಅವರ ಬದುಕು ಛಂದಗೀತ ಮತ್ತು ನಕ್ಷತ್ರ ದಾರಿ ಸಂಕಲನಗಳನ್ನು ಹಿರಿಯ ಜಾನಪದ ವಿದ್ವಾಂಸ ಶಂಬು ಬಳಿಗಾರ್, ಸಾಹಿತಿ ಎಚ್.ಉಮೇಶಪ್ಪ ಅವರು ಜನಾರ್ಪಣೆಗೊಳಿಸಿದರು.
ಕವಿ, ಪ್ರಕಾಶಕ ಎ.ಎಸ್. ಮಕಾನದಾರ ಮಾತನಾಡಿ, ಪ್ರಕಾಶನ ಬೆಳೆದುಬಂದ ಬಗೆ, ಕವಿ ನದಾಫ್ ಅವರ ಒಡನಾಟ, ಶ್ರೀನಿವಾಸ ಅವರ ಬದುಕು ಬರಹ ಸಮಾಜ ಮುಖಿ ಕಾರ್ಯಗಳ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ಪುಷ್ಪ ಶಲವಡಿಮಠ, ಡಾ. ಮಹಾದೇವಿ ಕಣವಿ. ಡಾ. ಅಂಬಿಕಾ ಹಂಚಾಟೆ, ಪ್ರೊ. ಮಾರುತಿ ಶಿಡ್ಲಾಪೂರ, ಸಾಬೀನಾ ಬಾನು ನದಾಫ್, ಲಿಂಗರಾಜ ಸೊಟ್ಟಪ್ಪನವರ್, ಶಿವಕುಮಾರ್ ಚನ್ನಪ್ಪನವರ, ಮಾರುತಿ ತಳವಾರ, ನೂರ್ ಅಹ್ಮದ್ ನಾಗನೂರ್, ದೇವರಾಜ್ ಹುಣಸಿಕಟ್ಟಿ, ನಾಮದೇವ ಕಾಗದಗಾರ, ಚಂದ್ರಶೇಖರ್ ಕುಳೆನೂರ, ಕಲ್ಪಿತ ರಾಣಿ ಶ್ರೀನಿವಾಸ್, ಪ್ರತಿಭಾ ಗಾಂಜಿ, ಈರಣ್ಣ ಬೆಳದಡಿ, ಸಿ.ಎಸ್. ಮರಳಹಳ್ಳಿ, ಪತ್ರಕರ್ತ ಮಾಲತೇಶ ಅಂಗುರ್, ರವಿ, ಹುಚ್ಚನಗೌಡರ ನಿಂಗರಾಜ್ ಸುಳ್ಳಲ್ಲಿ, ಮೈನುದ್ದಿನ ಮೋರಟಗಿ, ನ್ಯಾಯವಾದಿ ಸಲೀಂ ಜವಳಿ, ಹಜರೇಸಾಬ ಬಿ.ನದಾಫ್ ಮತ್ತು ಶ್ರೀನಿವಾಸ್ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಶಿಕ್ಷಕ, ಗಾಯಕ ನರಸಿಂಹ ಕೋಮಾರ ನದಾಫ್ ಅವರ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸ್ತುತಪಡಿಸಿದರು. ಯುವ ಲೇಖಕಿ ಅನಿತಾ ಮಂಜುನಾಥ್ ಮತ್ತು ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಹಿರಿಯ ಬಂಡಾಯ ಸಾಹಿತಿ ಸತೀಶ್ ಕುಲಕರ್ಣಿ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ಕವಿಯ ನೋವು-ನಲಿವುಗಳನ್ನು ಗುಣಿಸಿ, ಭಾಗಿಸಿ, ಕಳೆದು, ಕೂಡಿಸಿ ಉತ್ತರ ಕಂಡುಕೊಳ್ಳುವ ಭಾವ ಗಣಿತದ ಲೆಕ್ಕಾಚಾರ ಭಾವ ಪ್ರಧಾನ ಕಾವ್ಯಗಳಲ್ಲಿ ಬಿಂಬಿತವಾದಾಗ ಸಾಹಿತ್ಯ ವಲಯಕ್ಕೆ ಪುಷ್ಠಿ ದೊರೆತಂತೆ ಆಗುತ್ತದೆಂದರು.