ಸಾರ್ವಜನಿಕರು ಎಂದಿನಂತೆ ವ್ಯವಹಾರ ನಡೆಸಲಿ…
ಗದಗ: ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ನಿಮಿತ್ತವಾಗಿ ವ್ಯಾಪಾರ ಮಳಿಗೆ ಹಾಕಲಾಗಿದ್ದು, ಅನ್ಯ ರಾಜ್ಯದ ವ್ಯಾಪಾರಸ್ಥರನ್ನು ಕೈ ಬಿಟ್ಟು ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಸೋಮವಾರ ಮೇ26ರಂದು ಕರೆ ನೀಡಿದ್ದ ಗದಗ ಬಂದ್ಗೆ ಅವಕಾಶ ಇಲ್ಲ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್
ನೇಮಗೌಡ ಹೇಳಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಮೇ 26ರಂದು ಗದಗ ಬಂದ್ ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ತಮ್ಮ ವ್ಯಾಪಾರ, ವಹಿವಾಟುಗಳನ್ನು ನಡೆಸಬೇಕು ಎಂದು ಬಿ. ಎಸ್ ನೇಮಗೌಡ ಹೇಳಿದರು.
ಒತ್ತಾಯಪೂರ್ವಕವಾಗಿ ಬಂದ್ ಯಾರೂ ಮಾಡುವಂತಿಲ್ಲ. ಒಂದು ವೇಳೆ ಬಂದ್ ಮಾಡಲು ಪ್ರಯತ್ನಿಸಿದರೇ ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಶಾಂತಯುತ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ, ಬಂದ್ ಮಾಡಿ ಹೊರಾಟ ಮಾಡಬಾರದು ಅಂತ ಎಚ್ಚರಿಕೆ ನೀಡಿದರು.
ಬಂದ್ ಮಾಡುವುದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಬಂದ್ ಮಾಡಿದರೆ ಯಾವುದೇ ತಕರಾರಿಲ್ಲ. ಆದರೆ, ಇಲ್ಲಿ ಒಂದು ಗುಂಪು ಪರವಾಗಿ ಹಾಗೂ ಮತ್ತೊಂದು ಗುಂಪು ವಿರೋಧವಾಗಿ ಇರುವುದರಿಂದ ಶಾಂತಿ ಭಂಗ ಆಗುವ ಸಾಧ್ಯತೆ ಹೆಚ್ಚಾಗಿದೆ. ಶಾಂತಿ ಕಾಪಾಡುವ ಹಿತ ದೃಷ್ಟಿಯಿಂದ ಮೇ 26 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಾಯಂಕಾಲ 6:00 ವರೆಗೆ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಇಲಾಖೆಯಿಂದ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗಿತ್ತು. ಈಗಲೂ ಅವರು ಶಾಂತಿಯುತ ಹೋರಾಟ ಮಾಡಿದರೆ ಅನುಕೂಲ ಮಾಡಿಕೊಡುತ್ತೇವೆ. ಜಾತ್ರಾ ಸಮಯದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಸುಗಮವಾಗಿ ನಡೆಯಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ ನಗರಸಭೆ ಆ ಜಾಗ ಮಠಕ್ಕೆ ಸೇರಿದ್ದು ಎಂದು ಈಗಾಗಲೇ ತಿಳಿಸಿದೆ. ಈ ಎಲ್ಲ ವಿಚಾರ ಗಮನದಲ್ಲಿಟ್ಟುಕೊಂಡು ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಎಸ್ಪಿ ಬಿ.ಎಸ್
ನೇಮಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಎಮ್ ಬಿ ಸಂಕದ, ಡಿವೈಎಸ್ಪಿಗಳಾದ ಮರ್ತಾಜ್ ಖಾದ್ರಿ, ಸಜ್ಜನರ, ಇನ್ಸ್ಪೆಕ್ಟರ್ ಡಿ.ಬಿ ಪಾಟೀಲ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ನಿಷೇದಾಜ್ಞೆ ಜಾರಿ ಇದ್ದರೂ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಾಲ್ವರು ಡಿ.ಎಸ್.ಪಿ, ಹತ್ತಕ್ಕೂ ಹೆಚ್ಚು ಇನ್ಸ್ ಪೆಕ್ಟರ್, ಎರಡು ಕೆ. ಎಸ್. ಆರ್. ಪಿ ತುಕಡಿ, ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಎಂದಿನಂತೆ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮನವಿ ಮಾಡಲಾಗಿದೆ.