ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲಾ ಕೇಂದ್ರ, ಭಾಗ್ಯನಗರದ 1.5 ಲಕ್ಷ ಜನರ ಜೀವ, ಆರೋಗ್ಯ ಕಾಳಜಿ ಇಲ್ಲದೆ ಸರ್ಕಾರ 54 ಸಾವಿರ ಕೋಟಿ ವೆಚ್ಚ ಮಾಡಿ ಬಲ್ಡೋಟಾ ವಿಸ್ತರಣೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದು ಎನ್.ಕೆ.ಪಿ.ಎಂ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯ 51ನೇ ದಿನದ ಹೋರಾಟಕ್ಕೆ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.
ಈಗಿರುವ ಪೆಲೆಟ್ ಒಂದು ಘಟಕದಿಂದ ಆಗುತ್ತಿರುವ ಅನಾಹುತವೇ ದೊಡ್ಡದು. ಮತ್ತೆ ಸ್ಟೀಲ್-ವಿದ್ಯುತ್ ಉತ್ಪಾದನೆಗಾಗಿ ವಿಸ್ತರಣೆ ಮಾಡಲು ಮುಂದಾಗಿದ್ದು ಸರಿಯಲ್ಲ. ಕೈಗಾರಿಕೆಗಳು ಜನವಸತಿ ಇದ್ದ ಕಡೆ ಇರಕೂಡದು. ವಿಷಾನಿಲ ಉಗುಳಿ ಮಾಲಿನ್ಯ ಮಾಡುವ ಕಾರ್ಖಾನೆಗಳಂತೂ ಜನವಸತಿಯಿಂದ ದೂರವಿದ್ದು, ಬಫರ್ ವಲಯ ಇಟ್ಟುಕೊಂಡು 15-20 ಕಿ.ಮೀ. ದೂರವಿರಬೇಕು. ನಾವ್ಯಾರೂ ಕೈಗಾರಿಕಾ ವಿರೋಧಿಗಳಲ್ಲ. ಅಭಿವೃದ್ಧಿ ಕೃಷಿಯಿಂದಾದರಷ್ಟೇ ದೇಶದ ಜಿ.ಡಿ.ಪಿ ಸ್ಥಿರವಾಗಿರುತ್ತದೆ. ಕೈಗಾರಿಕೆಗಳಿಂದ ಆಗುವ ಅಭಿವೃದ್ಧಿ ಯಾವಾಗಲೂ ಬಿದ್ದು ಹೋಗಬಹುದು. ಕಾರ್ಖಾನೆ ಸ್ಥಾಪನೆಗಾಗಿ, ಜನವಸತಿಗಾಗಿ ಭೂಮಿ ಅನಗತ್ಯವಾಗಿ ಬಳಕೆಯಾಗುತ್ತಿದೆ. ಇದು ಭವಿಷ್ಯದ ಕೃಷಿಗೆ ಎದುರಾಗುವ ಅಪಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಶಾಲಾ ಶಿಕ್ಷಕರಾದ ಉದಯಕುಮಾರ್ ಎಂ.ಕೆ, ಮಲ್ಲಪ್ಪ ಕಿನ್ನಾಳ, ಶಿಕ್ಷಕಿ ವಿಜೇತಾ ಎಂ, ಬಿಂದಿಯಾ ಬಿ, ವೆಂಕಟಲಕ್ಷಿ**, ಸವಿತಾ ಸಾಕ್ರೆ, ಲಕ್ಷಿ** ವಿಜಯಮುದ್ರಿ, ಜ್ಯೋತಿ, ಪುಷ್ಪಲತಾ ಏಳುಭಾವಿ, ಸಾಹಿತಿ ಎ.ಎಂ. ಮದರಿ, ಜಿ.ಬಿ. ಪಾಟೀಲ್, ರವಿ ಕಾಂತನವರ, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತಿ** ಬಸಾಪುರ, ಮಂಜುನಾಥ ಕವಲೂರು, ಸುಂಕಮ್ಮ ಪಡಚಿಂತಿ ಹಾಗೂ ಎನ್.ಕೆ.ಪಿ.ಎಂ ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎನ್.ಕೆ.ಪಿ.ಎಂ ಹೈಸ್ಕೂಲ್ ವಿದ್ಯಾರ್ಥಿಗಳಾದ ದೀಪಕ್, ವೈಷ್ಣವಿ, ಆದಿಲ್, ಸುಮಯ್ಯ, ಇವರುಗಳು ಚಿಪ್ಕೋ, ಕೈಗಾ, ಅಪ್ಪಿಕೋ, ನರ್ಮದಾ, ಸೈಲೆಂಟ್ ವ್ಯಾಲಿ ಚಳವಳಿ ಮತ್ತು ಸಾಲುಮರದ ತಿಮ್ಮಕ್ಕ ಅವರನ್ನು ಉದಾಹರಿಸಿ ಭಾಷಣ ಮಾಡಿದರು. ಶಿಕ್ಷಕರಾದ ಬಿ.ಎಂ. ನಿತಿನ್ ಶರ್ಮಾ, ರಂಗಮ್ಮ ಮಾತನಾಡಿ, ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಈ ಕಾರ್ಖಾನೆಗಳು ಜೀವ ತೆಗೆಯುವಾಗಲೂ ಎಚ್ಚರಿಕೆ ವಹಿಸದಿದ್ದರೆ ಭವಿಷ್ಯ ಭಯಂಕರವಾಗಿದೆ. ನಾವಲ್ಲದೆ ಎಲ್ಲಾ ತಿಳಿದವರು, ಪ್ರಜ್ಞಾವಂತ ಜನರು ಮುಂದೆ ಬಂದು ಪ್ರತಿರೋಧ ತೋರಲಿ ಎಂದರು.



