ಬೆಂಗಳೂರು:- ಬಿಜೆಪಿ ಅವರು ಎಷ್ಟೇ ಹಾರಾಡಿ, ಚೀರಾಡಿದರೂ ನಾನು ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ರಾಜೀನಾಮೆ ಕೇಳುತ್ತಿರುವ ವಿಚಾರವಾಗಿ ಮಾತನಾಡಿ, ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದೆ. ಸಿಎಂ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿ ಮನವಿ ಮಾಡಿದ್ದೆ. ಇದರಂತೆ ಈಗ ಗೃಹ ಸಚಿವರು ಸಿಐಡಿ ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅವರಿಗೆ ಸಿಬಿಐ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಸಿಬಿಐ ತನಿಖೆಗೆ ಕೇಳುತ್ತಾರೆ. ವರ್ಷಗಳ ಹಿಂದೆ ಬಿಜೆಪಿ ಕೈಯಲ್ಲಿ ಎಲ್ಲಾ ಸಂಸ್ಥೆಗಳು ಇತ್ತು ಏನ್ ಮಾಡಿದರು? ಬಿಜೆಪಿ ಯಾರದ್ದೋ ತಲೆ ದಂಡ ಆಗುತ್ತೆ ಅಂತ ಕಾಯ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಯಾರ ತಲೆ ತಂಡ ಆಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಕಲಬುರಗಿಗೆ ಮುತ್ತಿಗೆ ಹಾಕೋ ಎಚ್ಚರಿಕೆ ಕೊಟ್ಟಿರುವ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಸಚಿವರು, ಕಲಬುರಗಿಗೆ ಮುತ್ತಿಗೆ ಹಾಕಲಿ ಯಾರು ಬೇಡ ಎಂದಿದ್ದಾರೆ. ನನ್ನ ವಿರುದ್ದ ಏನಾದರೂ ದಾಖಲಾತಿ ಇದ್ದರೆ ತಂದು ಕೊಡಿ. ನಿಮಗೆ ನಾಚಿಕೆ ಆಗಬೇಕು. ಯಾಕೆ ಕಲಬುರಗಿಗೆ ಮುತ್ತಿಗೆ ಹಾಕ್ತಾರೆ ಎಂದು ಪ್ರಶ್ನಿಸಿದರು.