ವಿಜಯಸಾಕ್ಷಿ ಸುದ್ದಿ, ರೋಣ: ಯುವ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾದರೆ ಮಾತ್ರ ಯುವಕರಿಗೆ ಉದ್ಯೋಗ ಸಿಗಲು ಸಾಧ್ಯ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಹೇಳಿದರು.
ಅವರು ಬುಧವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 10 ವರ್ಷಗಳಿಂದ ದೇಶದಲ್ಲಿನ ವಿದ್ಯಾವಂತ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ನೀಡಿ ಎಂದು ಯುವಕರು ಕೇಳಿದರೆ ಕೇಂದ್ರ ಸರಕಾರಕ್ಕೆ ಹಿಂದೂ-ಮುಸ್ಲಿಮ್ ಎಂಬ ಪದಗಳು ನೆನಪಾಗುತ್ತವೆ. ಇದನ್ನು ಅಕ್ಷರಸ್ಥ ಯುವಕರು ಅರಿಯಬೇಕು. ವಿದ್ಯಾವಂತ ಯುವಕರು ದೇಶ ಕಂಡ ಅಪ್ರತಿಮ ಯುವ ನಾಯಕ ರಾಹುಲ್ ಗಾಂಧಿಯವರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಆರ್ಎಸ್ಎಸ್ ಅಣತಿಯಂತೆ ನಡೆಯುತ್ತಿದೆ ಎನ್ನುವುದು ಭಾರತೀಯರಾದ ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಆರ್ಎಸ್ಎಸ್ ಯಾವತ್ತಿಗೂ ವಿದ್ಯಾವಂತ ಯುವಕರ ಪರ ನಿಂತಿಲ್ಲ ಎನ್ನುವುದು ಕೂಡ ಸತ್ಯ. ಇಂದು ದೇಶ ಆರ್ಥಿಕ ಸವಾಲನ್ನು ಎದುರಿಸುತ್ತಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಸಹ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಅಬ್ಬಿಗೇರಿ ರಸ್ತೆಯಿಂದ ಬೈಕ್ ರ್ಯಾಲಿ ನಡೆಸಿದರು. ರಾಜ್ಯಾಧ್ಯಕ್ಷರೂ ಸೇರಿದಂತೆ ಪಕ್ಷದ ಯುವ ನಾಯಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಮುಖಂಡರು ಡಾ. ಬಿ.ಆರ್. ಅಂಬೇಡ್ಕರರ ಪುತ್ಥಳಿಗೆ ಹೂಮಾಲೆ ಹಾಕಿ ನಮಸ್ಕರಿಸಿದರು.
ಶಾಸಕ ಜಿ.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಸಿದ್ದಣ್ಣ ಬಂಡಿ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ವಿವೇಕ ಯಾವಗಲ್ಲ, ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ದೀಪಿಕಾ ರೆಡ್ಡಿ, ರವಿ ಕಿರಣ, ದೀಪಕಗೌಡ, ಎಸ್.ಎಚ್. ಸೋಂಪುರ, ಆನಂದ ಚಂಗಳಿ, ಅರ್ಜುನ ಪಾಟೀಲ, ಸೋಮು ನಾಗರಾಜ, ಸಂಜಯ ದೊಡ್ಡಮನಿ, ಅಸ್ಲಂ ಕೊಪ್ಪಳ, ಅಭಿಷೇಕ ನವಲಗುಂದ, ಮುತ್ತಣ್ಣ ನವಲಗುಂದ, ಯಲ್ಲಪ್ಪ ಕಿರೇಸೂರ, ಮಲಿಕ ಯಲಿಗಾರ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ಬಿಜೆಪಿ ಪಕ್ಷದ ಕೆಲ ನಾಯಕರು ದೇಶದ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ದೇಶದ ಸಂವಿಧಾನ ಬದಲಾವಣೆ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ದೇಶದಲ್ಲಿ ಕೋಟ್ಯಾಂತರ ನಾಗರಿಕರ ಬದಕು ಸಂವಿಧಾನದ ಮೇಲೆ ನಿಂತಿದೆ. ಅದನ್ನು ಬದಲಾವಣೆ ಮಾಡುವ ತಾಕತ್ತು ಯಾರಿಗೂ ಇಲ್ಲ ಎಂದರು.



