ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಆಗಬಾರದು ಇತ್ತು, ನನಗೆ ತುಂಬಾ ನೋವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವ ನನಗಿದೆ. ಆಗ ಜನ ಉದ್ಯೋಗ ಕಳೆದುಕೊಂಡರೂ ಜಿಲ್ಲೆಯಲ್ಲಿ ಶಾಂತಿ ಇತ್ತು. ಇವತ್ತು ನಡೆದ ಘಟನೆ ಆ ಶಾಂತಿಯನ್ನು ಭಂಗಗೊಳಿಸಿದೆ ಎಂದು ಹೇಳಿದರು.
ಘಟನೆಯ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನನ್ನ ತಂಡದಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಸತ್ಯವನ್ನು ಮರೆಮಾಚಲು ಯಾರಿಗೂ ಸಾಧ್ಯವಿಲ್ಲ ಎಂದು ಡಿಕೆಶಿ ಎಚ್ಚರಿಸಿದರು. ಬಳ್ಳಾರಿಯಲ್ಲಿ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದ ಬಳಿಕ ಪರಿಸ್ಥಿತಿ ಚೇತರಿಸುತ್ತಿತ್ತು. ಹಿಂದಿನ ಕಹಿ ಘಟನೆಗಳಿಂದ ಜನ ಹೊರಬರುತ್ತಿದ್ದರು. ಈ ವೇಳೆ ಬ್ಯಾನರ್ ವಿಚಾರವಾಗಿ ಗಲಾಟೆ ಉಂಟಾಗಿರುವುದು ವಿಷಾದಕರ ಎಂದರು.
ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಕಾನೂನಾತ್ಮಕವಾಗಿ ಪರವಾನಿಗೆ ನೀಡಲಾಗಿತ್ತು. ಈ ಕಾರ್ಯಕ್ರಮ ಪಕ್ಷಾತೀತವಾಗಿರಬೇಕು ಎಂದು ಮೊದಲೇ ಸೂಚನೆ ನೀಡಲಾಗಿತ್ತು. ಸಂಸದರು ಮತ್ತು ಶಾಸಕರ ಬೆಂಬಲದೊಂದಿಗೆ ಕಾರ್ಯಕ್ರಮ ಆಯೋಜನೆಯಾಗಿತ್ತು ಎಂದು ಹೇಳಿದರು.
ಶಿಲ್ಪಿ ಯೋಗರಾಜ್ ನಿರ್ಮಿಸಿದ ವಾಲ್ಮೀಕಿ ಪುತ್ಥಳಿಯನ್ನು ಜನರು ಗೌರವದಿಂದ ಸ್ವಾಗತಿಸಿದ್ದರು. ಸೂಪ್ರೀಂ ಕೋರ್ಟ್ ಆದೇಶ ಏನೇ ಇದ್ದರೂ ಜನರ ಭಾವನೆಗೆ ಸ್ಪಂದಿಸಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಬ್ಯಾನರ್ ಖಾಸಗಿ ಜಾಗದಲ್ಲಿಲ್ಲ. ಸರ್ಕಾರದ ಜಾಗದಲ್ಲೇ ಹಾಕಲಾಗಿದೆ. ತೆಗೆಯಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ನಾನು ಯಾರನ್ನೂ ದೂಷಣೆ ಮಾಡಲು ಬಂದಿಲ್ಲ. ನಡೆದ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ ಎಂದರು. ಎಂಎಲ್ಎಗಳು ಹಾಗೂ ಬಿಜೆಪಿ ನಾಯಕ ಜನಾರ್ದನ ರೆಡ್ಡಿ, ಅವರ ಪತ್ನಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಎಲ್ಲರಿಗೂ ಗನ್ಮ್ಯಾನ್ಗಳಿದ್ದಾರೆ ಎಂದು ಹೇಳಿದ ಡಿಕೆಶಿ, ಇದರಲ್ಲಿ ಅಚ್ಚರಿಯೇನಿಲ್ಲ ಎಂದರು.
ಪೋಸ್ಟ್ಮಾರ್ಟಂ ವಿಚಾರವಾಗಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಒಂದೇ ಬಾರಿ ಮರಣೋತ್ತರ ಪರೀಕ್ಷೆ ನಡೆದಿದೆ. ಎರಡು ಬಾರಿ ಎಂದಿರುವ ಕುಮಾರಸ್ವಾಮಿಯವರ ಬಳಿ ಯಾವ ಆಧಾರವಿದೆ ಎಂದು ಪ್ರಶ್ನಿಸಿದರು.
ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಅದು ರಾಜಕೀಯ ಘನತೆಗೆ ಧಕ್ಕೆಯಾಗಿದೆ ಎಂದು ಕಿಡಿಕಾರಿದರು. ರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ಕೊಲ್ಲಲು ಯತ್ನವಾಗಿದೆ ಎಂಬ ಆರೋಪಗಳು ಸುಳ್ಳು. ಅವರ ತಪ್ಪು ಮುಚ್ಚಿಕೊಳ್ಳಲು ಈ ಆರೋಪ ಮಾಡಲಾಗುತ್ತಿದೆ ಎಂದು ಡಿಕೆಶಿ ಹೇಳಿದರು.
ಭರತ್ ರೆಡ್ಡಿ ವಿರುದ್ಧ ದ್ವೇಷ ರಾಜಕಾರಣ ನಡೆಯುತ್ತಿದೆ. ಈ ಬಗ್ಗೆ ಸತ್ಯಶೋಧನಾ ಸಮಿತಿ ಸ್ಪಷ್ಟ ವರದಿ ನೀಡಿದೆ ಎಂದು ಡಿಕೆಶಿ ತಿಳಿಸಿದ್ದಾರೆ.



