ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅ.19ರಂದು ಶ್ರೀರಾಮ ಸೇನೆ ಸಂಘಟನೆಯವರು ಕೊಟ್ಟಿರುವ ಲಕ್ಷ್ಮೇಶ್ವರ ಬಂದ್ ಕರೆಗೆ ಯಾರೂ ಬೆಂಬಲಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ದಲಿತ ಸಂಘಟನೆಯ ಮುಖಂಡ ಸುರೇಶ ನಂದೆಣ್ಣವರ ತಿಳಿಸಿದರು.
ಅವರು ಗುರುವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಕ್ಷ್ಮೇಶ್ವರ ಭಾವೈಕ್ಯತೆಯ ಕೇಂದ್ರವಾಗಿದ್ದು, ಕೆಲವರು ತಮ್ಮ ವೈಯಕ್ತಿಕ ದ್ವೇಷ, ಪ್ರತಿಷ್ಠೆಗಾಗಿ ಶಾಂತಿ ಕದಡುವ ಕಾರ್ಯ ಮಾಡುತ್ತಿದ್ದಾರೆ. ಬಂದ್ಗೆ ಬೆಂಬಲ ನೀಡುತ್ತಿರುವ ಶ್ರೀರಾಮಸೇನೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹಲವು ಅಕ್ರಮ ದಂಧೆ ಮಾಡುತ್ತಿರುವವರ ಬೆಂಬಲದೊಂದಿಗೆ ಹಿಂದೂ ಸಂಘಟನೆಯ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಮೇಲೆ ವೈಯಕ್ತಿಕ ದೋಷಾರೋಪ ಮಾಡುತ್ತಿರುವ ಖಾನಪ್ಪನವರನ್ನು ಬಂಧಿಸಬೇಕು. ಅವರಿಗೆ ಹೋರಾಟಕ್ಕೆ ಅವಕಾಶ ಕೊಡಬಾರದು. ದಕ್ಷ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಲಕ್ಷ್ಮೇಶ್ವರ ಬಂದ್ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪದ್ಮರಾಜ ಪಾಟೀಲ, ಮುದಕಣ್ಣ ಗದ್ದಿ, ನೀಲಪ್ಪ ಶೆರಸೂರಿ, ತಿಪ್ಪಣ್ಣ ಸಂಶಿ, ನಾಗೇಶ ಅಮರಾಪುರ, ಮಲ್ಲೇಶ ಪೂಜಾರ, ರಾಮು ಅಡಗಿಮನಿ ಮುಂತಾದವರಿದ್ದರು.