ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 7 ತಿಂಗಳುಗಳವರೆಗೆ ಮಾತ್ರ ಗ್ಯಾರಂಟಿಯನ್ನು ನೀಡಿದ್ದು, ಕಳೆದ 3-4 ತಿಂಗಳಲ್ಲಿ ಕೇವಲ ಮೂಗಿಗೆ ತುಪ್ಪ ಹಚ್ಚುವ ರೀತಿಯಲ್ಲಿ ಯೋಜನೆಯ ಹಣ ಬಿಡುಗಡೆ ಮಾಡುತ್ತಿದೆ ಎಂದು ಗದಗ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ಬಾರಿ ಮಹಿಳೆಯರ ಖಾತೆಗೆ 2 ಸಾವಿರ ರೂ ಜಮಾ ಮಾಡುವುದು, ಮತ್ತೆ ಎರಡು ಮೂರು ತಿಂಗಳು ಸತಾಯಿಸುವುದು ನಡೆಯುತ್ತಿದೆ. ಹೊಸದಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತೇವೆಂದು ಅರ್ಜಿ ಕರೆದು, SSP ಪೋರ್ಟಲ್ ನೆಟ್ವರ್ಕ್ ಸರಿಯಾಗಿ ನೀಡದೆ ವಿದ್ಯಾರ್ಥಿಗಳು ಅಲೆಯುವಂತೆ ಮಾಡಿದೆ. ರಾಜ್ಯ ಸರ್ಕಾರ ಈ ರೀತಿ ಭಂಡತನವನ್ನು ಬಿಟ್ಟು ರಾಜ್ಯದ ಜನಕ್ಕೆ ಮಾತು ಕೊಟ್ಟಂತೆ ಗ್ಯಾರಂಟಿಗಳನ್ನು ನೀಡಿ ಅನುಕೂಲ ಕಲ್ಪಿಸಿ ಕೊಡಬೇಕು. ಕೇವಲ ಭರವಸೆಯ ಮೂಲಕ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.