ವಿಜಯಸಾಕ್ಷಿ ಸುದ್ದಿ, ಗದಗ: ಆಧುನಿಕ ದಿನಮಾನದಲ್ಲಿ ದೈಹಿಕ ಶ್ರಮ ಕ್ಷೀಣಿಸಿ ಮಾನಸಿಕ ಶ್ರಮ ಹೆಚ್ಚಾಗುತ್ತಿದ್ದು, ದೈನಂದಿನ ವೃತ್ತಿಪರ ಜಂಜಾಟಗಳ ಮಧ್ಯೆ ಆರೋಗ್ಯದ ಕಾಳಜಿ ವಹಿಸದೇ ಇರುವುದು ಅಪಾಯಕಾರಿಯಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ವರ್ಷದ ತೋಂಟದಾರ್ಯ ಜಾತ್ರೆಯಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ರವಿವಾರ ಇಲ್ಲಿನ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ 2025ನೇ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಆರೋಗ್ಯವೇ ಮಾನವನ ನಿಜವಾದ ಸಂಪತ್ತಾಗಿದ್ದು, ನೆಮ್ಮದಿಯ ಜೀವನಕ್ಕೆ ಆರೋಗ್ಯವೇ ಅಡಿಗಲ್ಲಾಗಿದೆ. ಈ ಬಾರಿಯ ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ. ಧನೇಶ್ ದೇಸಾಯಿ ಅವರು ವಿಶೇಷ ಕಾಳಜಿ ವಹಿಸಿ ನುರಿತ ವೈದ್ಯರ ತಂಡವನ್ನೇ ಶಿಬಿರಕ್ಕೆ ಕರೆತಂದಿದ್ದು, ರೋಗಿಗಳಿಗೆ ವೈದ್ಯರೇ ದೇವರಾದರೆ ತಮಗೆ ರೋಗಿಗಳೇ ದೇವರೆಂದು ತಿಳಿದು ಸೇವೆಯನ್ನು ಧ್ಯೇಯವನ್ನಾಗಿ ಇಟ್ಟುಕೊಂಡಿರುವ ವೈದ್ಯರು ಅಭಿನಂದನಾರ್ಹರು ಎಂದರು.
ಖ್ಯಾತ ಮನೋವೈದ್ಯರಾದ ಡಾ. ಆನಂದ್ ಪಾಂಡುರಂಗಿ ತಮ್ಮ ಹಾಗೂ ತೋಂಟದಾರ್ಯ ಮಠದ ನಡುವಿನ ನಿರಂತರ 40 ವರ್ಷಗಳ ಅವಿನಾಭಾವ ಸಂಬಂಧದ ಕುರಿತು ಮಾತನಾಡಿದರು.
ಹೃದಯ ಸ್ತಂಭನವಾದಾಗ ಸಾಮಾನ್ಯ ನಾಗರಿಕರು ಯಾವ ಪ್ರಾಥಮಿಕ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತಲ್ಲದೆ, ಕಿಡ್ನಿ, ಲಿವರ್, ಕಣ್ಣು ಸೇರಿದಂತೆ ಅಂಗಾಂಗಗಳ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಜಾತ್ರಾ ಆರೋಗ್ಯ ಸಮಿತಿ ಅಧ್ಯಕ್ಷರಾದ ಡಾ. ಶರಣಬಸವೇಶ್ವರ ಆಲೂರ, ಎಲುಬು-ಕೀಲು ತಜ್ಞರಾದ ಡಾ. ಎಸ್.ಬಿ. ಶೆಟ್ಟರ್, ಡಾ. ಪ್ರಕಾಶ ಸಂಕನೂರ, ಡಾ. ಸಂದೀಪ ಕವಳಿಕಾಯಿ, ಡಾ. ಶ್ರೀಧರ ಕುರಡಗಿ, ಡಾ. ಎಸ್.ಎನ್. ಬೆಳವಡಿ, ಬಸವರಾಜ ಚನ್ನಪ್ಪಗೌಡರ, ಡಾ. ಜಯಕುಮಾರ ಬ್ಯಾಳಿ ಸೇರಿದಂತೆ ಅನೇಕ ವೈದ್ಯರು ಪಾಲ್ಗೊಂಡಿದ್ದರು.
ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಡಿಜಿಎಂ ಆಯುರ್ವೇದ ಕಾಲೇಜು, ಚಿರಾಯು ಆಸ್ಪತ್ರೆಗಳು ಜಾತ್ರಾ ಸಮಿತಿಗೆ ಸಹಯೋಗ ನೀಡಿದವು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್ ಪಟ್ಟಣಶೆಟ್ಟರ, ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ, ಉಪಾಧ್ಯಕ್ಷರಾದ ಕರವೀರಯ್ಯ ಕೋರಿಮಠ, ಪ್ರೊ. ಡಿ.ಜಿ. ಜೋಗಣ್ಣವರ, ಶೈಲಾ ಕೋಡೆಕಲ್ಲ, ಕಾರ್ಯದರ್ಶಿ ಶಿವಪ್ಪ ಕತ್ತಿ, ಸಹ ಕಾರ್ಯದರ್ಶಿ ದಶರಥ ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ಸಂಘಟನಾ ಕಾರ್ಯದರ್ಶಿ ನಾಗಪ್ಪ ಸವಡಿ, ಕೋಶಾಧ್ಯಕ್ಷ ವೀರಣ್ಣ ಗೊಡಚಿ, ಸಹ ಕೋಶಾಧ್ಯಕ್ಷ ರಾಜಶೇಖರ ಲಕ್ಕುಂಡಿ ಸೇರಿದಂತೆ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ ಹಾಗೂ ಮಠದ ಭಕ್ತರು ಪಾಲ್ಗೊಂಡಿದ್ದರು. ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಶಿಬಿರದ ಉಪಯೋಗ ಪಡೆದರು.
ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಮಾತನಾಡಿ, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ವಿಶಿಷ್ಠ ಹಾಗೂ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವ್ಯಸನ ಮುಕ್ತ ಸಮಾಜಕ್ಕೆ ಪಾದಯಾತ್ರೆ, ಆರೋಗ್ಯ ತಪಾಸಣೆ, ಕೃಷಿ ಮೇಳಗಳು ಪ್ರಮುಖವಾಗಿವೆ. ನಿಯಮಿತ ಆರೋಗ್ಯ ತಪಾಸಣೆ ಇಂದಿನ ದಿನಮಾನದ ಅಗತ್ಯವಾಗಿದ್ದು, ಅನೇಕ ವೈದ್ಯರು ಶ್ರೀಮಠದ ಮೇಲಿನ ಅಭಿಮಾನ ಹಾಗೂ ಗೌರವಕ್ಕಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದರು.