ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅಕ್ಷರ ಜ್ಞಾನದಿಂದ ಕುಟುಂಬಗಳ ಪ್ರಗತಿ ಸಾಧ್ಯ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಅಕ್ಷಯ ಪಾಟೀಲ ಹೇಳಿದರು.
ಅವರು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜನ್ಮ ದಿನಾಚರಣೆ ನಿಮಿತ್ತ ಅಬ್ಬಿಗೇರಿ ಗ್ರಾಮದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ವಿತರಿಸಿ ಮಾತನಾಡಿದರು.
ಶಹರ ಸೇರಿದಂತೆ ಗ್ರಾಮೀಣ ಭಾಗಗಳ ಮಕ್ಕಳು ಗುಣಮಟ್ಟದ ಶಿಕ್ಷಣ ಹೊಂದಬೇಕು ಎಂಬ ಮಹತ್ವದ ಉದ್ದೇಶದಿಂದ ಸರಕಾರಗಳು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿವೆ. ಪಾಲಕರು ಸಹ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಒದಗಿಸುವಲ್ಲಿ ಪ್ರಾಮಾಣಿಕತೆಯನ್ನು ಮೆರೆಯಬೇಕು ಎಂದರು.
ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ 1500 ನೋಟ್ಬುಕ್ ವಿತರಿಸಲಾಗಿತ್ತಿದೆ. ಮುಂದಿನ ದಿನಗಳಲ್ಲಿ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಎಲ್ಲ ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ ವಿತರಣೆಗೆ ಈಗಾಗಲೇ ಚಿಂತಿಸಲಾಗಿದೆ. ಅಬ್ಬಿಗೇರಿ ಸೇರಿದಂತೆ ಈಗ ನಾಲ್ಕು ಗ್ರಾಮಗಳ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ವಿತರಿಸಲಾಗುತ್ತಿದೆ. ಮಕ್ಕಳು ಸಹ ಶಿಕ್ಷಕರ ಪ್ರೀತಿಯನ್ನು ಸಂಪಾದಿಸುವ ಜೊತೆಗೆ ಒಳ್ಳೆಯ ವಿದ್ಯಾರ್ಥಿಗಳಾಗಿ ಮುಂದೆ ಬರಬೇಕು ಎಂದರು.
ಸೋಮು ನಾಗರಾಜ, ಮಹೇಶ ಕಳಸಣ್ಣವರ, ಮುತ್ತುರಾಜ ನವಲಗುಂದ ಸೇರಿದಂತೆ ಅಬ್ಬಿಗೇರಿ ಗ್ರಾಮದ ಕಾಂಗ್ರೆಸ್ ಮುಖಂಡರು, ಗ್ರಾ.ಪಂ ಸದಸ್ಯರು, ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.