ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಒಣಭೂಮಿಯೇ ಅಧಿಕವಾಗಿರುವ ಗದಗ ಜಿಲ್ಲೆಯಲ್ಲಿ ಪಾಪಸ್ ಕಳ್ಳಿಯ ಜಾತಿಗೆ ಸೇರಿದ ಅಧಿಕ ಪೋಷಕಾಂಶ ಹೊಂದಿರುವ ಡ್ರ್ಯಾಗನ್ ಫ್ರೂಟ್ ಬೆಳೆಯಲು ರೈತರು ಮುಂದಾಗಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ವೈ.ಡಿ. ಪಾಟೀಲ ಅವರು ಬಿಇಎಂಎಸ್ ಕಲಿತು ವೈದ್ಯರಾಗಿದ್ದಾರೆ. ತಮ್ಮದೇ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಸ್ವತಃ ದುಡಿಮೆಯಲ್ಲಿಯೂ ಉನ್ನತ ಸಾಧನೆ ಮಾಡಬೇಕೆಂಬ ಹಂಬಲದಿಂದ ಗೊಜನೂರ ಗ್ರಾಮದಲ್ಲಿ ಯಾರೂ ಖರೀದಿಸಲು ಆಸಕ್ತಿ ತೋರದ ಐದುವರೆ ಎಕರೆ ಬರಡು ಭೂಮಿಯನ್ನು ಖರೀದಿ ಮಾಡಿ ಕೃಷಿಯಲ್ಲಿ ತೊಡಗಿದ್ದಾರೆ.

ಕಡಿಮೆ ನೀರು ಇರುವ ಒಣಭೂಮಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿರುವ ಡ್ರ್ಯಾಗನ್ ಫ್ರೂಟ್ ಬೆಳೆಯಬೇಕೆಂಬ ಇಚ್ಛೆಯಿಂದ ವೈ.ಡಿ. ಪಾಟೀಲರು 2022ರಲ್ಲಿ ಉದ್ಯೋಗ ಖಾತ್ರಿ ಯೋಜನೆಯ 1,30,000 ರೂ. ಅನುದಾನದಲ್ಲಿ ತಮ್ಮ ಒಂದು ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ನಾಟಿ ಮಾಡಿದ್ದಾರೆ.
ಈ ಬೆಳೆ ಬೆಳೆಯಲು ಮೊದಲು ಕಲ್ಲಿನ ಕಂಬದ ಬದಿ ಸಸಿ ನಾಟಿ ಮಾಡಲಾಗುತ್ತದೆ. 1 ಕಂಬದಿಂದ 4 ಅಡಿ ಅಂತರದಲ್ಲಿ ಮತ್ತೊಂದು ಕಂಬ ಮತ್ತು 8 ಅಡಿ ಅಂತರದ ಸಾಲು, ಎಕರೆಗೆ 300 ಕಂಬಗಳು ಬರುತ್ತವೆ. ಒಂದು ಕಂಬಕ್ಕೆ 4 ಹಣ್ಣಿನ ಸಸಿಗಳಂತೆ ಒಟ್ಟು 3200 ಸಸಿ ನಾಟಿ ಮಾಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತದೆ. ನಾಟಿ ಮಾಡಿದ ವರ್ಷದ ನಂತರ ಇಳುವರಿ ಆರಂಭವಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಟಾವು ಮಾಡಬಹುದು. ಸಾವಯವ ಪದ್ಧತಿಯಲ್ಲಿ ಕೋಳಿ, ಸಗಣಿ ಗೊಬ್ಬರ ಹಾಕಿ ಬೆಳೆಯುತ್ತಿದ್ದಾರೆ.
ನಗರದ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಉತ್ತಮ ಬೆಲೆ ಹಾಗೂ ಬೇಡಿಕೆಯೂ ಇದೆ. ಪಾಟೀಲರು ಗದಗ, ಲಕ್ಷ್ಮೇಶ್ವರದ ತಮ್ಮ ಪರಿಚಿತ ಹಣ್ಣು ಮಾರಾಟಗಾರರಿಗೆ 80 ರೂ.ಗೆ ಕೆಜಿಯಂತೆ ಮಾರಾಟ ಮಾಡಿ ಕಳೆದ ವರ್ಷ 1 ಲಕ್ಷ ರೂ. ಆದಾಯ ಪಡೆದಿದ್ದಾರೆ. ಸದ್ಯ 120 ರೂ./ಕೆ.ಜಿಯಂತೆ ಮಾರಾಟ ಮಾಡುತ್ತಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪ್ರಮುಖವಾದುದಾಗಿದೆ. ಯೋಜನೆಯಲ್ಲಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಎಂದು ಭಾಗಗಳಿವೆ. ತೋಟಗಾರಿಕೆ ಬೆಳೆ, ಅರಣ್ಯ ಬೆಳೆಗಳನ್ನು ಬೆಳೆದುಕೊಳ್ಳಲು ಅವಕಾಶವಿದೆ. ರೈತರು ಸ್ವ ಇಚ್ಛೆ ಹಾಗೂ ಆಸಕ್ತಿಯಿಂದ ಯೋಜನೆಯಡಿ ದೊರೆಯುವ ಅನುದಾನ ಬಳಕೆ ಮಾಡಿಕೊಂಡು ಗೊಜನೂರ ಗ್ರಾಮದಲ್ಲಿ ವೈ.ಡಿ. ಪಾಟೀಲರಂತೆ ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಯೋಜನೆಯ ಉದ್ದೇಶವಾಗಿದೆ.
– ಕೃಷ್ಣಪ್ಪ ಧರ್ಮರ.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ.
ಗದಗ ಜಿಲ್ಲಾ ಪಂಚಾಯತಿಯು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ 1,30,000 ರೂ. ಅನುದಾನದಲ್ಲಿ ಒಂದು ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದೇನೆ. ಸರಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿಯೇ ಲಾಭ ಪಡೆದು ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದಾಗಿದೆ.
– ವೈ.ಡಿ. ಪಾಟೀಲ.
ಡ್ರ್ಯಾಗನ್ ಫ್ರೂಟ್ ಬೆಳೆಗಾರರು.




