ನರೇಗಾ ಕಾಮಗಾರಿ ಗ್ರಾಮೀಣ ಜನರಿಗೆ ಆಸರೆ

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಬೇಸಿಗೆಯಲ್ಲಿ ಕೃಷಿ ಚಟುವಟಿಕೆ ಹಾಗೂ ಇತರೆ ಕೆಲಸಗಳು ವಿರಳ. ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಗುಳೇ ಹೋಗುವುದನ್ನು ತಪ್ಪಿಸುವುದರ ಜೊತೆಗೆ ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಿಸಲು ನರೇಗಾ ಯೋಜನೆಯ ಕೊಡುಗೆ ದೊಡ್ಡದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದರು.

Advertisement

ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡವಾಡ ಗ್ರಾಮದ 2025-26ನೇ ಸಾಲಿನ ನರೇಗಾ ಸಾಮೂಹಿಕ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪಂಚಾಯತ ರಾಜ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಳತೆಗೆ ತಕ್ಕಂತೆ ಕೂಲಿ ಮೊತ್ತ ಪಾವತಿಯಾಗುವುದರಿಂದ ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಪ್ರತಿದಿನ ಎನ್‌ಎಂಎಂಎಸ್ ಮೂಲಕ ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಕೂಲಿಕಾರರು ಎರಡು ಹಾಜರಾತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಹಾಜರಾತಿ ಹಾಕಿಸಬೇಕು. ಒಂದು ವೇಳೆ ಒಂದು ಹಾಜರಾತಿ ಹಾಕಿಸದಿದ್ದರೂ ಆ ದಿನದ ಕೂಲಿ ಮೊತ್ತ ಪಾವತಿಯಾಗುವುದಿಲ್ಲ. ಎನ್‌ಎಂಆರ್‌ನಲ್ಲಿ ಹೆಸರು ಇದ್ದವರಷ್ಟೇ ಕೆಲಸದಲ್ಲಿ ಹಾಜರಾಗಬೇಕು ಎಂದು ಕೂಲಿಕಾರರಿಗೆ ಸೂಚಿಸಿದರು.

ಬೇಸಿಗೆಯಲ್ಲಿ ಅಂದರೆ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಇಲ್ಲದ ಕಾರಣ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನ ಪಡೆಯಬೇಕು ಎಂದರು. ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಗ್ರಾ.ಪಂ ಸಿಬ್ಬಂದಿ ಹಾಗೂ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.

ಪ್ರಸ್ತುತ ಬೇಸಿಗೆ ಕಾಲದಲ್ಲಿ ನರೇಗಾ ಯೋಜನೆಯಡಿ ತಾಲೂಕಿನ 19 ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಜನರಿಗೆ ಕೆಲಸ ನೀಡುವುದರ ಜೊತೆಗೆ ಆರ್ಥಿಕವಾಗಿ ಸಬಲರನ್ನಾಗಿಸಲಾಗುತ್ತಿದೆ. ಉದ್ಯೋಗ ಖಾತರಿ ಕೂಲಿ ಮೊತ್ತ ಎ.1ರಿಂದ 370 ರೂಪಾಯಿಗಳಿಗೆ ಏರಿಕೆಯಾಗಿದೆ. ಕೂಲಿಕಾರರು ಗ್ರಾಮ ಪಂಚಾಯಿತಿಗೆ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ದಿನಗಳ ಕೆಲಸ ಮಾಡಲು ಅವಕಾಶವಿದೆ ಎಂದು ವಿಶ್ವನಾಥ ಹೊಸಮನಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here