ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಪಿಡಿಒ ಜಿ.ಎಂ. ರೋಣದ ಮಾತನಾಡಿ, ಆರೋಗ್ಯ ಸಂಪತ್ತು ಎಲ್ಲಕ್ಕಿಂತ ದೊಡ್ಡದು. ಗ್ರಾಮದ ನರೇಗಾ ಕೂಲಿಕಾರರು ಆರೋಗ್ಯದ ಮಹತ್ವವನ್ನು ಅರಿತುಕೊಂಡು ಕೆಲಸದಲ್ಲಿ ತೊಡಗಬೇಕು. ಕೂಲಿ ಕಾರ್ಮಿಕರು ತಾವು ಮಾಡಿದ ಕೆಲಸದ ಸರಿಯಾದ ಅಳತೆಯ ಪ್ರಮಾಣ ದಾಖಲಿಸಿ ನರೇಗಾದ ಸದುಪಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಲ್ಲಿ ಕೂಲಿಯ ಮೊತ್ತ ಹೆಚ್ಚಳವಾಗಿದ್ದು, ವೈಯಕ್ತಿಕ ಕಾಮಗಾರಿಗಳಿಗೆ ನಮೂನೆ 6 ಅರ್ಜಿ ನೀಡಬೇಕು. ಕೂಲಿಯ ಮೊತ್ತ 370 ರೂಪಾಯಿಗಳಿಗೆ ಏರಿಕೆಯಾಗಿದೆ. ಕಾಯಕ ಬಂಧುಗಳು ಎನ್ಎಂಎಂಎಸ್ ಆ್ಯಪ್ ಹಾಜರಾತಿ ನಿರ್ವಹಣೆ ಮಾಡುತ್ತಿದ್ದು, ಅವರೊಂದಿಗೆ ಸಹಯೋಗದೊಂದಿಗೆ ಕೆಲಸ ಮಾಡಬೇಕೆಂದು ತಿಳಿಸಿದರು.
ವೈದ್ಯಧಿಕಾರಿಗಳಾದ ಡಾ. ಮರಿಗೌಡರ್ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಲಹೆ-ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಶಂಕ್ರಪ್ಪ ಶಿರನಹಳ್ಳಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಬಿಎಫ್ಟಿ ಕೆ.ಎ ನದಾಫ್, ಗ್ರಾ.ಪಂ ಸಿಬ್ಬಂದಿ, ಕಾಯಕ ಬಂಧುಗಳು, ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.