ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭರತನಾಟ್ಯ ಒಂದು ಶ್ರೇಷ್ಠ ಕಲೆ. ಭರತನಾಟ್ಯದಲ್ಲಿ ಸಾಂಸ್ಕೃತಿಕ ತಳಹದಿಯಲ್ಲೇ ಹೊಸ ಪರಿಕಲ್ಪನೆ ಮೇಳೈಸಿದಾಗ ಭರತನಾಟ್ಯ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ವಿದ್ವಾನ್ ಮಂಜುನಾಥ್ ಎಸ್.ಪುತ್ತೂರ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕಲಾ ವೈಭವ ಸಾಂಸ್ಕೃತಿಕ ವಿವಿಧೋದ್ದೇಶಗಳ ಸಂಸ್ಥೆಯಿಂದ ನಡೆದ `ನೃತ್ಯಾಮೃತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳು ಉಳಿಯಬೇಕು ಮತ್ತು ಅವು ಗುರು ಪರಂಪರೆಯಲ್ಲಿ ಮುಂದುವರೆಯಬೇಕು. ಶಾಸ್ತ್ರೀಯ ಕಲೆಗಳು ಭಾರತೀಯ ಸಂಸ್ಕೃತಿಯ ಬೇರು. ಮುಂದಿನ ಜನಾಂಗಕ್ಕೆ ಭಾರತೀಯತೆಯ ವೈಶಿಷ್ಯಪೂರ್ಣ ವಿಚಾರಧಾರೆ ತಿಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯ. ಮಕ್ಕಳನ್ನು ಇಂತಹ ವೈಶಿಷ್ಟ್ಯಪೂರ್ಣ ಕಲೆಯಲ್ಲಿ ಬೆಳೆಯುವಂತೆ ಮಾಡುವ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ, ಕಲೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮಾಜಿ ಸದಸ್ಯ ಸುನೀಲ ಮಹಾಂತಶೆಟ್ಟರ ಮಾತನಾಡಿ, ಮೊದಲು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಕಲೆ ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿಯೂ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಭರತನಾಟ್ಯವನ್ನು ನೂರಾರು ಮಕ್ಕಳಿಗೆ ಕಲಿಸುವ ಕಾರ್ಯ ಮಾಡುತ್ತಿರುವ ಭವ್ಯ ಕತ್ತಿಯವರು ಸೇವೆ ಶ್ಲಾಘನೀಯ ಎಂದರು.
ಸಭೆಯಲ್ಲಿ ಶಕ್ತಿ ಕತ್ತಿ, ವೀಣಾ ಪಾಟೀಲ, ಕಾವ್ಯಾ ವಡಕಣ್ಣವರ, ಪ್ರವೀಣ ಕತ್ತಿ, ಸಂಸ್ಥೆಯ ಅಧ್ಯಕ್ಷೆ ಭವ್ಯ ಕತ್ತಿ, ಎಚ್.ಡಿ. ನಿಂಗರಡ್ಡಿ, ವಿಜಯಾ ಯಲಿಶೂರ, ರಮೇಶ ನವಲೆ, ಜೆ.ಡಿ. ಲಮಾಣಿ, ನಿರ್ಮಲಾ ಗೌರಿ, ಬಿ.ಸಿ. ಪಟ್ಟೇದ, ಪಿ.ಎಸ್. ಸಿದ್ದನಗೌಡ್ರ, ಬಸೀರಅಹ್ಮದ ಚೌರಿ, ಈಶ್ವರ ಮೆಡ್ಲೇರಿ, ಅನ್ನದಾನಿ ವಾಲಿಶೆಟ್ಟರ, ಅಶೋಕ ಪೂಜಾರ ಮುಂತಾದವರಿದ್ದರು.