ವಿಜಯಸಾಕ್ಷಿ ಸುದ್ದಿ, ಬಾಗಲಕೋಟ: ಕಲಾವಿದರನ್ನು ಬೆಳೆಸಿದಾಗ ಕಲೆಯೂ ಉಳಿಯುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ತಾಣದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸವಾಗಿದೆ. ನನ್ನೆಲ್ಲ ಸಾಧನೆಗೆ ವಿಷ್ಣುವರ್ಧನ ಕಾರಣ. ಅವರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಬಹುಭಾಷಾ ಹಿರಿಯ ಚಲನಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.
ಅವರು ಸಿದ್ಧನಕೊಳ್ಳದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಸಿದ್ದಶ್ರೀ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2026ರ ಕಾರ್ಯಕ್ರಮದ 2ನೇ ದಿನ `ಶ್ರೀ ಸಿದ್ಧಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಿದ್ದನಕೊಳ್ಳದ ಶ್ರೀಮಠವು ನಾಡಿನಾದ್ಯಂತ ಯುವ ಕಲಾವಿದರನ್ನು ಬೆಳೆಸಿ ಪೋಷಿಸುತ್ತಿದೆ. ಅದರಲ್ಲೂ ಉತ್ತರಕರ್ನಾಟಕದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ಶ್ರೀಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ ಪ್ರದಾನ ಮಾಡಿದರು.
ರಾಷ್ಟ್ರ ಪ್ರಶಸ್ತಿಯು ರೂ.50 ಸಾವಿರ ನಗದು, ರಾಜ್ಯ ಪ್ರಶಸ್ತಿಯು ರೂ.25 ಸಾವಿರ ನಗದು, ಪ್ರಶಸ್ತಿ ಫಲಕ ಹೊಂದಿದೆ. ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಅಪ್ಪಾಸಾಹೇಬ ನಾಡಗೌಡ, ಶಿವಾನಂದ ಮುತ್ತನವರ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಂಗಮೇಶ ಹುದ್ದಾರ, ಚಲನಚಿತ್ರೋತ್ಸವ ಸಂಚಾಲಕ ಡಾ. ಪ್ರಭು ಗಂಜಿಹಾಳ, ಚಲನಚಿತ್ರೋತ್ಸವ ಸಮಿತಿಯ ವೀರೇಶ ಹಂಡಿಗಿ, ಸುನಂದಾ ಕಲಬುರ್ಗಿ, ಲೋಕೇಶ ವಿದ್ಯಾಧರ, ವೀರೇಶ ಪುರವಂತರ, ಸಂಗನಗೌಡ ಕುರುಡಗಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಇದ್ದರು. ಐಹೊಳೆಯ ಕಲಾವಿದ ವೀರೇಶ ಪುರವಂತರ ಸಹೋದರರು ನಿರ್ಮಿಸಿದ ವೇದಿಕೆಯಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಉಚಿತವಾಗಿ ಒಟ್ಟು 28 ಹೊಸ ಚಲನಚಿತ್ರಗಳ ಟೀಸರ್, ಟ್ರೇಲರ್, ಪೋಸ್ಟರ್ ಬಿಡುಗಡೆ ಮಾಡಿ, ತಂಡದ ಕಲಾವಿದರನ್ನು ಗೌರವಿಸಲಾಯಿತು.



