ವಿಜಯಸಾಕ್ಷಿ ಸುದ್ದಿ, ನರಗುಂದ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ನರಗುಂದ ವತಿಯಿಂದ ವಿನಾಯಕ ನಗರದ ಮಾರುತಿ ದೇವಸ್ಥಾನದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ಆಯುರ್ವೇದಿಕ್ ಔಷಧಿಗಳ ಮಹತ್ವ ಮತ್ತು ಪೌಷ್ಠಿಕ ಆಹಾರದ ಕುರಿತು ತಿಳುವಳಿಕೆ ಕಾರ್ಯಕ್ರಮ ಜರುಗಿತು.
ಪುರಸಭೆ ಮಾಜಿ ಸದಸ್ಯರಾದ ಶಾಂತವ್ವ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಕಾರ್ಯಕ್ರಮ ಸಂಯೋಜಕ ಮಂಜು ಗುಗ್ಗರಿ ಮಾತನಾಡಿ, 0-6 ವರ್ಷದ ಮಕ್ಕಳು, ಕಿಶೋರಿಯರು, ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಠಿಕ ಮಟ್ಟವನ್ನು ಸುಧಾರಣೆ ಮಾಡುವದು, ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ನಿಯಂತ್ರಿಸುವದು, ರಕ್ತ ಹೀನತೆಯನ್ನು ತಡೆಗಟ್ಟುವದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಮೇಲ್ವಿಚಾರಕಿ ಶಕುಂತಲಾ ಗಣಿ ಮಾತನಾಡಿ, ಪೋಷಣ್ ಮಾಸಾಚರಣೆಯನ್ನು ಪ್ರತಿ ವರ್ಷ ಸಪ್ಟೆಂಬರ್ ಮಾಹೆಯಲ್ಲಿ ಆಚರಿಸುತ್ತಿದ್ದು, ಪ್ರತಿದಿನ ಹಂತ ಹಂತವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ಆಯುಷ್ ವೈದ್ಯಾಧಿಕಾರಿ ಡಾ. ಬಸವರಾಜ ಹಳ್ಳೆಮ್ಮನವರ ಮಾತನಾಡಿ, ಆಯುಷ್ ಇಲಾಖೆಯಿಂದ ದೊರೆಯುವ ಮಂಡಿ ನೋವು, ಇಮ್ಯುನಿಟಿ ಬೂಸ್ಟರ್, ಚರ್ಮ ರೋಗ ಸೇರಿದಂತೆ ವಿವಿಧ ರೀತಿಯ ಉಚಿತ ಔಷಧಿಗಳನ್ನು ವಿತರಿಸಿ ಅದರ ಬಳಕೆ ಹಾಗೂ ಉಪಯೋಗದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಶೇಖರಪ್ಪ ಕುಟಕನಕೇರಿ, ಶಂಕ್ರಗೌಡ ಪಾಟೀಲ, ಬೀಮಪ್ಪ ಸೂರಿನ, ಪಾರ್ವತಿ ಹಿರೇಮಠ, ಮಕ್ತುಂಸಾಬ ನಾಲಬಂದ, ನೀಲವ್ವ ಹಿರೇಮಠ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಮಂಗಳಾ ಶಿಗ್ಗಾಂವಕರ, ಜಿ.ವಿ. ಕೊಣ್ಣೂರ ಕಿಶೋರಿಯರು, ಗರ್ಭಿಣಿ, ಮಕ್ಕಳು, ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.