ವಿಜಯಸಾಕ್ಷಿ ಸುದ್ದಿ, ಗದಗ: ವೀರವನಿತೆ ಒನಕೆ ಓಬವ್ವಳ ಸಮಯಪ್ರಜ್ಞೆ, ಬುದ್ಧಿವಂತಿಕೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒನಕೆ ಓಬವ್ವ ಚಿತ್ರದುರ್ಗದ ಪಾಳೇಗಾರನಾದ ಮುದ್ದುಹನುಮಪ್ಪನ ಹೆಂಡತಿಯಾಗಿದ್ದಳು. ಊಟ ಮಾಡಲು ಬಂದಿದ್ದ ತನ್ನ ಗಂಡನಿಗೆ ನೀರು ತರಲು ಹೋದಾಗ ಓಬವ್ವಳಿಗೆ ಹೈದರಾಲಿಯ ಸೈನ್ಯವು ಚಿತ್ರದುರ್ಗದ ಮದಕರಿ ನಾಯಕರ ಕೋಟೆಯ ಕಿಂಡಿಯಿಂದ ಒಳನುಸುಳುತ್ತಿರುವುದು ಕಂಡುಬಂದಿತು. ಅಂತಹ ಪರಿಸ್ಥಿತಿಯಲ್ಲಿ ತನ್ನ ಜಾಣ್ಮೆಯಿಂದಲೇ ಹೈದರಾಲಿಯ ಸೈನಿಕರನ್ನು ಮನೆಯಲ್ಲಿರುವ ಒನಕೆಯಿಂದ ಹೊಡೆದು ಉಪಾಯದಿಂದಲೇ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದಳು. ಕಷ್ಟದ ಪರಿಸ್ಥಿತಿಯಲ್ಲಿ ನಮ್ಮಲ್ಲಿರುವ ಬುದ್ಧಿಯನ್ನು ವಿವೇಚನೆಯಿಂದ ಉಪಯೋಗಿಸಿಕೊಂಡು ಸಮರ್ಥವಾಗಿ ನಿಭಾಯಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಮಾತನಾಡಿ, ಒನಕೆ ಓಬವ್ವಳ ಶೂರತನ, ಸಮಯಪ್ರಜ್ಞೆಯಂತಹ ತತ್ವಗಳನ್ನು ಎಲ್ಲ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಹಾಗೂ ಎಸ್ಎಸ್ಎಲ್ಸಿ, ಪಿಯುಸಿ, ಉನ್ನತ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್ಪಿ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ್ರ ಕೋಟೂರ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಗಣ್ಯರು, ಹಿರಿಯರು ಹಾಜರಿದ್ದರು.
ವಿರೂಪಾಕ್ಷಪ್ಪ ಗೂರನವರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿ ವಂದಿಸಿದರು. ಆರ್.ಬಿ. ಚಿನಿವಾಲರ್ ಕಾರ್ಯಕ್ರಮ ನಿರ್ವಹಿಸಿದರು.
ಹುಲಕೋಟಿಯ ಜಿ.ಸಿ.ಟಿ.ಇ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ ಉಪನ್ಯಾಸ ನೀಡುತ್ತಾ, ಒನಕೆ ಓಬವ್ವ ದಲಿತ ಸಮುದಾಯದ ವೀರವನಿತೆಯಾಗಿದ್ದಾಳೆ. ಛಲವಾದಿ ಸಮುದಾಯದ ಪಾಳೆಕಾಯಕದವರಾದ ಮುದ್ದುಹನುಮಪ್ಪನ ಹೆಂಡತಿಯೇ ಓಬವ್ವ. ಮುದ್ದುಹನುಮಪ್ಪನು ಸ್ವಾಮಿನಿಷ್ಟೆ, ಸ್ವಾಭಿಮಾನ ಹಾಗೂ ಕಾಯಕನಿಷ್ಟೆ ಹೊಂದಿದವನು. ಓಬವ್ವ ಯಾವುದೇ ಯುದ್ಧವಿದ್ಯೆಯನ್ನು ಕಲಿತವಳಲ್ಲ. ಆದರೂ ಹೈದರಾಲಿಯ ಸೈನ್ಯವು ವೀರಮದಕರಿನಾಯಕರ ಕೋಟೆಯನ್ನು ಆಕ್ರಮಿಸಿಕೊಂಡಾಗ ಉಪಾಯದಿಂದ ಕೋಟೆ ರಕ್ಷಿಸಿದ ಹಿರಿಮೆ ಓಬವ್ವಳದ್ದು. ಒನಕೆ ಓಬವ್ವ ಮನುಕುಲದ ಇತಿಹಾಸದಲ್ಲಿ ಧೀಮಂತ ಮಹಿಳೆಯಾಗಿದ್ದಾಳೆ ಎಂದು ವಿವರಿಸಿದರು.


