ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾರ್ವಜನಿಕರಿಂದ ದೂರುಗಳು ಬರದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.
ಅವರು ಬುಧವಾರ ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಮತ್ತು ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಅದಕ್ಕೆ ಜನಪ್ರತಿನಿಧಿಗಳು ಉತ್ತರ ಕೊಡಬೇಕಾಗುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿ ವರ್ಷ ಮಳೆಗಾಲದಲ್ಲಿ ನೆಟ್ಟ ಸಸಿಗಳು ಕನಿಷ್ಠ ಅರ್ಧದಷ್ಟಾದರೂ ರಕ್ಷಣೆಯಾಗಿ ಬೆಳೆಯಬೇಕು. ಇಲ್ಲದಿದ್ದರೆ ಸರ್ಕಾರದ ಹಣವೂ ಪೋಲು, ಉದ್ದೇಶವೂ ಸಾಕಾರಗೊಳ್ಳುವುದಿಲ್ಲ. ತಾಲೂಕಿನ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಕ್ರಷರ್ಗಳು ಬಂದ್ ಆಗಿದ್ದರೂ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ನಿಗಾ ವಹಿಸಿಬೇಕು ಎಂದು ಆರ್ಎಫ್ಓ ಮೇಘನಾ ಹೆಚ್ ಅವರಿಗೆ ಸೂಚಿಸಿದರು.
ಲಕ್ಷ್ಮೇಶ್ವರದಲ್ಲಿ ಕಳೆದ 3 ವರ್ಷಗಳಿಂದ ಕೆಆರ್ಐಡಿಎಲ್ನಿಂದ ನಿರ್ಮಾಣಗೊಳ್ಳುತ್ತಿರುವ ಮೌಲಾನಾ ಆಜಾದ್ ಶಾಲೆಯ ಕಟ್ಟಡ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಪಿಡಬ್ಲ್ಯೂಡಿ ಸೇರಿ ತನಿಖಾ ಸಮಿತಿಯಿಂದ ಪರಿಶೀಲಾನಾ ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕಿನಲ್ಲಿ ಅರ್ಧಕ್ಕೆ ನಿಂತ ಅಂಗನವಾಡಿ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುವ ಅಂಗನವಾಡಿಗೆ ಸ್ಥಳಾವಕಾಶ ಪಡೆದು ನರೇಗಾ ಮತ್ತು ಇಲಾಖೆಯ ಅನುದಾನದಿಂದ ಸ್ವಂತ ಕಟ್ಟಡ ನಿರ್ಮಾಣಗೊಳ್ಳಬೇಕು. ಅರ್ಧಕ್ಕೆ ನಿಂತ ಹಾಸ್ಟೆಲ್ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕು. ತಾಲೂಕಿನ ಕಟ್ಟ ಕಡೆಯ ಹಳ್ಳಿಗಳಲ್ಲಿಯೂ ನ್ಯಾಯಬೆಲೆ ಅಂಗಡಿ ಪ್ರಾರಂಭಗೊಳ್ಳುವಂತಾಗಬೇಕು. ಕಾರ್ಮಿಕ ಇಲಾಖೆಯಲ್ಲಿ ಫೇಕ್ ಕಾರ್ಡ್ ತಡೆಯಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ಮೊಟ್ಟೆ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 1 ಮೊಟ್ಟೆ ಖರೀದಿಗೆ ಸರ್ಕಾರ 5 ರೂ ಕೊಡುತ್ತದೆ. ಆದರೆ ಸದ್ಯ ಮೊಟ್ಟೆ ದರ 6 ರೂಗಿಂತ ಹೆಚ್ಚಿದೆ. ಆದಾಗ್ಯೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದಾಗ ತಾ.ಪಂ ಆಡಳಿತಾಧಿಕಾರಿ ಈ ಬಗ್ಗೆ ವರದಿ ಸಲ್ಲಿಸಲಾಗುವುದೆಂದರು.
ಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಎಂ.ವಿ. ಚಳಗೇರಿ ವಹಿಸಿದ್ದರು. ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿ ರೇವಣಪ್ಪ ಮನಗೂಳಿ, ಪಿಡಬ್ಲುಡಿ ಎಫ್.ಎಚ್. ತಿಮ್ಮಾಪುರ, ಬಿಇಓ ನಾಣಕಿ ನಾಯ್ಕ, ಹೆಸ್ಕಾಂನ ಆಂಜನಪ್ಪ ಬಿ, ಟಿಎಚ್ಓ ಸುಭಾಷ ಡಿ, ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ, ಆಹಾರ ಇಲಾಖೆ ಜಗದೀಶ ಕುರುಬರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ತಾಪಂ ಇಓ ಕೃಷ್ಣಪ್ಪ ಧರ್ಮರ ನಿರ್ವಹಿಸಿದರು.
ಶಾಸಕರ ಅನುದಾನ ಕನ್ನಡಿಯೊಳಗಿನ ಗಂಟು!
ಸಭೆಯಲ್ಲಿ ಬಿಸಿಎಂ ಇಲಾಖೆಯ ಅಧಿಕಾರಿ ಹಾಸ್ಟೆಲ್ ಕಟ್ಟಡ ದುರಸ್ತಿಗೆ ಶಾಸಕರ ಅನುದಾನ ಒದಗಿಸಿ ಎಂದಾಗ ಪ್ರತಿ ತಾಲೂಕಿಗೆ 2 ಕೋಟಿ ರೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನೇನೋ ಸರ್ಕಾರ ಮೀಸಲಿರಿಸುತ್ತದೆ. ಆದರೆ ಅನುದಾನ ಬಳಕೆಗೆ ಜಿಲ್ಲಾಧಿಕಾರಿಗಳಿಗೆ ಕ್ರಿಯಾಯೋಜನೆ ಸಲ್ಲಿಸಿದರೆ ಹತ್ತಾರು ಮಾರ್ಗಸೂಚಿಗಳು ಹಣ ಬಿಡುಗಡೆಗೆ ಅಡ್ಡಿಯಾಗುತ್ತವೆ. ಅನುದಾನ ಬಳಕೆಗೆ ಪ್ರಸ್ತಾವನೆ ಸಲ್ಲಿಸಿದರೂ ಬಿಡುಗಡೆಗೆ ವರ್ಷಗಳೇ ಕಾಯಬೇಕು. ಒಟ್ಟಿನಲ್ಲಿ ಶಾಸಕರ ಅನುದಾನ ಹೆಸರಿಗೆ ಮಾತ್ರ ಎನ್ನುವಂತೆ ಕನ್ನಡಿಯೊಳಗಿನ ಗಂಟಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.