ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿರುವ ಹನುಮಂತಗೌಡ ಕೃಷ್ಣೇಗೌಡ ಪಾಟೀಲರು ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಕೇವಲ 11 ತಿಂಗಳ ಅವಧಿಯಲ್ಲಿ ಹಲವು ಮಹತ್ತರ ನೀತಿ-ನಿರೂಪಣೆ, ಸುಧಾರಣಾ ಕ್ರಮಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಂಡರು ಎಂಬುದು ಸುಲಭಕ್ಕೆ ಗೋಚರಿಸುವಂಥದ್ದು.
ಕಾನೂನು ಓದುವುದರಿಂದ ಸಾರ್ವಜನಿಕ ಜೀವನದಲ್ಲಿ ಅನುಕೂಲವಾಗುತ್ತದೆ ಎನ್ನುವ ಅರಿವಿದ್ದುದರಿಂದ ಹುಬ್ಬಳ್ಳಿಯ ಜೆಎಸ್ಎಸ್ ಸಕ್ರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪೂರೈಸಿದ ಎಚ್.ಕೆ ಪಾಟೀಲರು ತಂದೆ ಕೆ.ಎಚ್. ಪಾಟೀಲ್ ಕಾನೂನು ಕಲಿತವರಲ್ಲ. ಆದರೆ, ಆ ಪರಿಣತಿಯನ್ನು ಗಳಿಸಿಕೊಂಡಿದ್ದರು.
ವಕೀಲರಿಗಿಂತಲೂ ಹೆಚ್ಚಿನ ಕಾನೂನು ಜ್ಞಾನ ತಂದೆಯವರಿಗೆ ಇದೆ ಎಂಬ ಮಾತುಗಳು ಚರ್ಚೆಯ ಸಂದರ್ಭದಲ್ಲಿ ಬರುತ್ತಿದ್ದವು. ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಅವರ ಮೇಲೆ ಪ್ರಭಾವ ಬೀರಿದ್ದವು.
ರಾಜಕಾರಣದ ಮೇಲೆ ಇದ್ದ ಆಸಕ್ತಿ, ಅವರ ತಂದೆಯವರ ರಾಜಕೀಯ ಹಿನ್ನೆಲೆ ಹಾಗೂ ಅಂದಿನ ರಾಜಕೀಯ ಸನ್ನಿವೇಶದ ಜೊತೆಗೆ ಗೆಳೆಯರೆಲ್ಲರೂ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಬೇಕು ಎಂದು ಅಪೇಕ್ಷೆ ಪಟ್ಟಿದ್ದರಿಂದ 1984ರಲ್ಲಿ ಪದವೀಧರ ಕ್ಷೇತ್ರದ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿ ಶ್ರೀಮಂತರು ಒಂದು ಕಡೆ, ಸಮಾನತೆ ಬಯಸುವವರು ಮತ್ತೊಂದು ಕಡೆಯಾಗಿದ್ದರು. ಇವೆಲ್ಲವೂ ರಾಜಕೀಯ ಪ್ರವೇಶಕ್ಕೆ ಎಚ್.ಕೆ. ಪಾಟೀಲರ ಮೇಲೆ ಪ್ರಭಾವ ಬೀರಿದ್ದವು.
ಹುಲಕೋಟಿ ಎಂಬ ಗ್ರಾಮದಿಂದ ರಾಷ್ಟ್ರದ ರಾಜಧಾನಿ ದಿಲ್ಲಿಯವರೆಗೆ ಸಹಕಾರಿ ಹೆಜ್ಜೆಗಳನ್ನು ಮೂಡಿಸಿ ಶ್ರೇಷ್ಠ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಎಚ್.ಕೆ. ಪಾಟೀಲರು ನಮ್ಮ ಕಣ್ಮುಂದಿನ ಹೆಮ್ಮೆಯ ಸಾಧಕರು. ಅವರು ಮೇಲ್ಮನೆಯಲ್ಲಿ ಮಾತನಾಡುತ್ತಿದ್ದ ವೈಖರಿ ಹಾಗೂ ಸಚಿವರಾಗಿದ್ದ ಸಂದರ್ಭದಲ್ಲಿ ಕೆಳಮನೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಂತಹವರಿಗೂ ಆದರ್ಶಪ್ರಾಯವಾಗಿದೆ.

ಒಂದೆಡೆ ಎಚ್.ಕೆ. ಪಾಟೀಲ್ ಅವರಲ್ಲಿನ ವಿವೇಚನೆ, ಯೋಚನೆ, ಯೋಜನೆ ಜೊತೆಗೆ ಅವರಲ್ಲಿನ ದೂರದೃಷ್ಟಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲಿರಬೇಕಾದ ಅಧ್ಯಯನಶೀಲತೆ ಹಾಗೂ ಸೃಜನಶೀಲತೆ ಇವರ ಗುಣಸ್ವಭಾವ. ಯಾವುದೇ ಒಂದು ವಿಷಯ ಮಂಡನೆ ಮಾಡುವಾಗ ಅದರ ಆಳಕ್ಕಿಳಿದು ಅಧ್ಯಯನ ಮಾಡಿ, ಒಂದು ವೇಳೆ ತಮಗೆ ಗೊತ್ತಿರದ ವಿಷಯವಿದ್ದರೂ ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆದುಕೊಳ್ಳುವ ಸ್ವಭಾವ ಎಚ್.ಕೆ. ಪಾಟೀಲರದ್ದು.
ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ, ಕರ್ನಾಟಕ ಸರ್ಕಾರವು 2015-16ನೇ ಸಾಲಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ)ಯ ಪರಿಣಾಮಕಾರಿ ಬಳಕೆಗಾಗಿ ಕೇಂದ್ರವು ಸ್ಥಾಪಿಸಿದ ಇ-ಪ್ರಶಸ್ತಿಯನ್ನು ಪಡೆದುಕೊಂಡಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 24 ಏಪ್ರಿಲ್ 2017ರಂದು ಲಖನೌದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕರ್ನಾಟಕ ಸರ್ಕಾರದ ಅವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು, 2014-15 ರಿಂದ 2017-18 ರವರೆಗೆ 4 ವರ್ಷಗಳ ಕಾಲ ಸತತವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಇವರು ರಾಜ್ಯ ರಾಜಕಾರಣದಲ್ಲಿಯೇ ವೈಶಿಷ್ಟ್ಯತೆಯನ್ನು ಮೆರೆದಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ, ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗದಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಕನಸಿನೊಂದಿಗೆ, ಗದಗ-ಬೆಟಗೇರಿ ಅವಳಿ ನಗರವನ್ನು ಹೈಟೆಕ್ ಸಿಟಿಯನ್ನಾಗಿಸುವ ಮಹೋನ್ನತ ಧ್ಯೇಯವನ್ನು ಎಚ್.ಕೆ. ಪಾಟೀಲರು ಹೊಂದಿದ್ದಾರೆ. ಅವರ ಈ ಜನಪರ ಯೋಜನೆಯು ಶೀಘ್ರವಾಗಿ ಈಡೇರಲಿ.
– ರಾಘವೇಂದ್ರ ಪಾಲನಕರ.
ಸಾಮಾಜಿಕ ಕಾರ್ಯಕರ್ತರು, ಗದಗ.



