ಬೆಳಗಾವಿ:- ಕನ್ನಡ ರಾಜ್ಯೋತ್ಸವವಾದ ಇಂದು ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗಡಿಯಲ್ಲಿ ಶಿವಸೇನೆ ಕಾರ್ಯಕರ್ತರು ಉದ್ದಟತನ ಪ್ರದರ್ಶಿಸಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಉದ್ದವ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ಹಾಗೂ ಅವರ ತಂಡ ಸುಮಾರು 50 ಜನರ ಗುಂಪಿನೊಂದಿಗೆ ಗಡಿ ದಾಟಿ ಕರ್ನಾಟಕದ ನಿಪ್ಪಾಣಿ ಭಾಗಕ್ಕೆ ನುಗ್ಗಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ.
ಕರ್ನಾಟಕ ಗಡಿಯಲ್ಲೇ ಪೊಲೀಸರು ಕಟ್ಟೆಚ್ಚರದಿಂದ ನಿಂತು, ಮಹಾರಾಷ್ಟ್ರದ ಭಾಗದಲ್ಲೇ ಅವರ ನುಗ್ಗಾಟಕ್ಕೆ ಬ್ರೇಕ್ ಹಾಕಿದ್ದಾರೆ. ಶಿವಸೇನೆಯ ಈ ಅಹಂಕಾರಿ ನಡೆಗೆ ಪ್ರತಿಯಾಗಿ ಮಹಾರಾಷ್ಟ್ರ ಪೊಲೀಸರೇ ದೇವಣೆ ಮತ್ತು ಅವರ ತಂಡವನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.
ಈ ಘಟನೆಯಿಂದ ಗಡಿಭಾಗದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾದರೂ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ರಾಜ್ಯೋತ್ಸವದ ಸಂಭ್ರಮದ ದಿನವೇ ಇಂತಹ ಉದ್ದಟತನದಿಂದ ಜನರ ಆಕ್ರೋಶ ಹೆಚ್ಚಾಗಿದೆ.


