ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾ ಘಟಕದ ವತಿಯಿಂದ ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆ. 12ರಿಂದ ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಹತ್ತು ದಿನಗಳ ಕಾಲಾವಕಾಶ ನೀಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.
ರೈತರ ಸಂಘದ ಗದಗ ಜಿಲ್ಲಾ ಧ್ಯಕ್ಷ ಶಂಕರಗೌಡ ಮಾ.ಜಯನಗೌಡ್ರ ಮಾತನಾಡಿ, ರೈತರ ಅರಣ್ಯ ಭೂಮಿಯ ಅಕ್ರಮವನ್ನು ಸಕ್ರಮಗೊಳಿಸುವಂತೆ ರೈತರು ನೀಡಿದ ಅರ್ಜಿಗಳನ್ನು ಪುನಃ ಪರಿಶೀಲಿಸಿ ಅರ್ಜಿದಾರ ರೈತರಿಗೆ ಹಕ್ಕುಪತ್ರ ವಿತರಿಸಲು ಆದೇಶಿಸಬೇಕು. ಮುಂಡರಗಿ ತಾಲೂಕಿನ ತಾಮ್ರಗುಡಿ ಗ್ರಾಮದ ಕೆರೆ ಒಡ್ಡು ಒಡೆದು ರೈತರ ಜಮೀನುಗಳಿಗೆ ಹಾನಿಯಾದ ಪರಿಹಾರವನ್ನು ನೀಡಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ 2022-23 ಮತ್ತು 2024-25ರಲ್ಲಿ ಬೆಳೆ ಪರಿಹಾರ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಗದಗ ಜಿಲ್ಲೆಯ ಸಿಂಗಟಾಲೂರ ಹುಲಿಗುಡ್ಡದ ಏತನೀರಾವರಿ ಯೋಜನೆ ಸಂಪೂರ್ಣ ನೀರಾವರಿ ಆಗಬೇಕು.
45ರ ಅರಭಾವಿ-ಚಳ್ಳಿಕೇರಿ ರಾಜ್ಯ ಹೆದ್ದಾರಿಗೆ ಪಾಪನಾಶಿ ಹತ್ತಿರ ಇರುವ ರಾಜ್ಯದ ಟೋಲ್ಗೇಟ್ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರಿಗೆ ಮತ್ತು ರೈತರಿಗೆ ತೊಂದರೆಯಾಗುತ್ತಿದೆ. ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ ಬಸ್ ಪ್ರಯಾಣದಲ್ಲಿ 8 ರೂ ಹೆಚ್ಚಿಗೆ ಮಾಡಿದ್ದನ್ನು ರೈತ ಸಂಘ ಮತ್ತು ಇತರೆ ಸಂಘಟನೆಗಳಿ ಸುತ್ತಮುತ್ತಲಿನ ಗ್ರಾಮಸ್ಥರು ತೀವೃವಾಗಿ ವಿರೋಧಿಸುತ್ತಿದ್ದು, ಸರ್ಕಾರ ಕೂಡಲೇ ಟೋಲ್ಗೇಟ್ ತೆರವುಗೊಳಿಸಬೇಕು.
ತುಂಗಭದ್ರಾ ಡ್ಯಾಮ್ನ ಭೂಸ್ವಾಧೀನತೆ ಇದ್ದು, ಈ ಜಮೀನಿನಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟುತ್ತಿದ್ದಾರೆ. ಕೂಡಲೇ ಸರ್ಕಾರ ತನಿಖೆ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳನ್ನು 10 ದಿನಗಳ ಒಳಗಾಗಿ ಈಡೇರಿಸುವ ತಮ್ಮ ಭರವಸೆಯ ಮೇಲೆ ನಮ್ಮ ಸಂಘದ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್.ಡಿ. ದೊಡ್ಡಮನಿ, ಮಂಜುನಾಥ ಭೋವಿವಡ್ಡರ, ಶಿವಯೋಗಯ್ಯ ಸಸಿಮಠ, ಮಂಜಪ್ಪ ಬುರ್ಲಿ, ಈರಣ್ಣ ಅಂಗಡಿ, ಮಂಜುನಾಥ ರಾಮನಗೌಡ, ಬಸವರಾಜ ನವಲಗುಂದ, ಬಸವರಾಜ ವಡ್ಡರ, ಗಿರೀಶ ಕುರ್ತಕೋಟಿ ಸೇರಿದಂತೆ ಹಲವು ಗ್ರಾಮಗಳ ರೈತರು ಉಪಸ್ಥಿತರಿದ್ದರು.
ರೈತರ ಪಂಪ್ಸೆಟ್ಗಳ ಖಾಸಗೀಕರಣವನ್ನು ಸರ್ಕಾರ ಕೈಬಿಡಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿರುವ ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಕಳಸಾಪೂರ ಮತ್ತು ಬೆಳಧಡಿ ಮಧ್ಯಂತರ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು ಮತ್ತು ಪಶು ಆಸ್ಪತ್ರೆಯನ್ನು ಪ್ರಾರಂಭಿಸಬೇಕು ಇತ್ಯಾದಿ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.