ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮನುಷ್ಯರಾಗಿ ಜೀವಿಸುವುದಕ್ಕೆ ಪ್ರಾಮುಖ್ಯತೆ ಇದೆ. ಸಮಾಜದಲ್ಲಿ ನಾವೂ ಬದುಕಿ ಉಳಿದವರೂ ಬದುಕಲು ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಗಣೇಶೋತ್ಸವದಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಹಮ್ಮಿಕೊಂಡಿರುವ ಮುಂಡರಗಿ ತಾಲೂಕು ಪಂಚಾಯಿತಿಯ ನಡೆ ಅನುಕರಣೀಯ ಎಂದು ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.
ಅವರು ಮುಂಡರಗಿ ತಾಲೂಕು ಪಂಚಾಯಿತಿ ಆವರಣದಲ್ಲಿ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತದಾನ ಜೀವ ಉಳಿಸುವ ಕಾರ್ಯವಾಗಿದ್ದು, ತುರ್ತು ಸಂದರ್ಭಗಳಲ್ಲಿ ಮತ್ತು ಶಸ್ತçಚಿಕಿತ್ಸೆಗಳ ಸಮಯದಲ್ಲಿ ರಕ್ತದ ಅಗತ್ಯವಿರುವವರಿಗೆ ನೆರವಾಗುತ್ತದೆ. ಒಂದು ಬಾರಿ ರಕ್ತದಾನ ಮಾಡುವ ಮೂಲಕ ನೀವು ಹಲವಾರು ಜನರ ಜೀವ ಉಳಿಸಬಹುದು ಮತ್ತು ಇದರಿಂದ ದಾನಿಗಳಿಗೂ ಹಲವು ಆರೋಗ್ಯ ಲಾಭಗಳಿವೆ. ಅದೇ ರೀತಿ ಅಂಗಾಂಗ ದಾನಗಳನ್ನು ಮಾಡಲು ಸಹ ನಾವು ಮುಂದಾಗಬೇಕು. ಇದರಿಂದ ನಾವಿಲ್ಲವಾದಾಗಲೂ ಜೀವಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಬಿ.ಎಲ್. ಕೊಪ್ಪಳ, ಸಹಾಯಕ ಕಾರ್ಯದರ್ಶಿ ಎಸ್.ಎಸ್. ಕಲ್ಮನಿ, ಮುಂಡರಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ತಾಲೂಕಾ ಯೋಜನಾಧಿಕಾರಿ ಪ್ರವೀಣ ಗೋಣೆಮ್ಮನವರ, ಗ್ಯಾರಂಟಿ ಸಮಿತಿ ಸದಸ್ಯ ವಿಶ್ವನಾಥ ಪಾಟೀಲ, ತಾಲೂಕಾ ಆರೋಗ್ಯ ಸುರಕ್ಷತಾ ಸಮಿತಿ ಸದಸ್ಯ ಯಲ್ಲಪ್ಪಗೌಡ ಕರಮುಡಿ ಮುಂತಾದವರಿದ್ದರು.