ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ. ಪಾರಂಪರಿಕ ಲಕ್ಕುಂಡಿ ಕ್ಷೇತ್ರದ ಅನ್ವೇಷಣೆ ಮೂಲಕ ಇತಿಹಾಸ ತಿಳಿದು, ಲಭ್ಯವಿರುವ ಪ್ರಾಚ್ಯ ವಸ್ತುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತ ಲಕ್ಕುಂಡಿ ಇವರುಗಳ ಸಹಯೋಗದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ನಿಮಿತ್ತ ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಹಮ್ಮಿಕೊಂಡಿದ್ದ ತರಬೇತಿ  ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಚಿವರು, ಅಧಿಕಾರಿಗಳು, ಸ್ವಯಂ ಸೇವಕರನ್ನು ಒಳಗೊಂಡ ತಂಡದ ಜೊತೆಗೆ ಈಗಾಗಲೇ ಗುರುತು ಮಾಡಿರುವ ಮನೆಗಳಿಗೆ ಹೋಗಿ ಪ್ರಾಚ್ಯ ವಸ್ತುಗಳನ್ನು ನೀಡುವ ಬಗ್ಗೆ ರಶೀದಿ ನೀಡಿ ಪುರಾತನ ವಸ್ತಗಳ  ಭಾರದ ಆಧಾರದ ಮೇಲೆ ವಸ್ತುಗಳನ್ನು ಪಾಲಕಿಯಲ್ಲಿ, ಟ್ಯಾಕ್ಟರ್‌ಗಳಲ್ಲಿ ಸಂಗ್ರಹಿಸುವ ಕಾರ್ಯವಾಗಬೇಕು ಎಂದು ನುಡಿದರು.

ಈ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ವಿದ್ಯಾರ್ಥಿ ಜೀವನದಲ್ಲಿಯೇ ಅತ್ಯುತ್ತಮ ಪ್ರಯೋಗಿಕ ಮತ್ತು ಉತ್ತಮ ಅನುಭವ ನೀಡುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಸಹಕಾರ ನೀಡಿ ಪ್ರಾಚ್ಯಾವಶೇಷಗಳ ಅನ್ವೇಷಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಕರಾದ ಸ್ಮಿತಾ ಅವರು ಮಾತನಾಡಿ, ರಾಜರ ಕಾಲದಲ್ಲಿ ಲಕ್ಕುಂಡಿಯಲ್ಲಿ ಠಂಕಸಾಲೆ ಇತ್ತು ಎಂದು ಶಾಸನಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಲಕ್ಕುಂಡಿಯಲ್ಲಿ ಮಹತ್ವ ಹಾಗೂ ಮೌಲ್ಯಯುತವಾದ ಶಾಸನ, ನಾಣ್ಯ, ಸ್ಮಾರಕದ ಸಂಪತ್ತಿದೆ. ಮಣ್ಣಿನಲ್ಲಿ ಹುದುಗಿಹೋದ ಸ್ಮಾರಕಗಳನ್ನು ಮರಳಿ ತೆಗೆಯುವ ಕಾರ್ಯ ಆಗಬೇಕು. ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ ಕಣ್ಣಿಗೆ ಕಾಣುವ ಶಾಸನ, ಶಿಲ್ಪಕಲೆ, ದೇವಾಲಯ ಕುರಿತು ಸ್ಥಳೀಯರಿಗೆ ಇರುವ ಮಾಹಿತಿ ಅವರ ಆಚರಣೆಯನ್ನು ದಾಖಲಿಸಿ, ಪ್ರತಿಯೊಬ್ಬರ ಸಹಕಾರದಿಂದ ಲಕ್ಕುಂಡಿಯಲ್ಲಿ ಲಭ್ಯವಾಗುವ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯ ಮಾಡಿ, ಜಾಗತಿಕವಾಗಿ ಲಕ್ಕುಂಡಿಯ ಬಗ್ಗೆ ಗಮನ ಸೆಳೆದು ವಿಶ್ವದ ಪ್ರಸಿದ್ಧ ತಾಣವಾಗಿ ಮಾಡವ ಕಾರ್ಯವಾಗಬೇಕು ಎಂದು ಹೇಳಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಶರಣು ಗೋಗೇರಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಅಧ್ಯಕ್ಷರಾದ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳ ನೇತೃತ್ವದಲ್ಲಿ ಜರುಗುವ ಪ್ರಾಚ್ಯಾವಶೇಷಗಳ ಅನ್ವೇಷಣೆ ತಂಡಗಳ ವಿವರ ನೀಡಿ, ತಂಡದ ಕಾರ್ಯ ಹಾಗೂ ರೂಪುರೇಷೆ ತಿಳಿಸಿ ಸಂಪೂರ್ಣ ಪ್ರಾಚ್ಯಾವಶೇಷಗಳ ಅನ್ವೇಷಣೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ, ಸ್ವಯಂ ಸೇವಕರು, ಪ್ರವಾಸಿ ಗೈಡ್, ಇತಿಹಾಸ ಉಪನ್ಯಾಸಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here