ಬೆಂಗಳೂರು:- ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ನಮ್ಮ ರಕ್ಷಣಾ ಪಡೆಗಳ ಧೈರ್ಯದ ಪ್ರತೀಕ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, “ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಕೂಡ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಚರ್ಚಿಸಿದೆ. ನಾವು ಕೂಡ ತಡಮಾಡದೇ ಸಂಸತ್ತಿನಲ್ಲಿ ಈ ಕುರಿತು ಚರ್ಚಿಸಬೇಕು” ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
“ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ನಮ್ಮ ರಕ್ಷಣಾ ಪಡೆಗಳ ಧೈರ್ಯದ ಪ್ರತೀಕ. ಇದರ ಯಶಸ್ಸಿನ ಕುರಿತು ದೇಶದ ಜನತೆಗೆ ಸಂಪೂರ್ಣ ಮಾಹಿತಿ ಸಿಗಬೇಕು. ಅದಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಮೂಲಕ, ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ಮಾಡಿಕೊಡಬೇಕು” ಎಂದು ಎಐಸಿಸಿ ಅಧ್ಯಕ್ಷರು ಆಗ್ರಹಿಸಿದರು. “ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಗ್ಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಯಾವುದು ನಿಜ, ಯಾವುದು ನಿಜವಲ್ಲ ಎಂಬ ಗೊಂದಲ ಜನರಲ್ಲಿ ಮೂಡಿದೆ. ಈ ಗೊಂದಲವನ್ನು ಹೋಗಲಾಡಿಸುವ ಮತ್ತು ಜನತೆಗೆ ಸತ್ಯ ತಿಳಿಸುವ ತನ್ನ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿರ್ವಹಿಸಬೇಕು” ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
“ರಾಷ್ಟ್ರದ ವಿಷಯಗಳಲ್ಲಿ ಒಗ್ಗಟ್ಟು ಇರಬೇಕು. ನಾವು ನಮ್ಮ ಎದುರಾಳಿಗಳನ್ನು ಸೋಲಿಸುವತ್ತ ಗಮನಹರಿಸಬೇಕು. ದೇಶಾದ್ಯಂತದ ಎಲ್ಲಾ ನಾಯಕರು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಮೌನವಾಗಿರಬೇಕು. ಅದರ ಬಗ್ಗೆ ಮಾತನಾಡುವ ಮೊದಲು ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಉತ್ತಮ” ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
“ಇಡೀ ರಾಷ್ಟ್ರವು ನಮ್ಮ ಸಶಸ್ತ್ರ ಪಡೆಗಳ ಜೊತೆ ನಿಂತಿದೆ. ಪ್ರಧಾನಿ ಮೋದಿ ಸ್ವಯಂ ವೈಭವೀಕರಣ ಭಾಷಣಗಳನ್ನು ಮಾಡಬಾರದು. ನಾವು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಕುರಿತು ಚರ್ಚಿಸೋಣ. ಪಾಕಿಸ್ತಾನ ಕೂಡ ತನ್ನ ಸಂಸತ್ತನ್ನು ಕರೆದು ಚರ್ಚೆಗಳನ್ನು ನಡೆಸುತ್ತಿದೆ. ನಮ್ಮಲ್ಲಿ ಯಾರೂ ರಾಷ್ಟ್ರದ ವಿರುದ್ಧ ಮಾತನಾಡುವುದಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಸ್ಪಷ್ಟಪಡಿಸಿದರು.