ಗದಗ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರಿಗೆ ಶಕ್ತಿ ತುಂಬಲು ಇಂದು ರಾಜ್ಯದ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅದರಂತೆ ಗದಗ ಜಿಲ್ಲೆಯ ನರಗುಂದ ಅಹಲ್ಹೆ ಸುನ್ನತುಲ್ ಜಮಾತ್ ಶಾಹಿ ಫತ್ತೇ ಮಜೀದ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಬಳಿಕ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಸೈನಿಕರಿಗೆ ಮುಸ್ಲಿಂ ಬಾಂಧವರು ಗೌರವ ಸಲ್ಲಿಸಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರು ಮೂಲಕ ಉಗ್ರರ ಮಟ್ಟ ಹಾಕುವ ಕಾರ್ಯಚರಣೆ ಶ್ಲಾಘನೀಯವಾಗಿದ್ದು, ದೇಶದ ಹೆಮ್ಮೆಯ ಮೂರು ಸೇನೆಗಳು ಪಾಕಿಸ್ತಾನದ 9 ಕಡೆ ಏಕ ಕಾಲಕ್ಕೆ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದೆ.
ಜಾಗತಿಕ ಮಟ್ಟದಲ್ಲಿ ಪ್ರಶಂಸೇ ವ್ಯಕ್ತವಾಗಿದ್ದು, ಉಗ್ರ ಸಂಹಾರಕ್ಕೆ ಜೀವದ ಹಂಗು ತೊರೆದು ಎದೆ ತಟ್ಟಿ ನಿಂತ ಸೈನಿಕರ ಕಾರ್ಯ ಶ್ಲಾಘನೀಯ, ಇನ್ನೊಮ್ಮೆ ಭಾರತ ದೇಶದ ತಂಟೆಗೆ ಬಂದರೆ ಸೇನೆಯ ನಿರ್ಣಯ ಇದಕ್ಕಿಂತ ಕಠೋರವಾಗಿರಲಿದೆ ಎಂದು ಮುಸ್ಲಿಂ ಬಾಂಧವರು ನುಡಿದಿದ್ದಾರೆ.
ಇನ್ನು ಶುಕ್ರವಾರದ ಸಾಮೂಹಿಕ ನಮಾಜ್ನಲ್ಲಿ ಶಾಹಿ ಫತ್ತೇ ಮಜೀದ್ ಮೌಲಾನ ಆಝಮ್ ಸರಖಾಜಿ, ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಜನಾಬ್ ಐ.ಪಿ.ಚಂದೂನವರ ಸೇರಿ ಹಲವಾರು ಸದಸ್ಯರು ಸೇರಿದಂತೆ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ದಾರೆ.