ಬೆಂಗಳೂರು:- ಬಾಪೂಜಿನಗರದ ಮನೆಯೊಂದರಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಪೊಲೀಸ್ ಎಸ್ಕಾರ್ಟ್ ವಾಹನ ಚಾಲಕ ನೇಣಿಗೆ ಶರಣಾದ ಘಟನೆ ಜರುಗಿದೆ.
ಶರಣಪ್ಪ ರಾಮಗೋಳ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮಾಹಿತಿ ತಿಳಿದ ಬಳಿಕ ಬ್ಯಾಟರಾಯನಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೇದೆ ಶರಣಪ್ಪ ರಾಮಗೋಳ್ ಕಲಬುರ್ಗಿ ಮೂಲದವರಾಗಿದ್ದು, ಕವಿಕಾ ಲೇಔಟ್ ನಲ್ಲಿ ಪತ್ನಿ, ಮಕ್ಕಳು ಹಾಗೂ ಸಹೋದರನ ಜೊತೆ ವಾಸವಿದ್ದರು. ಸಿಎಆರ್ನಲ್ಲಿ ಮುಖ್ಯಪೇದೆ ಆಗಿದ್ದ ಶರಣಪ್ಪ, ಕಳೆದ 5 ವರ್ಷದಿಂದ ಆರ್.ಅಶೋಕ್ ಅವರ ಎಸ್ಕಾರ್ಟ್ ವಾಹನದ ಚಾಲಕರಾಗಿದ್ದರು. ಮೃತರಿಗೆ ಕ್ರಮವಾಗಿ 2, 4 ವರ್ಷದ 2 ಮಕ್ಕಳಿದ್ದಾರೆ.
ನಿನ್ನೆ ಪತ್ನಿ ಕೆಲಸಕ್ಕೆ ಹೋಗಿದ್ದು, ಮಕ್ಕಳನ್ನು ಕಲಬುರಗಿಗೆ ಕಳಿಸಿದ್ರು. ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಶರಣಪ್ಪ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.