ವಿಜಯ ಸಾಕ್ಷಿ ಸುದ್ದಿ, ಹರಪನಹಳ್ಳಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರನ್ನು ಜಿಲ್ಲಾ ಕಮಿಟಿಯಲ್ಲಿ ನೇಮಿಸಿಕೊಂಡಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಗಮನಕ್ಕೆ ತರದೆ ತಮ್ಮ ಇಚ್ಛೆಯನುಸಾರ ಮಂಡಲ ಅಧ್ಯಕ್ಷರ ನೇಮಕ ಮಾಡಿಲಾಗಿದೆ. ಕೂಡಲೇ ಇವರನ್ನು ಉಚ್ಛಾಟಿಸುವಂತೆ ಕಾರ್ಯಕರ್ತರ ಒತ್ತಾಯವಿದೆ ಎಂದು ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ತಿಳಿಸಿದರು.
ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮಂಡಲ ಅಧ್ಯಕ್ಷ ಹಾಗೂ ಜಿಲ್ಲಾ ಕಮಿಟಿಯ ವಿವಿಧ ಹುದ್ದೆಗಳ ನೇಮಕಾತಿ ವಿರೋಧಿಸಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಹಾಗೂ ಪಕ್ಷದ ಕಾರ್ಯಕರ್ತರ ಗಮನಕ್ಕೆ ತರದೇ ಮಂಡಲಾಧ್ಯಕ್ಷರನ್ನು ನೇಮಕ ಮಾಡಿದ್ದು, ಕೂಡಲೇ ಇವರ ನೇಮತಾತಿಯನ್ನು ರದ್ದುಗೊಳಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾಧ್ಯಕ್ಷರ ಬಳಿಗೆ ಕಾರ್ಯಕರ್ತರ ನಿಯೋಗ ತೆರಳಿ ರದ್ದತಿಗೊಳಿಸುವಂತೆ ಮನವರಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಆರ್ ಲೋಕೇಶ್, ಕಲ್ಲೇರ ಬಸವರಾಜ, ಹೆಚ್.ಟಿ. ಗಿರೀಶಪ್ಪ, ಶಿಂಗ್ರಿಹಳ್ಳಿ ನಾಗರಾಜ, ಪಿ.ಟಿ. ಶಿವಾಜಿನಾಯ್ಕ, ಎನ್.ಜಿ. ಸಿದ್ದೇಶ್, ಬಣಕಾರ ಜಗದೀಶ ಹಾಗೂ ಇತರರಿದ್ದರು.