ವಿಜಯಸಾಕ್ಷಿ ಸುದ್ದಿ, ಗದಗ: ಕಾಂತರಾಜ ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜನಗಣತಿ-2015ರ ವರದಿಯಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ಕೇವಲ 33606 ಜನಸಂಖ್ಯೆ ಹೊಂದಿದೆ ಎಂದು ಉಲ್ಲೇಖಿಸಿದೆ. ಆದರೆ ವಾಸ್ತವದಲ್ಲಿ ನಾವು 4 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದೇವೆ ಎಂದು ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲೀಪಾಟೀಲ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ನಡೆಸಿದ ಜಾತಿ ಜನಗಣತಿಯನ್ನು ನಾವು ವಿರೋಧಿಸುತ್ತೇವೆ. ನಮ್ಮ ಸಮುದಾಯ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ಕಾಂತರಾಜು ಆಯೋಗದ ವರದಿಯಲ್ಲಿ ಸುಳ್ಳು ಮಾಹಿತಿ ಅಡಕವಾಗಿದೆ ಎಂದು ಆರೋಪಿಸಿದರು.
ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸರಕಾರ ಜಾರಿಗೊಳಿಸಬಾರದು. ರಾಜ್ಯದಲ್ಲಿರುವ ರಡ್ಡಿ ಸಮುದಾಯದ ಎಲ್ಲ ಜನಪ್ರತಿನಿಧಿಗಳು, ಶಾಸಕರು ಈ ವರದಿಯನ್ನ ವಿರೋಧಿಸಬೇಕು ಎಂದು ವಿನಂತಿಸಿದರು.
ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಲಿಂಗಾಯತ ರಡ್ಡಿ ಸಮಾಜ ನಿಖರತೆ ಇಲ್ಲದ ಸಮೀಕ್ಷೆಯನ್ನ ಸರಕಾರ ನಡೆಸಿದ್ದು, ರಡ್ಡಿ ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ನಾವೇ ಸಮೀಕ್ಷೆ ನಡೆಸಿ ವರದಿ ನೀಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಡ್ಡಿ ಲಿಂಗಾಯತ ಸಮಾಜದ ಗದಗ ಜಿಲ್ಲಾಧ್ಯಕ್ಷ ಕುಮಾರ ಗಡಗಿ, ಕಾರ್ಯಾಧ್ಯಕ್ಷ ಸುರೇಶ ಶಿರೋಳ, ಉಪಾಧ್ಯಕ್ಷ ಭೀಮರಡ್ಡೇಪ್ಪ ರಡ್ಡೇರ, ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ, ರೋಣ ತಾಲೂಕು ಯುವ ಘಟಕದ ಅಧ್ಯಕ್ಷ ವಿಜಯಗೌಡ ಪಾಟೀಲ ಇದ್ದರು.