ಗದಗ: ಕಾನೂನು ಬಾಹಿರವಾಗಿ ಸಾಲ ನೀಡಿ, ಹಿಂಸೆ ನೀಡುವವರ ಮೇಲೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು, ಯಾರು ಕಾನೂನಾತ್ಮಕ ಸಾಲ ನೀಡ್ತಾರೆ, ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಕೆಲಸ ಮಾಡುವವರಿಗೆ ಈ ಸುಗ್ರಿವಾಜ್ಞೆ ಅನ್ವಯಿಸೋದಿಲ್ಲ.
ಈ ಸುಗ್ರಿವಾಜ್ಞೆ ಖಾಸಗಿ ಲೇವಾದೇವಿದಾರರು ಹಾಗೂ ನೋಂದಣಿ ಇಲ್ಲದವರಿಗೆ ಅನ್ವಯಿಸುತ್ತದೆ. ಅದಲ್ಲದೆ ಈ ಸುಗ್ರಿವಾಜ್ಞೆ ಬಡವರು ಮುಗ್ಧ ಸಾಲಗಾರರ ರಕ್ಷಣೆ ಮಾಡೋ ಉದ್ದೇಶವಾಗಿದೆ ಎಂದರು.
ಇನ್ನೂ ರಾಜ್ಯಪಾಲರು ಸುಗ್ರಿವಾಜ್ಞೆಯನ್ನು ವಾಪಸ್ಸು ಕಳಿಸಿದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ನಾನು ಚರ್ಚೆ ಮಾಡಿ ನಿನ್ನೆ ಪುನಃ ನಮ್ಮ ನಿಲುವನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದೇವೆ. ಐದು ಅಂಶಗಳ ಕುರಿತು ಸುದೀರ್ಘವಾದ ವಿವರಣೆ ನೀಡಿ ಕಳಿಸಿದ್ದೇವೆ ಎಂದರು. ಅದಲ್ಲದೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ವಿವರಣೆ ಕೊಟ್ಟಿದ್ದೇವೆ.
ಕೆಲವು ಸಂದರ್ಭದಲ್ಲಿ ರಾಜ್ಯಪಾಲರಿಗೆ ತಪ್ಪು ಗ್ರಹಿಕೆಯಾಗಿದೆ ಆದ್ದರಿಂದ ಅಲ್ಲಿ ವಿವರಣೆ ನೀಡಿದ್ದೇವೆ. ಉದಾಹರಣೆಗೆ 3 ಲಕ್ಷ ಸಾಲ ಇದ್ರೆ, 5 ಲಕ್ಷ ದಂಡ ಹಾಕ್ತೀರಾ ಅಂತಾ ಆಕ್ಷೇಪ ಇತ್ತು. ಸಾಲ ಎಷ್ಟು ಇದೆ ಎನ್ನುವದು ಮುಖ್ಯ ಅಲ್ಲಾ, ಅವ್ರ ಗುನ್ನೆ ಏನ ಮಾಡ್ತಾರೆ ಅದರ ಮೇಲೆ ದಂಡ ಹಾಕುತ್ತವೆ ಎಂದು ಐದು ಅಂಶಗಳ ಕುರಿತು ಸುದೀರ್ಘವಾದ ಮಾಹಿತಿ ನೀಡಿದ್ದೇವೆ ಎಂದರು.