ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಸಂಘದ ಪ್ರತಿಯೊಬ್ಬ ಸದಸ್ಯರ ಸಹಕಾರದಿಂದ ಪ್ರಸ್ತುತ ವರ್ಷದಲ್ಲಿ 5.83 ಲಕ್ಷ ರೂ ಲಾಭ ಪಡೆದು ಮಾದರಿ ಸಹಕಾರ ಸಂಘವಾಗಿ ಹೊರಹೊಮ್ಮುತ್ತಿರುವುದು ಹೆಮ್ಮ ಎನಿಸುತ್ತದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ ಸಂತಸ ವ್ಯಕ್ತಪಡಿಸಿದರು.
ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಂ-2ರ 106ನೇ ವಾರ್ಷಿಕ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಿಯಾಯತಿ ದರದ ಬಿತ್ತನೆಯ ಬೀಜ ವಿತರಣೆ, ಪಿಗ್ಮಿ ಸಾಲ, ರೈತರಿಗೆ ವಿವಿಧ ಯೋಜನೆಯಡಿ ನೀಡಿದ ಸಾಲ ಸೌಲಭ್ಯ ಸೇರಿದಂತೆ ವಿವಿಧ ರೂಪದಲ್ಲಿ ಈ ವರ್ಷದಲ್ಲಿ 5.83 ಲಕ್ಷ ಲಾಭ ಗಳಿಸಿದ್ದು, ತಮ್ಮೆಲ್ಲರ ಸಹಕಾರ ಹೀಗೆ ಮುಂದುವರೆಯಲಿ. ತಮ್ಮ ಉಳಿತಾಯದ ಹಣವನ್ನು ಸಂಘದಲ್ಲಿ ತೊಡಗಿಸಿ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು.
ಸಂಘದಲ್ಲಿ 325 ಜನ ಸದಸ್ಯರಿದ್ದು, ಸದರಿ ಸಾಲಿನಲ್ಲಿ 3 ಸಾವಿರ ಶೇರು ಜಮಾ ಆಗಿದೆ. ಒಟ್ಟು 1291960 ರೂ ಶೇರು ಬಂಡವಾಳ ಹೊಂದಿರುತ್ತದೆ. ಆರ್ಥಿಕ ಕ್ಷೇತ್ರದಲ್ಲಿನ ಬದಲಾವಣೆಗಳ ನಡುವೆಯೂ ಸಹಕಾರಿ ಸಂಘಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿರುವುದರ ಪರಿಣಾಮವಾಗಿ ಸಂಘವು ಠೇವಣಿಯಲ್ಲಿ ನಿರಿಕ್ಷೀತ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಆರಂಭದಲ್ಲಿ 87.50 ಲಕ್ಷ ಠೇವು ಜಮಾ ಇದ್ದು, ಈ ಆರ್ಥಿಕ ವರ್ಷಾಂತ್ಯಕ್ಕೆ 92.26 ಲಕ್ಷ ಠೇವು ಜಮಾ ಇರುತ್ತದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ 70 ವರ್ಷ ಮೇಲಟ್ಟ ಸಂಘದ ಸದಸ್ಯರಾದ ಸಿ.ಬಿ. ವಸ್ತçದ, ಕಾಶಮ್ಮ ಲಕ್ಕುಂಡಿ, ಈಶ್ವರಪ್ಪ ಕುಂಬಾರ, ಅಂದಾನಯ್ಯ ನರಗುಂದಮಠ, ಮಹಾದೇವಪ್ಪ ಕವಲೂರು, ಶಿವನಗೌಡ ಕಮತರ ಅವರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ರುದ್ರಪ್ಪ ವಡ್ಡರ, ನಿರ್ದೆಶಕರಾದ ಮಲ್ಲನಗೌಡ ಪಾಟೀಲ, ಗವಿಶಿದ್ದಪ್ಪ ರೇವಡಿ, ಕಲ್ಲಪ್ಪ ಬೆಟಗೇರಿ, ಶಂಕ್ರಪ್ಪ ಕುಂಬಾರ, ಮಂಜುನಾಥ ಕರಿಯಲ್ಲಪ್ಪನವರ, ಅಂದಾನಯ್ಯ ಪತ್ರಿಮಠ, ಅನ್ನಪೂರ್ಣ ಹಡಗಲಿ, ಸಕ್ರಪ್ಪ ರಾಮತಾಳ ವೇದಿಕೆಯಲ್ಲಿದ್ದರು. ಮಂಜುನಾಥ ಗದಗಿನ ನಿರೂಪಿಸಿದರು. ಮಹೇಶ ಮುಸ್ಕಿನಭಾವಿ ವಂದಿಸಿದರು.