ಜೀವನ ಸಾರ್ಥಕತೆ ವೆಬ್‌ಸೈಟ್ ಮೂಲಕ ಅಂಗಾಂಗ ದಾನಕ್ಕೆ ಅವಕಾಶ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: `ಜೀವನ ಸಾರ್ಥಕತೆ’ ಎಂಬ ವೆಬ್‌ಸೈಟ್ ಮೂಲಕ ಅಂಗಾಂಗ ದಾನಕ್ಕೆ ಸರ್ಕಾರ ಅವಕಾಶ ನೀಡಿದೆ. ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಾಣುವ ಸಾಧನೆಗೆ ಮುಂದಾಗಬಹುದಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಗದಗ ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಗಾಂಗ ದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಹಾಗೂ ಜೀವನ ಉಳಿಸಿದ ನೆಮ್ಮದಿ ನಿಮ್ಮದಾಗಲಿದೆ ಎಂದರು.

ನಗರದ ಯಲ್ಲಪ್ಪ ಕಾಂಬಳೇಕರ್ ಅವರು ಅಂಗಾಂಗ ದಾನಕ್ಕೆ ಮುಂದಾಗುವ ಮೂಲಕ ಗದಗನಲ್ಲಿ ಮೂರನೆಯವರಾಗಿದ್ದಾರೆ. ಇಂದು ಅವರ ನಿವಾಸಕ್ಕೆ ತೆರಳಿ ದಿವಂಗತ ಯಲ್ಲಪ್ಪ ಕಾಂಬಳೇಕರ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಲಾಯಿತು. ಅವರ ಪತ್ನಿ ಗೀತಾಬಾಯಿ ಕಾಂಬಳೇಕರ್, ಮಗ ಅಭಿಷೇಕ, ಸಹೋದರರಾದ ಶಿವಾಜಿ ಹಾಗೂ ಭರತ್ ದಿವಂಗತ ಯಲ್ಲಪ್ಪ ಕಾಂಬಳೇಕರ್ ಅವರ ಅಂಗಾಂಗ ದಾನಕ್ಕೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಲಾಯಿತು ಎಂದು ಸಚಿವರು ತಿಳಿಸಿದರು.

ಯಲ್ಲಪ್ಪ ಕಾಂಬಳೇಕರ್ ಅವರು ದಾನ ಮಾಡಿದ ಕಿಡ್ನಿಯನ್ನು ರೂರಲ್ ಮೆಡಿಕಲ್ ಸೊಸೈಟಿಯ ಹುಲಕೋಟಿ ಕೆ.ಎಚ್. ಪಾಟೀಲ ಆಸ್ಪತ್ರೆಯಲ್ಲಿ 27 ವರ್ಷದ ಯುವತಿಗೆ ಕಸಿ ಮಾಡಲಾಗಿದ್ದು, ಪ್ರಯತ್ನ ಯಶಸ್ವಿಯಾಗಿದೆ. ಹುಲಕೋಟಿಯ ಕೆ.ಎಚ್. ಪಾಟೀಲ ರೂರಲ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಆಪರೇಷನ್ ಆರಂಭವಾದ ಮೇಲೆ ವೈದ್ಯರ ಪ್ರಯತ್ನದಿಂದ ಹೊಸ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.

ಜಗತ್ತಿನಲ್ಲಿ ಅಂಗಾಂಗಗಳ ದಾನ ಮಾಡುವ ಬಗ್ಗೆ ಪ್ರೇರಣೆಯಾಗುವ ಕೆಲಸ ನಡೆದಿದೆ. ಆದರೆ, ಭಾರತದಲ್ಲಿ ಅಂಗಾಗಗಳ ದಾನ ಮಾಡುವ ಪದ್ಧತಿಯಲ್ಲಿ ಬಹಳಷ್ಟು ವಿಳಂಬವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರೇರಣೆ, ಪ್ರೋತ್ಸಾಹದಿಂದ ಚಾಲನೆ ಸಿಕ್ಕಂತಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಎಸ್.ಆರ್. ನಾಗನೂರ, ಡಾ. ಪ್ಯಾರಅಲಿ ನೂರಾನಿ, ಡಾ. ಅವಿನಾಶ ಓದುಗೌಡರ ಮುಂತಾದವರಿದ್ದರು.

ಒಂದು ಅಂಗಾಂಗ ದಾನದಿಂದ ಒಬ್ಬ ವ್ಯಕ್ತಿಯ ಜೀವ ಹಾಗೂ ಜೀವನ ಉಳಿಸಬಹುದು. ಅದರಂತೆ ಇಡೀ ದೇಹದಾನದಿಂದ ಹಲವರ ಜೀವ ಉಳಿಸಬಹುದಾಗಿದೆ. ಸಾರ್ವಜನಿಕರು ಅಂಗಾಂಗ ದಾನದ ಬಗ್ಗೆ ಅರಿವು ಹೊಂದುವ ಮೂಲಕ ಅಂಗಾಂಗ ದಾನಕ್ಕೆ ಜೀವನ ಸಾರ್ಥಕತೆ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.


Spread the love

LEAVE A REPLY

Please enter your comment!
Please enter your name here