ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮುನ್ಸಿಪಾಲ್ ಶಾಲಾ ಮೈದಾನದಲ್ಲಿ ಅ. 10ರಂದು ಬೆಳಿಗ್ಗೆ 10 ಗಂಟೆಗೆ ಅಂಗಾಂಗ ದಾನ ಮತ್ತು ನಶಾಮುಕ್ತ ಭಾರತ ಕಾರ್ಯಕ್ರಮ ಜರುಗಲಿದೆ ಎಂದು ಜನಸೇವಾ ಸಮಿತಿ ಅಧ್ಯಕ್ಷ ವಿನಯ್ ಹುಬ್ಬಳ್ಳಿ ಹೇಳಿದರು.
ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ನಿಮಿತ್ತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನ ಸಂಸ್ಥೆಯ ವಿದ್ಯಾರ್ಥಿಗಳು ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಮುನ್ಸಿಪಾಲ್ ಶಾಲಾ ಮೈದಾನದವರೆಗೆ ಅಂಗಾಂಗ ದಾನ ಮತ್ತು ನಶಾಮುಕ್ತ ಭಾರತದ ಜಾಗೃತಿ ಜಾಥಾ ನಡೆಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್, ಸಿಂಡಿಕೇಟ್ ಸದಸ್ಯ ಡಾ. ಕಿರಣ ಕುಳಗೇರಿ, ಡಾ. ಸಂಕನಗೌಡ ಪಾಟೀಲ, ಹಾಗೂ ಸೆನೆಟ್ ಸದಸ್ಯ ಡಾ. ಸಂತೋಷ ಇಂಡಿ, ಡಾ. ವೀರೇಶ ಹಂಚಿನಾಳ ಮತ್ತು ಡಾ. ಕೋನರೆಡ್ಡಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಸವೇಶ್ವರ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಶಫೀ ಅಹ್ಮದ ಹವಾಲ್ದಾರ, ಜಿಮ್ಸ್ ಕಾಲೇಜಿನ ಅಧ್ಯಾಪಕ ಡಾ. ಸ್ಟಿಫನ್ ಜಾನ್ ಹಾಜರಿದ್ದರು.