ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಮಸ್ಯೆಗಳಿಗೆ ಸಂಘಟನೆಯ ಹೋರಾಟವೇ ಪರಿಹಾರವಾಗಿದ್ದು, ನೀವೆಲ್ಲ ಸಂಘಟನೆಯೊಂದಿಗೆ ಕೈಜೋಡಿಸುವ ಅವಶ್ಯಕತೆ ಇದೆ. ಮಾಧ್ಯಮಿಕ ಶಾಲಾ ನೌಕರರ ಸಂಘಟನೆಯು ಈ ಹಿಂದಿನಿಂದಲೂ ತನ್ನ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರಗಳನ್ನು ಕಾಣುತ್ತ ಬಂದಿದ್ದು, ಎಲ್ಲರೂ ಸಂಘಟನೆಗೆ ಬಲ ತುಂಬಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಅನ್ನದಾನೇಶ್ವರ ಅಂಗ ಸಂಸ್ಥೆಗಳ ನೌಕರರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪಟ್ಟಣದ ಕಿವುಡ-ಮೂಗ ಶಾಲೆಯ ನೌಕರರ ಅನುದಾನ 37 ಲಕ್ಷ ರೂ ಬಾಕಿ ಉಳಿದದ್ದನ್ನು ತಿಳಿದ ಹೊರಟ್ಟಿಯವರು ಸಚಿವೆ ಹೆಬ್ಬಾಳಕರ ಮತ್ತು ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅನುದಾನ ಬಿಡುಗಡೆಗೆ ವ್ಯವಸ್ಥೆ ಮಾಡಿದರು. ನೂತನ ಎಲ್ಬಿಎ ಪರೀಕ್ಷಾ ಪದ್ಧತಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಹೊರಟ್ಟಿಯವರು, ಈ ಹಿಂದಿನ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಿದೆಯೇ ಎಂಬುದನ್ನು ಗಮನಿಸಲು ತಿಳಿಸಿದರು.
ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರಾಚಾರ್ಯ ವೈ.ಸಿ. ಪಾಟೀಲ ಸಭಾಪತಿ ಹೊರಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದರು. ಸಭೆಯಲ್ಲಿ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ನೌಕರರು ಪಾಲ್ಗೊಂಡಿದ್ದರು.
ವೇದಿಕೆಯ ಮೇಲೆ ಆಡಳಿತ ಮಂಡಳಿ ಚೇರಮನ್ ಡಾ. ಎಸ್.ಎ. ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪನಿದೇಶಕ ಆರ್.ಎಸ್. ಬುರಡಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ, ಮುಖ್ಯ ಶಿಕ್ಷಕ ಎಂ.ಬಿ. ಸಜ್ಜನ ಇದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಸ್ವಾಗತಿಸಿ, ವಂದಿಸಿದರು.
ಶ್ರಿ ಅನ್ನದಾನೇಶ್ವರ ಬಾಲಿಕೆಯರ ಪ್ರೌಢಶಾಲೆಯ ಕಟ್ಟಡಕ್ಕೆ ಈ ಹಿಂದೆ ನೀಡಿದ ವಾಗ್ದಾನದಂತೆ 10 ಲಕ್ಷ ರೂ.ಗಳನ್ನು ಸಭಾಪತಿ ಹೊರಟ್ಟಿ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಗೆ ಈ ಹಿಂದೆ ಘೋಷಿಸಿದ್ದ 5 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸಲು ಸಭಾಪತಿ ಹೊರಟ್ಟಿಯವರಿಗೆ ವಿನಂತಿಸಿದರು.


