ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ದೇಹವು ಪಂಚಭೂತಗಳಿಂದ ಕೂಡಿರುತ್ತದೆ. ದೇಹದಲ್ಲಿ ಒಂದು ಅಂಶ ಕಡಿಮೆಯಾದರೂ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂದಿನ ಆಧುನಿಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ಎಲ್ಲರೂ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆಯಾಗಿ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಅನುಷಾ ಮುದಗಲ್ ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏರ್ಪಡಿಸಿದ್ದ ದಿ. ಶ್ರೀ ಸಂಗನಬಸಯ್ಯ ನಿಂಗಯ್ಯ ಮದರಿಮಠ ಇವರ ಸ್ಮಾರಕ ದತ್ತಿ ಉಪನ್ಯಾಸದಲ್ಲಿ `ಅಂಗೈಯಲ್ಲಿ ಆರೋಗ್ಯ’ವಿಷಯದ ಕುರಿತು ಅವರು ಮಾತನಾಡಿದರು.
ಗುರುರಾಜ ಪೂಜಾರ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆದಷ್ಟು ನೈಸರ್ಗಿಕವಾಗಿ ಬೆಳೆದಿರುವ ಸಾವಯವ ಪದಾರ್ಥಗಳನ್ನು ಉಪಯೋಗಿಸಲು ಮುಂದಾಗಬೇಕು. ಒಂದೊಂದು ಬಣ್ಣಕ್ಕೆ ಒಂದೊಂದು ಶಕ್ತಿ ಇರುತ್ತದೆ. ಅದನ್ನು ತಿಳಿದುಕೊಂಡು ಅಂಗೈಯಲ್ಲಿ ಆ ಬಣ್ಣವನ್ನು ಅಳವಡಿಸಿಕೊಂಡಾಗ ನಿರ್ದಿಷ್ಟವಾದ ರೋಗದಿಂದ ಮುಕ್ತಿ ಪಡೆಯಬಹುದು. ಪ್ರತಿದಿನ ಮನೆಯಲ್ಲಿ ವ್ಯಾಯಾಮ, ಜ್ಞಾನ ಮತ್ತು ಕಲರ್ ಥೆರಫಿ ಮಾಡಿಕೊಳ್ಳುವುದರಿಂದ ಆರೋಗ್ಯದಲ್ಲಿ ಚೈತನ್ಯವನ್ನು ಕಾಣಬಹುದು ಎಂದರು.
ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ, ಉಪಾಧ್ಯಕ್ಷರಾದ ಸುಜಾತಾ ಎಸ್.ಗುಡಿಮನಿ ಪ್ರಾರ್ಥಿಸಿದರು. ಕುಮಾರ ಆರ್ಯನ್ ಹಿರೇಮಠ ವಚನ ಪಠಿಸಿದರು. ಲಿಂಗೈಕ್ಯರಾದ ದಿ. ಸಂಗನಬಸಯ್ಯ ನಿಂಗಯ್ಯ ಮದರಿಮಠ ಇವರ ಪರಿಚಯವನ್ನು ಮಹಿಳಾ ಘಟಕದ ಸದಸ್ಯರಾದ ವಿಮಲಾ ಪರ್ವತಗೌಡ್ರ ನಡೆಸಿಕೊಟ್ಟರು. ಅತಿಥಿಗಳ ಪರಿಚಯವನ್ನು ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಜಯಶ್ರೀ ಉಮೇಶ ಹುಬ್ಬಳ್ಳಿ ಮಾಡಿದರು. ಮಹಿಳಾ ಘಟಕದ ಗೌರವ ಕಾರ್ಯದರ್ಶಿ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಎಂದು ಸಂಸ್ಥೆಯ ಮಹಿಳಾ ಘಟಕದ ಗೌರವ ಕಾರ್ಯದರ್ಶಿ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದತ್ತಿ ಉಪನ್ಯಾಸ ಉಪ ಸಮಿತಿ ಚೇರಮನ್ ಚಂದ್ರು ಬಾಳಿಹಳ್ಳಿಮಠ ಮಾತನಾಡುತ್ತಾ, ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಗಮನ ನೀಡದೇ ಅನೇಕ ತೊಂದರೆಗಳನ್ನು ಎದುರಿಸುವುದು ಸಹಜವಾಗಿದೆ. ಇಂದು ವಾಣಿಜ್ಯೋದ್ಯಮ ಮತ್ತು ಇಡೀ ಜಗತ್ತು ಅಂಗೈಯಲ್ಲಿ ಇದೆ ಎಂಬ ಭಾವನೆಯಿಂದ ಒತ್ತಡದಲ್ಲಿ ವ್ಯವಹಾರವನ್ನು ಮಾಡುತ್ತಿದ್ದೇವೆ. ಆದರೆ ಅದೇ ಅಂಗೈಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಶಕ್ತಿಯೂ ಇದೆ ಎನ್ನುವುದನ್ನು ನಾವು ಅರಿತುಕೊಳ್ಳುವುದು ಅವಶ್ಯಕ ಎಂದರು.


