ಚಿತ್ರದುರ್ಗ: ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ‘ಹೊಸ ಬಾಟಲಿಯಲ್ಲಿ ಹಳೆ ವೈನ್’ ಹಾಕಿದಂತೆ. ಹೀಗಾಗಿ ಆ ವಿಚಾರಕ್ಕೆ ನೋ ರಿಯಾಕ್ಷನ್ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಚಿತ್ರದುರ್ಗದಲ್ಲಿ ನಡೆದ ಒನಕೆ ಓಬವ್ವ ಜಯಂತಿಯ ಮೆರವಣಿಗೆ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿರುವುದಕ್ಕೆ ಕೆಲ ಹಿರಿಯ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ.
ಅವರ ಪಕ್ಷದಲ್ಲಿನ ಅಸಮಾಧಾನ ಅವರ ಆಂತರಿಕ ವಿಚಾರವಾಗಿದೆ. ಹೀಗಾಗಿ ನಾವು ಆ ವಿಚಾರಕ್ಕೆ ಮೂಗು ತೂರಿಸಲ್ಲ ಎಂದರು.
ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿಯವರ ಸಿದ್ಧಾಂತವೇ ಬೇರೆಯಾಗಿದ್ದು, ಅವರು ಸಮಾಜ ಒಡೆಯುವ ನೀತಿ ಹೊಂದಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಅವರ ನೇತೃತ್ವದ ಬಿಜೆಪಿ ಅಧಿಕಾರ ಪಡೆಯಲ್ಲ ಎಂದು ಭವಿಷ್ಯ ನುಡಿದರು.
ಹಾಗೆಯೇ ಬಿಜೆಪಿಗೆ ಈವರೆಗೆ ರಾಜ್ಯಾಧ್ಯಕ್ಷರಿಲ್ಲ ಎಂದು ಹೇಳುತ್ತಿದ್ದರು. ಈಗ ನೇಮಕವಾಗಿದೆ. ನಾವು ಎಲ್ಲೂ ಬಿಜೆಪಿಗೆ ಗೇಲಿಮಾಡಿಲ್ಲ. ಆದರೆ ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕರೇ ಬಿಜೆಪಿಗೆ ಇಲ್ವಲ್ಲಾ ಎಂದು ವ್ಯಂಗ್ಯವಾಡಿದರು.