ತುಮಕೂರು: ಶಾಲಾ ಶಿಕ್ಷಕಿ ವಿರುದ್ದ ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಮಕ್ಕಳ ಸಮೇತವಾಗಿ ಪ್ರತಿಭಟನೆ ಆರಂಭಿಸಿದ್ದು, ಎಲ್ಲ ಶಾಲಾ ಕೋಣೆಗಳಿಗೆ ಗ್ರಾಮಸ್ಥರೇ ಬೀಗ ಜಡಿದು, ಈ ಶಿಕ್ಷಕಿ ನಮ್ಮೂರಿನ ಶಾಲೆಗೆ ಬಂದು ಕಾರ್ಯ ನಿರ್ವಹಿಸುವುದು ಬೇಡವೆಂದು ಪಟ್ಟು ಹಿಡಿದಿರುವ ಘಟನೆ ತುಮಕೂರು ತಾಲ್ಲೂಕಿನ ಹಿರೇಗುಂಡಗಲ್ಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕಿ ರಾಧಿಕ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಶಿಕ್ಷಕಿ ರಾಧಿಕ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಕ್ಷಕಿಯ ಬಗ್ಗೆ ದೂರು ನೀಡಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿಸಿದ್ದರು. ಆದರೆ, ಇದೀಗ ಪುನಃ ಅಮಾನತ್ತಿನ ಅವಧಿ ಮುಕ್ತಾಯವಾಗುತ್ತಿದ್ದಂತೆ ಶಿಕ್ಷಕಿಯನ್ನು ಮತ್ತೆ ಅದೇ ಶಾಲೆಗೆ ನಿಯೋಜನೆ ಮಾಡಲಾಗಿದೆ. ಇದರಿಂದ ಶಿಕ್ಷಣ ಇಲಾಖೆ ವಿರುದ್ಧ ಹಾಗೂ ಶಿಕ್ಷಕಿ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ.