Home Blog Page 2

ಡ್ಯಾನ್ಸ್ ಮಾಡುವ ವೇಳೆ ಹೃದಯಾಘಾತ: ಸೇಲ್ಸ್ ಎಕ್ಸಿಕ್ಯೂಟಿವ್ ಸ್ಥಳದಲ್ಲೇ ಸಾವು!

ಬೆಂಗಳೂರು: ಬೆಂಗಳೂರಿನ ರೆಸಾರ್ಟ್‌ನಲ್ಲಿ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ರಾಯಚೂರು ಮೂಲದ ಸೇಲ್ಸ್ ಎಕ್ಸಿಕ್ಯೂಟಿವ್ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬಸವರಾಜ್ (46) ಎಂಬವರು ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದವರು.

ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಸ್ನೇಹಿತರ ಜೊತೆ ರೆಸಾರ್ಟ್‌ಗೆ ತೆರಳಿದ್ದ ಅವರು, ನೃತ್ಯವಾಡುತ್ತಿದ್ದಾಗ ಏಕಾಏಕಿ ನೆಲಕ್ಕೆ ಕುಸಿದು ಬಿದ್ದರು.

ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೃದಯಾಘಾತದಿಂದ ಬಸವರಾಜ್ ಕೊನೆಯುಸಿರೆಳೆದಿದ್ದಾರೆ. ಸದ್ಯ ಬಸವರಾಜ್ ಮೃತದೇಹವನ್ನು ಬೆಂಗಳೂರಿನಿಂದ ಲಿಂಗಸುಗೂರಿನ ಸರ್ಜಾಪುರಕ್ಕೆ ರವಾನಿಸಲಾಗಿದೆ.

ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳ: ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ರು

0

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಾಮ್‌ನಲ್ಲಿ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಖದೀಮನನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಧರ್ಮಧೇಟು ಕೊಟ್ಟಿರುವ ಘಟನೆನಡೆದಿದೆ. ನಾಗಮಂಗಲ ಮೂಲದ 45 ವರ್ಷದ ಈ ವ್ಯಕ್ತಿ,

ಭಿಕ್ಷೆ ಬೇಡುವ ನೆಪದಲ್ಲಿ ಕಳೆದ ಕೆಲವು ದಿನಗಳಿಂದ ಗಂಜಾಮ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದನು. ನೆನ್ನೆ ರಾತ್ರಿ ಮನೆಯೊಂದರಲ್ಲಿ ನುಗ್ಗಿ ಮೊಬೈಲ್ ಕದ್ದಿದ್ದ ಈತ, ಇಂದು ಮತ್ತೊಂದು ಮನೆಯೊಳಗೆ ನುಗ್ಗಲು ಯತ್ನಿಸಿದ ವೇಳೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಕಳ್ಳನಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿದ್ದಾರೆ.

ಎರಡು ದಿನಗಳ ಹಿಂದೇಷ್ಟೆ ಗ್ರಾಮದಲ್ಲಿ ಮನೆಯೊಂದ ರಲ್ಲಿ ಈ ಕಳ್ಳತನ ನಡೆದಿತ್ತು ಆರೋಪಿ ಕಳ್ಳನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ನದಿಯಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆ..!

ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ. ಹಾಸನ ಜಿಲ್ಲೆಯ ಮೂಲದ ಅಜಿತ್ (20), ಸಚಿನ್ (20) ಮತ್ತು ಪ್ರಮೋದ್ (19) ಎಂಬ ಯುವಕರೇ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಯುವಕರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಬಳಿಕ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ಪಡೆದ ಮಂತ್ರಾಲಯದ ಪೊಲೀಸರು ಹಾಗೂ ಸ್ಥಳೀಯ ಈಜುಗಾರರ ತಂಡ ಶೋಧ ಕಾರ್ಯಚರಣೆ ಆರಂಭಿಸಿದ್ದು, ಇದೀಗ ನದಿಯಲ್ಲಿ ಹುಡುಕಾಟ ಮುಂದುವರಿದಿದೆ. ನದಿಯ ನೀರಿನ ತೀವ್ರ ಪ್ರವಾಹ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಮೋಕಿಂಗ್’ನಿಂದ ತುಟಿ ಕಪ್ಪಾಗಿದೆಯೇ? ಹಾಗಿದ್ರೆ ಇಲ್ಲಿದೆ ನೋಡಿ ಸೂಪರ್ ಮನೆಮದ್ದು!

0

ತುಟಿಗಳ ಆರೋಗ್ಯ ನಿಮ್ಮ ಮುಖದ ಆಕರ್ಷಣೆಗೆ ಪ್ರಮುಖ ಅಂಶ. ಆದರೆ ಧೂಮಪಾನ ಮಾಡುವುದರಿಂದ ತುಟಿಗಳು ಕಪ್ಪಾಗುವುದು ಸಾಮಾನ್ಯವಾದ ಸಮಸ್ಯೆಯಾಗಿದೆ. ನಿಕೋಟಿನ್ ಮತ್ತು ಹೊಗೆಯಿಂದ ಹೊರಹೊಮ್ಮುವ ಶಾಖದ ಪರಿಣಾಮ, ತುಟಿಗಳ ಸುತ್ತಮುತ್ತಲಿನ ಚರ್ಮದ ಮೆಲನಿನ್ ಪ್ರಮಾಣ ಹೆಚ್ಚಾಗಿ ಬಣ್ಣ ಕತ್ತಲಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಆದರೆ ಇದಕ್ಕೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿವೆ ಕೆಲವು ನೈಸರ್ಗಿಕ ಮಾರ್ಗಗಳು:

ಜೇನುತುಪ್ಪ: ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ್ದು, ತುಟಿಗಳಿಗೆ ಬಣ್ಣವನ್ನು ಹಿಂತಿರುಗಿಸುತ್ತದೆ.

ತೆಂಗಿನ ಎಣ್ಣೆ: ತೇವಾಂಶ ಪೂರೈಸಿ, ಕಪ್ಪಾಗದಂತೆ ತಡೆಯುತ್ತದೆ.

ಅಲೋವೆರಾ: ಚರ್ಮದ ಮೃದುವುತನವನ್ನು ಹೆಚ್ಚಿಸಿ, ಕಪ್ಪು ಬಣ್ಣ ನಿವಾರಣೆ.

ಸೌತೆಕಾಯಿ ಪೇಸ್ಟ್: ಸಿಲಿಕಾ ಸಂಯುಕ್ತಗಳು ತುಟಿಗಳ ವರ್ಣವನ್ನು ಸುಧಾರಿಸುತ್ತವೆ.

ಗ್ರೀನ್ ಟೀ: ಆ್ಯಂಟಿಆಕ್ಸಿಡೆಂಟ್ ಹೊಂದಿದ್ದು, ಹಾನಿಗೊಂಡ ಕೋಶಗಳ ಪುನರ್ ನಿರ್ಮಾಣಕ್ಕೆ ಸಹಾಯ.

ದೈನಂದಿನ ಜೀವನದಲ್ಲಿ ಈ ಸರಳ ಮನೆಮದ್ದುಗಳನ್ನು ಬಳಸುವುದರಿಂದ, ಧೂಮಪಾನದ ಪರಿಣಾಮವಾಗಿ ಕಪ್ಪಾಗಿರುವ ತುಟಿಗಳಿಗೆ ನೈಸರ್ಗಿಕವಾದ ಪರಿಹಾರ ದೊರೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ ನಿಧನ!

ಹೈದರಾಬಾದ್: 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ (83) ಇಂದು ಬೆಳಗಿನ ಜಾವ 4 ಗಂಟೆಗೆ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯನ್ನು ಮೆರೆದಿದ್ದ ಕೋಟ ಶ್ರೀನಿವಾಸ ರಾವ್, ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಖಳನಾಯಕ, ಪೋಷಕ ನಟ ಹಾಗೂ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದರು.

ಹಿರಿಯ ನಟನ ನಿಧನದಿಂದ ಇಡೀ ಚಿತ್ರರಂಗದಲ್ಲಿ ಶೋಕದ ಛಾಯೆ ಮೂಡಿದೆ. ಮೂಲಗಳ ಪ್ರಕಾರ, ಪುತ್ರನ ನಿಧನದ ನಂತರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ರಂಗಭೂಮಿಯಿಂದ ಬಂದ ಈ ಕಲಾವಿದ ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ಸಿನಿಪ್ರೇಮಿಗಳ ಮನಗೆದ್ದಿದ್ದರು. ಖ್ಯಾತ ನಟ ಮೋಹನ್ ಬಾಬು ಅವರೊಂದಿಗೆ ಮಾತ್ರವೇ ಅವರು ಸುಮಾರು 60 ಚಿತ್ರಗಳಲ್ಲಿ ಅಭಿನಯಿಸಿದ್ದರು.

ಲೋಕ ಆದಾಲತ್‌ನಲ್ಲಿ 1474 ಪ್ರಕರಣಗಳ ಇತ್ಯರ್ಥ

0

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಒಟ್ಟು 1830 ಪ್ರಕರಣಗಳ ಪೈಕಿ 1474 ಪ್ರಕರಣಗಳನ್ನು ಉಭಯ ನ್ಯಾಯಾಧೀಶರಾದ ಆರ್.ಉಷಾರಾಣಿ ಮತ್ತು ಎಸ್.ಪಿ. ಮನುಶರ್ಮ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಸೇರಿದಂತೆ ಬಾಕಿ ಇದ್ದ ಇನ್ನಿತರ ಪ್ರಕರಣಗಳನ್ನು ಲೋಕ್ ಆದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 840 ಪ್ರಕರಣಗಳ ಪೈಕಿ 670 ಪ್ರಕಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಿದರೆ, ಕೆಲವನ್ನು ಪರಿಹಾರದ ರೂಪದಲ್ಲಿ ಇತ್ಯರ್ಥಪಡಿಸಲಾಯಿತು. ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 990 ಪ್ರಕರಣಗಳ ಪೈಕಿ 804 ಪ್ರಕಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡರೆ ಇನ್ನು ಕೆಲವು ಪರಿಹಾರದ ರೂಪದಲ್ಲಿ ಇತ್ಯರ್ಥಗೊಂಡವು.

ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್, ಉಪಾಧ್ಯಕ್ಷ ಮಂಜುನಾಥ್ ಎಸ್.ಬಾಗಳಿ, ಕಾರ್ಯದರ್ಶಿ ಎಂ. ಮಲ್ಲಪ್ಪ, ಕೆ. ಸಣ್ಣನಿಂಗನಗೌಡ, ಸರ್ಕಾರಿ ಅಭಿಯೋಜಕಿ ಮೀನಾಕ್ಷಿ ಎನ್, ನಿರ್ಮಲ, ಹಿರಿಯ ವಕೀಲರಾದ ಕೃಷ್ಣಮೂರ್ತಿ, ಮತ್ತಿಹಳ್ಳಿ ಅಜ್ಜಣ್ಣ, ರಾಮ್‌ಭಟ್, ಎಸ್. ರುದ್ರಮನಿ, ಬಿ. ಗೋಣಿಬಸಪ್ಪ, ಬಿ. ಹಾಲೇಶ್, ಕೆ.ಎಂ. ಚಂದ್ರಮೌಳಿ, ಆನಂದ ಬಂಡ್ರಿ, ಎಸ್.ಜಿ. ತಿಪ್ಪೇಸ್ವಾಮಿ,ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳಿದ್ದರು.

ಗ್ರಂಥಗಳು ಬಾಳಿನ ದಾರಿದೀಪ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಂಥಗಳು ನಮ್ಮ ಬಾಳಿನ ದಾರಿದೀಪಗಳು. ಗ್ರಂಥಾಲಯದ ಉಪಯೋಗ ಮಾಡುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಮನೆಮನೆಗಳಲ್ಲಿಯೂ ಒಂದು ಪುಟ್ಟ ಗ್ರಂಥಾಲಯವಿದ್ದರೆ ಅದು ನಮ್ಮ ಜ್ಞಾನದ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುತ್ತದೆ ಎಂದು ಅಬ್ಬಿಗೆರೆ ಪಿಕೆಪಿಎಸ್ ಅಧ್ಯಕ್ಷ ಗುರುನಾಥ ಅವರೆಡ್ಡಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಅರಿವು ಕೇಂದ್ರ ಹಾಗೂ ಬಸವರಾಜ ತಳವಾರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಬಸವರಾಜ ತಳವಾರ ಇವರ ಜನ್ಮದಿನದ ನಿಮಿತ್ತ ಅಬ್ಬಿಗೇರಿಯ ಅರಿವು ಕೇಂದ್ರದಲ್ಲಿ ನಡೆದ ಪುಸ್ತಕ ದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥಾಲಯಗಳು ಸಂಶೋಧನೆ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಹಾಯಕವಾಗುತ್ತವೆ. ಜನ್ಮ ದಿನಾಚರಣೆಗಳನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬುದನ್ನು ಗ್ಯಾರಂಟಿ ಸಮಿತಿ ಸದಸ್ಯ ಬಸವರಾಜ ತಳವಾರ ಅವರು ಅರಿವು ಕೇಂದ್ರಕ್ಕೆ ಗ್ರಂಥ ದಾನ ಮಾಡುವ ಮೂಲಕ ತೋರಿಸಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟರು.

ಗ್ರಾ.ಪಂ. ಅಧ್ಯಕ್ಷೆ ಲಲಿತಾ ರಾಠೋಡ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಅಂದಪ್ಪ ವೀರಾಪೂರ, ಮಂಜು ಪಸಾರದ, ಎಂ. ಲೋಹಿತ್, ಮಹದೇವಪ್ಪ ಕಂಬಳಿ, ಜಗದೀಶ ಅವರೆಡ್ಡಿ, ದುರುಗೇಶ ಬಂಡಿವಡ್ಡರರ, ಆನಂದ ಹಿರೇಮನಿ, ಮಲ್ಲಯ್ಯ ಮಠಪತಿ, ಸಚಿನ್ ಪಾಟೀಲ, ಶಿವಪುತ್ರಪ್ಪ ಕೆಂಗಾರ, ರೇಖಾ ಅವರೆಡ್ಡಿ, ರೇಖಾ ವೀರಾಪೂರ, ಅಕ್ಕಮ್ಮ ಡೊಳ್ಳಿನ, ರತ್ನಕ್ಕ ಮಾಳಶೆಟ್ಟಿ, ಚನ್ನಮ್ಮ ತಳವಾರ, ಸಿ.ಆರ್.ಸಿ ಶರಣಪ್ಪ ಮೂಲಿಮನಿ, ವೀರೇಶ ಶಿದ್ನೆಕೊಪ್ಪ, ವಿಜಯಕುಮಾರ ಇಟಗಿ, ಪರಶುರಾಮ ಹಡಪದ ಮುಂತಾದವದ್ದರು. ಆರ್.ಡಿ. ರಂಗಣ್ಣವರ ಸ್ವಾಗತಿಸಿದರು. ಡಿ.ಎಚ್. ಪರಂಗಿ ನಿರೂಪಿಸಿದರು.

ಟೀಕಿಸಿದವರಿಗೆ ತಕ್ಕ ಉತ್ತರ ನೀಡುತ್ತೇವೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಕ್ತಿ ಯೋಜನೆಯ ಚರ್ಚೆಯಲ್ಲಿ, ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಲಕ್ಷ್ಮೇಶ್ವರದ ಸಾರಿಗೆ ಘಟಕದಲ್ಲಿ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಆಗ ಘಟಕ ವ್ಯವಸ್ಥಾಪಕಿ ಸವಿತಾ ಆದಿ ಪ್ರತಿಕ್ರಿಯಿಸಿ, ನಾನು ಯಾವುದೇ ಸಿಬ್ಬಂದಿಗೆ ಕಿರುಕುಳ ನೀಡುತ್ತಿಲ್ಲ. ಯಾರಿಂದಲೂ ಹಣ ಪಡೆಯದೇ ನಿಯತ್ತಿನಿಂದ ನೌಕರಿ ಮಾಡುತ್ತಿದ್ದೇನೆ. ಕಿರುಕುಳ ನೀಡುತ್ತೇನೆ ಎಂದ್ರೆ ಏನ್ರೀ ಅರ್ಥ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ಸಮಿತಿ ಸದಸ್ಯ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಇಡೀ ಸಭೆ ಗೊಂದಲದ ಗೂಡಾಯಿತು.

ಸಭೆಯಲ್ಲಿದ್ದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಅವರು ಸಭೆಯಲ್ಲಿದ್ದ ಸಾರಿಗೆ ಇಲಾಖೆ ನಿಯಂತ್ರಣಾಧಿಕಾರಿ ಡಿ.ದೇವರಾಜ ಅವರಿಗೆ ಡಿಪೋ ಮ್ಯಾನೇಜರ್‌ಗೆ ನೋಟೀಸು ನೀಡುವಂತೆ ಸೂಚಿಸಿದರು. ನಂತರ ನಡೆದ ಚರ್ಚೆಯಲ್ಲಿ ಕಳೆದ 11 ತಿಂಗಳಿಂದ ಅನ್ನಭಾಗ್ಯ ಹಣ ಜಮೆಯಾಗಿಲ್ಲ ಎಂದು ಶಿಗ್ಲಿ ನಿವಾಸಿ ಜಗದೀಶ ನವಲೆ ಅಳಲು ತೋಡಿಕೊಂಡರು.

ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆ ಬಡವರ ಜೀವನ ಮಟ್ಟವನ್ನು ಮೇಲ್ಪಂಕ್ತಿಗೇರಿಸಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು. ಯೋಜನೆಗಳನ್ನು ಬಡವರ ಮನೆಗೆ ತಲುಪಿಸುವ ಕಾರ್ಯವನ್ನು ಸಮಿತಿ ಮಾಡುತ್ತಿದೆ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ.98.02 ಗುರಿ ಸಾಧನೆಯಾಗಿದೆ. 2.49 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ತಲುಪಿಸಿದ್ದೇವೆ ಎಂದರು.

11 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದ್ದು ದೊಡ್ಡ ಸಾಧನೆ. 100ಕ್ಕೆ 100ರಷ್ಟು ಗುರಿ ತಲುಪಲು ಪ್ರಯತ್ನ ಮಾಡಿ ಯೋಜನೆಗಳ ಕುರಿತು ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ. ಜಿಲ್ಲೆಯ ಏಳೂ ತಾಲೂಕಿನ ಪಂಚ ಗ್ಯಾರಂಟಿಗಳ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯೋಜನೆಯಿಂದ ವಂಚಿತರಾದವರನ್ನು ಭೇಟಿ ಮಾಡಿ ಅವರಿಗೂ ಯೋಜನೆ ತಲುಪಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.

ತಾ.ಪಂ ಇಓ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ 5 ಇಲಾಖೆಗಳ ಅಧಿಕಾರಿಗಳು ಮುಂದಿನ ದಿನಗಳನ್ನು ನಡೆಯುವ ಸಮಿತಿ ಸಭೆಯಲ್ಲಿ ಪ್ರಗತಿ ವರದಿ ಮಂಡಿಸಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ತಿಳಿಸಿದರೆ ಅವುಗಳನ್ನು ತಾಲೂಕು ಮತ್ತು ಜಿಲ್ಲಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ದೀಪಕ ಲಮಾಣಿ, ಸದಸ್ಯರಾದ ರಾಮಣ್ಣ ಲಮಾಣಿ, ಗೀತಾ ಬೀರಣ್ಣವರ, ಕಾರ್ತಿಕ ದೊಡ್ಡಮನಿ, ಪ್ರಕಾಶ ಹುಲಕೋಟಿ, ವಿಜಯ ಹಳ್ಳಿ, ಲಕ್ಷ್ಮೇಶ್ವರ ಪುರಸಭೆ ಅಶ್ರಯ ಸಮಿತಿ ಸದಸ್ಯ ತಿಪ್ಪಣ್ಣ ಸಂಶಿ, ವಿಜಯಕುಮಾರ ಹಳ್ಳಿ, ಸುಶೀಲವ್ವ ಬಡಿಗೇರ ಮತ್ತಿತರರು ಇದ್ದರು.

ಪಡಿತರ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಬ್ಯಾನರ್ ಹಾಕಿಸಬೇಕು. ಅನ್ನಭಾಗ್ಯ ಅಕ್ಕಿ ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಈ ಕುರಿತು ಎಷ್ಟು ಪ್ರಕರಣ ದಾಖಲಿಸಿಕೊಂಡಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದ ಬಿ.ಬಿ. ಅಸೂಟಿ, ಅಕ್ಕಿ ಮಾರಾಟ ಮಾಡುವವರ ಪಡಿತರ ಕಾರ್ಡ್ಗಳನ್ನು ರದ್ದುಪಡಿಸಿ ಎಂದು ಸೂಚಿಸಿದರು.

“ಐದೂ ಯೋಜನೆಗಳು ಶೇ.98ರಷ್ಟು ಜನರಿಗೆ ತಲುಪುವಂತೆ ನಮ್ಮ ಸಮಿತಿ ಸದಸ್ಯರು ಮತ್ತು ಕೆಡಿಪಿ ಸದಸ್ಯರು ಮಾಡಿದ್ದೇವೆ. ಇನ್ನೂ ಯೋಜನೆಗಳಿಂದ ವಂಚಿತರಾದವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿ, ಅವರಿಗೂ ಯೋಜನೆ ಲಾಭ ಮುಟ್ಟಿಸುತ್ತೇವೆ. ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಿಲ್ಲ. ವಿಕಲಚೇತನರಿಗೆ ಶೌಚಾಲಯ ಇಲ್ಲ. ಸಿಬ್ಬಂದಿಗಳ ಕೊರತೆಯಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ಕೊಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು”

– ನಾಗರಾಜ ಮಡಿವಾಳರ.

ಪಂಚ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ.

ಅಭ್ಯರ್ಥಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ರೋಜಗಾರ ಮೇಳದ ಮೂಲಕ 10 ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡುವ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಂದಿದ್ದರು. ಅದರಂತೆ ರೋಜಗಾರ ಮೇಳದಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ಇಪಿಎಫ್‌ಒನಲ್ಲಿ 23.73 ಕೋಟಿ ಹೊಸ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶನಿವಾರ ಕೇಶ್ವಾಪುರದ ಆಫೀಸರ್ಸ್ ಕ್ಲಬ್‌ನಲ್ಲಿ ನೈರುತ್ಯ ರೈಲ್ವೆ ಸಹಯೋಗದಲ್ಲಿ ಆಯೋಜಿಸಿದ್ದ ರೋಜಗಾರ್ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 10 ವರ್ಷದಲ್ಲಿ ಸುಮಾರು 40 ಸಾವಿರ ಕಿ.ಮೀ. ರೈಲ್ವೆ ವಿದ್ಯುದೀಕರಣ ಮಾಡಲಾಗಿದೆ. 10 ವರ್ಷಗಳ ಹಿಂದೆ ಸುಮಾರು 23 ಸಾವಿರ ಕಿ.ಮೀ. ವಿದ್ಯುದೀಕರಣ ಮಾಡಲಾಗಿತ್ತು. ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ. ರಾಷ್ಟçದಲ್ಲಿ ಮೂಲಸೌಕರ್ಯ ಸುಧಾರಣೆಯಾಗಿದೆ. ಮಹಿಳೆಯರು ಸಹ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತೀಯ ವಾಯು ಸೇನೆಯಲ್ಲಿ ಮಹಿಳಾ ಪೈಲಟ್‌ಗಳು ವಿಮಾನವನ್ನು ಚಲಾಯಿಸುತ್ತಿದ್ದಾರೆ. ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಅವರು ಹಾರೈಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಖುಲ್ ಶರಣ ಮಾಥುರ್, ಡಿಆರ್‌ಎಂ ಬೀಲಾ ಮೀನಾ, ಪಿಸಿಪಿಒ ಸೂರ್ಯ ಪ್ರಕಾಶ ಸೇರಿದಂತೆ ರೈಲ್ವೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ರೋಜಗಾರ್ ಮೇಳ ಕಾರ್ಯಕ್ರಮಗಳ ಮೂಲಕ ವಿತರಿಸಲಾಗುತ್ತಿದೆ. ಅದರಂತೆ ಸುಮಾರು 7.72 ಲಕ್ಷ ಉದ್ಯೋಗ ಪತ್ರಗಳನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಕ್ಲಬ್‌ನಿಂದ ಸಮಾಜಸೇವೆಗೆ ಉತ್ತಮ ಅವಕಾಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಇನ್ನರ್‌ವೀಲ್ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನೆರವೇರಿತು. ಸಂಸ್ಥೆಯ 2025-26ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಗಿರಿಜಾ ಮುದಗಲ್, ಕಾರ್ಯದರ್ಶಿಯಾಗಿ ನಿರ್ಮಲಾ ಅಡವಿ, ಖಜಾಂಚಿಯಾಗಿ ಮಂಜುಳಾ ಅಕ್ಕಿ ಮತ್ತು ಐಎಸ್‌ಓ ಮೈತ್ರಾದೇವಿ ಹಿರೇಮಠ ಹಾಗು ಎಡಿಟರ್ ಆಗಿ ಡಾ. ಶೃತಿ ಹೂವಿನ ಅಧಿಕಾರ ಸ್ವೀಕರಿಸಿದರು.

ಗದಗ ಇನ್ನರ್‌ವೀಲ್ ಸಂಸ್ಥೆಯ ಪಿಡಿಸಿ ಪ್ರೇಮಾ ಗುಳಗೌಡರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇನ್ನರ್‌ವೀಲ್ ಸಂಸ್ಥೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಲಕ್ಷಾಂತರ ಸದಸ್ಯರು ಇದರಲ್ಲಿ ಸೇವಾ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡ ಜನರಿಗಾಗಿ ಸಹಾಯಹಸ್ತ ಚಾಚುವ ಮನಸ್ಸು ಇದ್ದವರಿಗೆ ಇನ್ನರ್‌ವೀಲ್ ಸಂಸ್ಥೆ ಸಹಕಾರಿಯಾಗಿದೆ. ಸಮಾಜದಲ್ಲಿ ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೆಯದಾಗುವುದನ್ನು ಬಯಸಬೇಕು ಎನ್ನುವವರಿಗೆ ಕ್ಲಬ್ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಲಕ್ಷ್ಮೇಶ್ವರ ಸಂಸ್ಥೆ ಕಳೆದ 15 ವರ್ಷಗಳಿಂದ ನಿರಂತರವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವದು ಶ್ಲಾಘನೀಯ ಎಂದರು.

ನೂತನ ಅಧ್ಯಕ್ಷೆ ಗಿರಿಜಾ ಮುದಗಲ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವದು ನಮ್ಮ ಭಾಗ್ಯವಾಗಿದೆ. ನನ್ನ ಅಧಿಕಾರವಧಿಯಲ್ಲಿ ಸಂಸ್ಥೆಯು ಹಾಕಿಕೊಟ್ಟ ಮಾರ್ಗದಲ್ಲಿ ಕಾರ್ಯಗಳನ್ನು ಮಾಡುವದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಆರು ಜನ ಸದಸ್ಯರಾಗಿ ಸಂಸ್ಥೆಗೆ ಸೇರ್ಪಡೆಗೊಂಡರು. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಮಂಜುಳಾ ಓದುನವರ ಪ್ರಾರ್ಥಿಸಿದರು. ಅಧ್ಯಕ್ಷೆ ರೇಖಾ ವಡಕಣ್ಣವರ ಸ್ವಾಗತಿಸಿದರು, ಸುಲೋಚನಾ ಜವಾಯಿ ಪರಿಚಯಿಸಿದರು. ಜಯಶ್ರೀ ಮೆಳ್ಳಿಗೇರಿ ನಿರೂಪಿಸಿದರು. ಅಪೂರ್ವ ಪಾಟೀಲ, ದೀಪಿಕಾ ಪಾಟೀಲ, ಶಕುಂತಲಾ ಅಳಗವಾಡಿ, ನಿರ್ಮಲಾ ಅರಳಿ, ಅನ್ನಪೂರ್ಣ ಓದುನವರ, ಡಾ. ಸುಜಾತಾ ಸಂಗೂರ, ಕುಸುಮಾ, ಜಯಲಕ್ಷ್ಮೀ ಮಹಾಂತಶೆಟ್ಟರ, ಶೈಲಾ ಆದಿ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಹಿರಿಯ ಸದಸ್ಯೆಯಾಗಿರುವ ಮಾಲಾದೇವಿ ದಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಇನ್ನರ್‌ವೀಲ್ ಸಂಸ್ಥೆ ಪಟ್ಟಣದಲ್ಲಿ 15 ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ. ಸಂಸ್ಥೆಯಿಂದ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಪರಿಸರ ಇತ್ಯಾದಿ ಕಾರ್ಯಕ್ರಮಗಳು ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು.

error: Content is protected !!