Home Blog Page 232

ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ದರೋಡೆ‌ ಕೇಸ್: ಪ್ರಮುಖ ಆರೋಪಿ ಕಿಶೋರ್‌ ಸಾಳ್ವೆ ಅರೆಸ್ಟ್!

0

ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್‌ನಲ್ಲಿ ಎರಡು ಕಂಟೇನರ್‌ಗಳಲ್ಲಿ ಸಾಗಿಸುತ್ತಿದ್ದ ಅಂದಾಜು 400 ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಅನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಗೆ ತೆರಳಿ ಕಿಶೋರ್ ಸಾಳ್ವೆ ಶರಣಾಗಿದ್ದು, ನಂತರ ಆತನನ್ನು ವಶಕ್ಕೆ ಪಡೆಯಲಾಗಿದೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಮಹಾರಾಷ್ಟ್ರ ಸರ್ಕಾರ, ತನಿಖೆಯನ್ನು ಕಟ್ಟುನಿಟ್ಟಾಗಿ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕಿಶೋರ್ ಸಾಳ್ವೆ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ದೂರುದಾರರಾಗಿರುವ ಸಂದೀಪ್ ಪಾಟೀಲ್ ಕಿಡ್ನ್ಯಾಪ್ ಹಾಗೂ 400 ಕೋಟಿ ರೂ. ದರೋಡೆ ಸಂಬಂಧಿತ ಅಂಶಗಳ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವೈರಲ್ ಆಗಿರುವ ಆಡಿಯೋ ಸಂಭಾಷಣೆಗಳನ್ನೂ ಎಸ್‌ಐಟಿ ಪರಿಶೀಲನೆಗೆ ಒಳಪಡಿಸಿದೆ.

ಇತ್ತೀಚೆಗೆ ಸಂದೀಪ್ ಪಾಟೀಲ್ ಎಸ್‌ಐಟಿ ತನಿಖೆಯ ವಿರುದ್ಧ ಸಾರ್ವಜನಿಕವಾಗಿ ಆರೋಪಗಳನ್ನು ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ತನಿಖೆಯಲ್ಲಿ ಪಾರದರ್ಶಕತೆ ಇಲ್ಲದೆ ಒತ್ತಡ ಮತ್ತು ಏಕಪಕ್ಷೀಯ ತನಿಖೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ದೂರು ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನುವ ವರದಿಯೂ ಹೊರಬಿದ್ದಿದೆ.

Union Budget: ಸಾಲ-ಜಿಡಿಪಿ ಅನುಪಾತ ಶೇ 55.6ಕ್ಕೆ ಇಳಿಕೆ: ಆರ್ಥಿಕ, ಸಾಮಾಜಿಕ ಭದ್ರತೆಗೆ 3 ಕರ್ತವ್ಯಗಳ ಪ್ರಸ್ತಾಪ!

0

ನವದೆಹಲಿ: 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.56.1 ರಷ್ಟಿರುವ ಸಾಲ–ಜಿಡಿಪಿ ಅನುಪಾತವನ್ನು 2027ರ ಹಣಕಾಸು ವರ್ಷಕ್ಕೆ ಶೇ.55.6ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

ಬಜೆಟ್ ಭಾಷಣದಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ನಗರ ಆರ್ಥಿಕ ಪ್ರದೇಶಗಳಿಗೆ (CER) ಒಟ್ಟು ₹5,000 ಕೋಟಿ ಹಂಚಿಕೆ ಮಾಡಲಾಗಿದೆ ಎಂದರು. 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಶೇ.41ರಷ್ಟು ತೆರಿಗೆ ವಿಕೇಂದ್ರೀಕರಣ ಸೂತ್ರವನ್ನು ಮುಂದುವರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈಶಾನ್ಯ ಭಾರತದಲ್ಲಿ ದೇವಾಲಯಗಳು ಮತ್ತು ಮಠಗಳ ಸಂರಕ್ಷಣೆಗೆ ಬೌದ್ಧ ಸರ್ಕ್ಯೂಟ್ ಅಭಿವೃದ್ಧಿ ಯೋಜನೆ ಪ್ರಾರಂಭಿಸಲಾಗುವುದು. ಜೊತೆಗೆ, ದಿವ್ಯಾಂಗರಿಗೆ ನೆರವಾಗುವ ಸಾಧನಗಳ ಉತ್ಪಾದನೆ ಹೆಚ್ಚಿಸಲು ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ ಸ್ಥಾಪನೆಗೂ ಪ್ರಸ್ತಾಪ ಮಾಡಲಾಗಿದೆ.

ಭಾರತದ ಆರ್ಥಿಕ–ಸಾಮಾಜಿಕ ನೀತಿಗೆ 3 ಪ್ರಮುಖ ಕರ್ತವ್ಯಗಳು:

ಮೊದಲ ಕರ್ತವ್ಯ – ಸುಸ್ಥಿರ ಆರ್ಥಿಕ ಬೆಳವಣಿಗೆ:
ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಹಾಗೂ ಜಾಗತಿಕ ಅನಿಶ್ಚಿತತೆಗಳಿಗೆ ದೇಶವನ್ನು ಸ್ಥಿತಿಸ್ಥಾಪಕವಾಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಎರಡನೇ ಕರ್ತವ್ಯ – ಜನ ಕೇಂದ್ರಿತ ಅಭಿವೃದ್ಧಿ:
ಜನರ ಉದ್ಯೋಗ, ಆದಾಯ ಸ್ಥಿರತೆ ಮತ್ತು ಅಗತ್ಯ ಸೇವೆಗಳ ಪ್ರವೇಶವನ್ನು ಖಚಿತಪಡಿಸುವ ಗುರಿಯೊಂದಿಗೆ, ದೇಶದ ಸಮೃದ್ಧಿ ನಿರ್ಮಾಣದಲ್ಲಿ ಜನರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವುದಕ್ಕೆ ಒತ್ತು ನೀಡಲಾಗಿದೆ.

ಮೂರನೇ ಕರ್ತವ್ಯ – ಎಲ್ಲರನ್ನು ಒಳಗೊಂಡ ಅಭಿವೃದ್ಧಿ:
‘ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ’ ಎಂಬ ಧ್ಯೇಯದಡಿ, ಪ್ರತಿ ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯಕ್ಕೆ ಬೆಳವಣಿಗೆ ಅವಕಾಶ, ಸಂಪನ್ಮೂಲ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

AI ಮೂಲಕ ಕೃಷಿ ಕ್ರಾಂತಿ: ಕೇಂದ್ರ ಬಜೆಟ್ʼನಲ್ಲಿ ‘ಭಾರತ್ ವಿಸ್ತಾರ್’ ಘೋಷಿಸಿದ ವಿತ್ತ ಸಚಿವೆ!

ನವದೆಹಲಿ: ಕೃಷಿ ಕ್ಷೇತ್ರವನ್ನು ಸುಲಭ, ಸಂಘಟಿತ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೊಸ AI ಆಧಾರಿತ ಸಾಧನ ‘ಭಾರತ್ ವಿಸ್ತಾರ್’ ಅನ್ನು ಘೋಷಿಸಿದ್ದಾರೆ.

‘ಭಾರತ್ ವಿಸ್ತಾರ್’ವು ಕೃಷಿ ಸಂಪನ್ಮೂಲಗಳಿಗೆ ಪ್ರವೇಶ ಕಲ್ಪಿಸುವ ವಾಸ್ತವಿಕ ಸಂಯೋಜಿತ ವ್ಯವಸ್ಥೆಯಾಗಿದ್ದು, ಕೃಷಿ-ಸ್ಟಾಕ್ ಪೋರ್ಟಲ್‌ಗಳು ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)ಯ ಕೃಷಿ ಪದ್ಧತಿಗಳ ಪ್ಯಾಕೇಜ್‌ಗಳನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಬಹುಭಾಷಾ AI ವೇದಿಕೆ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಾಧನದ ಮೂಲಕ ಕೃಷಿ ಉತ್ಪನ್ನಗಳ ವೈವಿಧ್ಯೀಕರಣ, ಉತ್ಪಾದಕತೆ ಹೆಚ್ಚಳ, ರೈತರ ಆದಾಯ ವೃದ್ಧಿ ಹಾಗೂ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಸಾಧ್ಯವಾಗಲಿದೆ ಎಂದು ವಿತ್ತ ಸಚಿವೆ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಶ್ರೀಗಂಧ, ಕೋಕೋ ಹಾಗೂ ಗೋಡಂಬಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಬೆಂಬಲ ನೀಡಲಾಗುವುದು. ಈಶಾನ್ಯ ಪ್ರದೇಶಗಳಲ್ಲಿ ಅಗರ್ ಮರಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಬಾದಾಮಿ, ವಾಲ್ನಟ್ ಮತ್ತು ಪೈನ್ ಬೀಜಗಳಂತಹ ಬೆಳೆಗಳ ಅಭಿವೃದ್ಧಿಗೂ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿಸಿದರು.

ಭಾರತವು ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ರಾಷ್ಟ್ರವಾಗಿದ್ದು, ಸುಮಾರು 1 ಕೋಟಿ ರೈತರು ಸೇರಿದಂತೆ 3 ಕೋಟಿ ಜನರು ತೆಂಗಿನಕಾಯಿ ಆಧಾರಿತ ಜೀವನೋಪಾಯವನ್ನು ಹೊಂದಿದ್ದಾರೆ. ತೆಂಗಿನಕಾಯಿ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲು, ಪ್ರಮುಖ ತೆಂಗಿನಕಾಯಿ ಬೆಳೆಯುವ ರಾಜ್ಯಗಳಲ್ಲಿ ಉತ್ಪಾದಕವಲ್ಲದ ಮರಗಳನ್ನು ಹೊಸ ಸಸಿಗಳು ಅಥವಾ ಸುಧಾರಿತ ಜಾತಿಗಳೊಂದಿಗೆ ಬದಲಾಯಿಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

Union Budget: 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್​​: ದೆಹಲಿ-ವಾರಾಣಸಿ ಬುಲೆಟ್ ವೇಗದ ಪ್ರಯಾಣ..!

0

ನವದೆಹಲಿ: ದೇಶದ ಸಾರಿಗೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ಉದ್ದೇಶದಿಂದ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೇಂದ್ರ ಬಜೆಟ್‌ನಲ್ಲಿ ಹೈಸ್ಪೀಡ್ ರೈಲು ಯೋಜನೆಯ ಘೋಷಣೆ ಮಾಡಿದ್ದಾರೆ.

ಪ್ರಮುಖ ನಗರಗಳನ್ನು ಸಂಪರ್ಕಿಸುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಕಾರಿಡಾರ್‌ಗಳು ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಮತ್ತು ವಾರಾಣಸಿ–ಸಿಲಿಗುರಿ ಮಾರ್ಗಗಳನ್ನು ಒಳಗೊಂಡಿವೆ.

ಹೈಸ್ಪೀಡ್ ರೈಲು ಕಾರಿಡಾರ್‌ಗಳ ಮೂಲಕ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದು, ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಮಹಾನಗರಗಳು ಮತ್ತು ಪ್ರಮುಖ ಆರ್ಥಿಕ ಕೇಂದ್ರಗಳ ನಡುವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಈ ಯೋಜನೆಯಿಂದ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ಶ್ರೇಣಿಯ ರೈಲುಗಳನ್ನು ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅಸ್ತಿತ್ವದಲ್ಲಿರುವ ಕಾರಿಡಾರ್‌ಗಳನ್ನು ಹೈ-ಸ್ಪೀಡ್ ಕಾರಿಡಾರ್‌ಗಳಾಗಿ ಪರಿವರ್ತಿಸುವ ಯೋಜನೆಗಳನ್ನು ಸಹ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಯೋಜನೆಯಿಂದ ದೇಶದ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ.

ಎಲೆಕ್ಟ್ರಾನಿಕ್ಸ್–ಸೆಮಿಕಂಡಕ್ಟರ್‌ ಗೆ 40,000 ಕೋಟಿ ಅನುದಾನ: ನಿರ್ಮಲಾ ಸೀತಾರಾಮನ್ ಘೋಷಣೆ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಕೇಂದ್ರ ಬಜೆಟ್‌ನಲ್ಲಿ ಭವಿಷ್ಯದ ಪ್ರಮುಖ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದಾರೆ. ವಿಶೇಷವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯವನ್ನು ದೇಶದ ಮುಂದಿನ ಬೆಳವಣಿಗೆಯ ಪ್ರಮುಖ ಸ್ತಂಭವಾಗಿ ಗುರುತಿಸಲಾಗಿದೆ.

ಬಜೆಟ್ ಭಾಷಣದಲ್ಲಿ ಸೀತಾರಾಮನ್ ಎಲೆಕ್ಟ್ರಾನಿಕ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್‌ಗೆ ಅನುದಾನದ ಪ್ರಮಾಣವನ್ನು 40,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು. ಈ ಕ್ರಮವು ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸಲು ಹಾಗೂ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯಮಾಡಲಿದೆ.

ಹಣಕಾಸು ಸಚಿವೆ, ಭಾರತದ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಎರಡನೇ ಆವೃತ್ತಿಯ ಈ ಮಿಷನ್‌ನಲ್ಲಿ ಉಪಕರಣಗಳು ಮತ್ತು ವಸ್ತುಗಳ ತಯಾರಿಕೆ, ಫುಲ್ ಸ್ಟ್ಯಾಕ್ ಇಂಡಿಯನ್ ಐಪಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಬಜೆಟ್ ಪ್ರಕಾರ, ಈ ಯೋಜನೆಯು ದೇಶೀಯ ಸೆಮಿಕಂಡಕ್ಟರ್ ಸಪ್ಲೈ ಚೈನ್ ಅನ್ನು ಬಲಪಡಿಸಲು ಸಹಾಯ ಮಾಡುವುದಾಗಿದೆ.

ನಿರ್ಮಲಾ ಸೀತಾರಾಮನ್ ಅವರು, ಸರ್ಕಾರದ ಮೊದಲ ಸೆಮಿಕಂಡಕ್ಟರ್ ಮಿಷನ್‌ ಮೂಲಕ ದೇಶದಲ್ಲಿ ಸೆಮಿಕಂಡಕ್ಟರ್ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದಾಗಿದೆ ಮತ್ತು ಎರಡನೇ ಆವೃತ್ತಿಯ ಮಿಷನ್ ಭಾರತಕ್ಕೆ ಹೇಗೆ ಅನುಕೂಲವಾಗಲಿದೆ ಎಂಬುದನ್ನು ವಿವರಿಸಿದರು.

Budget 2026: ಭಾರತ ಬಯೋಫಾರ್ಮಾ ಹಬ್: 10,000 ಕೋಟಿ ರೂ. ಘೋಷಣೆ

0

ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದ ಬಯೋಫಾರ್ಮಾ ವಲಯವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಬಯೋಫಾರ್ಮಾ ಶಕ್ತಿ ಕಾರ್ಯಕ್ರಮ’ದಡಿ 10,000 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಮಹತ್ವದ ಘೋಷಣೆ ಮಾಡಿದರು.

ಈ ಯೋಜನೆಯ ಮೂಲಕ ಬಯೋಫಾರ್ಮಾ ಹಾಗೂ ಬಯೋಸಿಮಿಲರ್‌ಗಳಿಗೆ ಸಮಗ್ರ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ. ಜೊತೆಗೆ ಕಾರ್ಯತಂತ್ರದ ಮತ್ತು ಗಡಿನಾಡಿನ ವಲಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಕ್ಕೂ ಒತ್ತು ನೀಡಲಾಗುವುದು ಎಂದು ವಿತ್ತ ಸಚಿವೆ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತೀಯ ಆರ್ಥಿಕತೆ ಹಣಕಾಸಿನ ಶಿಸ್ತು ಹಾಗೂ ನಿರಂತರ ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಾಕ್ಚಾತುರ್ಯಕ್ಕಿಂತ ಸುಧಾರಣೆಯ ಮಾರ್ಗವನ್ನು ಆಯ್ದುಕೊಂಡಿದ್ದು, ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯನ್ನು ದಿಕ್ಸೂಚಿಯಾಗಿ ಮಾಡಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು.

ನಾವು ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 12 ವರ್ಷಗಳಲ್ಲಿ ಭಾರತದ ಆರ್ಥಿಕ ಪಥವು ಸ್ಥಿರತೆ, ಹಣಕಾಸಿನ ಶಿಸ್ತು, ನಿರಂತರ ಬೆಳವಣಿಗೆ ಮತ್ತು ನಿಯಂತ್ರಿತ ಹಣದುಬ್ಬರದಿಂದ ಗುರುತಿಸಲ್ಪಟ್ಟಿದೆ ಎಂದು ಸೀತಾರಾಮನ್ ವಿವರಿಸಿದರು.

Budget 2026: ಇದು ಯುವ ಶಕ್ತಿಯಿಂದ ಪ್ರೇರಿತವಾದ ಬಜೆಟ್: ನಿರ್ಮಲಾ ಸೀತಾರಾಮನ್

0

ನವದೆಹಲಿ: ಇದು ಯುವ ಶಕ್ತಿಯಿಂದ ಪ್ರೇರಿತವಾದ ಬಜೆಟ್ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್‌ ಮಂಡನೆ ವೇಳೆ ಮಾತನಾಡಿದ ಅವರು, ಬಜೆಟ್ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಲಾಗಿದೆ.

ಬೆಳವಣಿಗೆ, ಉದ್ಯೋಗಗಳು ಮತ್ತು ನಾವೀನ್ಯತೆಗಾಗಿ ಭಾರತದ ಯುವಜನರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ ಎಂದು ಹೇಳಿದ್ದಾರೆ. ಭಾರತವು ಜಾಗತಿಕ ಮಾರುಕಟ್ಟೆಯೊಂದಿಗೆ ಆಳವಾಗಿ ಸಂಯೋಜಿಸಲ್ಪಡುತ್ತದೆ. ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಿದ ಈ ದೇಶದ ನಾಗರಿಕರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ನಾನು ಭಾಗ A ಅನ್ನು ಪ್ರಾರಂಭಿಸಲು ಬಯಸುತ್ತೇನೆ.

ರೈತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಯುವಕರು, ಮಹಿಳೆಯರು ಮತ್ತು ಬಡವರು ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ ಎಂದರು.

ನಾವು ವ್ಯಾಪಾರ ಮತ್ತು ಬಹುಪಕ್ಷೀಯತೆಗೆ ಬೆದರಿಕೆ ಇರುವ ಬಾಹ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ.ಹೊಸ ತಂತ್ರಜ್ಞಾನವು ಉತ್ಪಾದನಾ ವ್ಯವಸ್ಥೆಗಳನ್ನು ಪರಿವರ್ತಿಸುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದತ್ತ ಭಾರತವು ಆತ್ಮವಿಶ್ವಾಸದ ಹೆಜ್ಜೆಗಳನ್ನು ಇಡುವುದನ್ನು ಮುಂದುವರಿಸುತ್ತದೆ.

ಭಾರತ ಜಾಗತಿಕ ಮಾರುಕಟ್ಟೆಗಳಲ್ಲಿ ಸಂಯೋಜನೆಗೊಳ್ಳಬೇಕು ಮತ್ತು ಹೆಚ್ಚು ಹೆಚ್ಚು ರಫ್ತು ಮಾಡಬೇಕು. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವ ನಮ್ಮ ಪ್ರಯಾಣದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ 5ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ! 4-1ರಲ್ಲಿ ಸರಣಿ ಗೆದ್ದ ಟೀಮ್ ಇಂಡಿಯಾ

0

2026ರ ಟಿ20 ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಟಿ20 ಸರಣಿಯನ್ನು ಆಡಿದ ಟೀಂ ಇಂಡಿಯಾ, ಐದು ಪಂದ್ಯಗಳ ಸರಣಿಯನ್ನು 4–1 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಸರಣಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿದ್ದ ಭಾರತ, ಐದನೇ ಪಂದ್ಯದಲ್ಲೂ ಏಕಪಕ್ಷೀಯ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ, 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಕ್ರೀಸ್‌ಗೆ ಬಂದರೂ, ಇಬ್ಬರೂ 42 ರನ್‌ಗಳೊಳಗೆ ಔಟಾದರು.

ಅನಂತರ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 103 ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 63 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರೆ, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್ ಪಡೆದರೂ, ಭಾರತೀಯ ಬ್ಯಾಟ್ಸ್‌ಮನ್‌ಗಳ ರನ್‌ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

271 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆದಿತು. ಆರಂಭಿಕ ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸಿ ತಂಡಕ್ಕೆ ಚುರುಕು ಆರಂಭ ನೀಡಿದರು. ರಚಿನ್ ರವೀಂದ್ರ 17 ಎಸೆತಗಳಲ್ಲಿ 30 ರನ್‌ಗಳ ಕಾಣಿಕೆ ನೀಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಆದರೆ ಆ ಬಳಿಕ ಭಾರತೀಯ ಬೌಲರ್‌ಗಳು ಪಂದ್ಯದ ಹಣೆಬರಹ ಬದಲಿಸಿದರು. ಅರ್ಷದೀಪ್ ಸಿಂಗ್ ಐದು ವಿಕೆಟ್‌ಗಳನ್ನು ಕಬಳಿಸಿ ಕಿವೀಸ್ ಬ್ಯಾಟಿಂಗ್ ಲೈನ್‌ಅಪ್‌ನ್ನು ಕುಸಿತಕ್ಕೆ ತಳ್ಳಿದರು. ಅಕ್ಷರ್ ಪಟೇಲ್ ಮೂರು ಹಾಗೂ ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದು ಬೆಂಬಲ ನೀಡಿದರು. ಪರಿಣಾಮವಾಗಿ ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು. ಭಾರತ 46 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

Gold-Silver Price: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ..!

0

ನವದೆಹಲಿ: ಕೇಂದ್ರ ಬಜೆಟ್ 2026ರ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಸತತ ಏರಿಕೆಯ ಬಳಿಕ, ಚಿನ್ನ ಹಾಗೂ ಬೆಳ್ಳಿ ದರಗಳು ಸತತ ಎರಡನೇ ದಿನವೂ ತೀವ್ರ ಕುಸಿತ ದಾಖಲಿಸಿವೆ.

ಚಿನ್ನದ ಬೆಲೆ 10 ಗ್ರಾಂಗೆ ₹8,620 ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ ₹45,000 ಕುಸಿತ ಕಂಡಿದೆ. ಇದರಿಂದಾಗಿ ಕೇವಲ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ ಒಟ್ಟು ₹18,000 ಮತ್ತು ಬೆಳ್ಳಿಯಲ್ಲಿ ₹60,000ರಷ್ಟು ಇಳಿಕೆ ದಾಖಲಾಗಿದೆ.

ಬೆಂಗಳೂರಿನಲ್ಲಿ, 22 ಕ್ಯಾರಟ್ ಚಿನ್ನ 10 ಗ್ರಾಂಗೆ ₹7,900 ಕುಸಿದು ₹1,47,200ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನ 10 ಗ್ರಾಂಗೆ ₹8,620 ಇಳಿದು ₹1,60,580ಕ್ಕೆ ಇಳಿದಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ₹45,000ರ ಭಾರೀ ಕುಸಿತದೊಂದಿಗೆ ₹3.50 ಲಕ್ಷಕ್ಕೆ ಇಳಿದಿದೆ.

ದೆಹಲಿಯಲ್ಲಿ, 99.9 ಶುದ್ಧತೆಯ ಚಿನ್ನ 10 ಗ್ರಾಂಗೆ ₹3,500 ಕುಸಿದು ₹1,65,500ಕ್ಕೆ ತಲುಪಿದೆ. ಬೆಳ್ಳಿ ಬೆಲೆ ₹72,500 ಇಳಿಕೆಯೊಂದಿಗೆ ₹3.12 ಲಕ್ಷಕ್ಕೆ ಕುಸಿದಿದೆ.

ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರಗಳು ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಹಿಂತೆಗೆದುಕೊಳ್ಳುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಅಮೆರಿಕದ ಕೇಂದ್ರ ಬ್ಯಾಂಕ್‌ನ ನೂತನ ಮುಖ್ಯಸ್ಥರಾಗಿ ಹಣದುಬ್ಬರ ನಿಯಂತ್ರಣಕ್ಕೆ ಒಲವು ಹೊಂದಿರುವ ಕೆವಿನ್ ನೇಮಕ,

ಶಾರ್ಟ್‌ಸೆಲ್ಲರ್‌ಗಳಿಗೆ ಮಾರಾಟದ ಗಡುವು ಸಮೀಪಿಸಿರುವುದು ಹಾಗೂ ಬೆಳ್ಳಿಯ ಮೇಲೆ ಹಿಡಿತ ಕಡಿಮೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರುಕಟ್ಟೆಯಲ್ಲಿ ನಡೆಸುತ್ತಿರುವ ತಂತ್ರಗಳು ಕೂಡ ದರ ಕುಸಿತಕ್ಕೆ ಕಾರಣವಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

Cylinder Price Hike: ಕೇಂದ್ರ ಬಜೆಟ್ ದಿನವೇ ಸಿಲಿಂಡರ್ ಬೆಲೆ ಹೆಚ್ಚಳ! ನೂತನ ದರ ಹೀಗಿದೆ

0

ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಎಲ್‌ಪಿಜಿ ಗ್ರಾಹಕರಿಗೆ ಹೊಡೆತ ಎದುರಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಭಾನುವಾರ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹50 ಹೆಚ್ಚಿಸಿವೆ. ವಾಣಿಜ್ಯ ಹಾಗೂ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳು ಫೆಬ್ರವರಿ 1, 2026ರಿಂದ ಜಾರಿಗೆ ಬಂದಿವೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿಯ ತಿನಿಸು ಅಂಗಡಿಗಳು (ಧಾಬಾಗಳು) ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳು ಬಳಸುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಸಿಲಿಂಡರ್ ದರಗಳನ್ನು ಪರಿಷ್ಕರಿಸುತ್ತವೆ. ಜನವರಿ ತಿಂಗಳಲ್ಲಿ ಈಗಾಗಲೇ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ₹111 ಹೆಚ್ಚಿಸಲಾಗಿತ್ತು.

  • ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹1,691.50ರಿಂದ ₹1,740.50ಗೆ ಏರಿಕೆಯಾಗಿದೆ.
  • ಕೋಲ್ಕತ್ತಾದಲ್ಲಿ ಬೆಲೆ ₹1,844.50 ಆಗಿದೆ.
  • ಮುಂಬೈನಲ್ಲಿ ₹1,642.50ರಿದ್ದ ಬೆಲೆ ಇದೀಗ ₹1,692 ಆಗಿದೆ.

ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಬೆಲೆ ಏರಿಕೆಯಾದರೂ, ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದರ ಕಡಿತ ಮಾಡಲಾಗಿತ್ತು. ನವೆಂಬರ್‌ನಲ್ಲಿ ₹5 ಮತ್ತು ಡಿಸೆಂಬರ್‌ನಲ್ಲಿ ₹10ರಷ್ಟು ಕಡಿತ ನೀಡಲಾಗಿತ್ತು.

ಅದಕ್ಕೂ ಮೊದಲು, ಅಕ್ಟೋಬರ್ 1ರಂದು ಕೇವಲ ₹15.50ರಷ್ಟು ಅಲ್ಪ ಏರಿಕೆ ಕಂಡುಬಂದಿತ್ತು. ಅಕ್ಟೋಬರ್‌ಗೂ ಮೊದಲು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸತತ ಆರು ತಿಂಗಳುಗಳ ಕಾಲ ಇಳಿಕೆಯಾಗಿದ್ದವು.ಇಂಡಿಯನ್ ಆಯಿಲ್ ಪ್ರಕಟಿಸಿದ ಮಾಹಿತಿಯಂತೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

  • ದೆಹಲಿಯಲ್ಲಿ 14.2 ಕೆಜಿ ದೇಶೀಯ ಸಿಲಿಂಡರ್ ಬೆಲೆ ₹853,
  • ಉತ್ತರ ಪ್ರದೇಶದಲ್ಲಿ ₹850.50,
  • ಪಾಟ್ನಾದಲ್ಲಿ ₹951,
  • ಮುಂಬೈನಲ್ಲಿ ₹852.50,
  • ಲಕ್ನೋದಲ್ಲಿ ₹890.50 ಆಗಿದೆ.

ಕಳೆದ ಬಜೆಟ್ ದಿನವಾದ ಫೆಬ್ರವರಿ 1, 2025ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹6.50 ಕಡಿಮೆ ಮಾಡಲಾಗಿತ್ತು, ಆದರೆ ಗೃಹಬಳಕೆಯ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

error: Content is protected !!