Home Blog Page 234

ಕ್ಯಾನ್ಸರ್ ಕುರಿತು ಅರಿವು ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಮಹಿಳಾ ವಿವಿಧೋದ್ದೇಶಗಳ ಸಂಘದ ಮಾಸಿಕ ಸಭೆಯಲ್ಲಿ ಕ್ಯಾನ್ಸರ್ ಕುರಿತು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವೀಣಾ ತಿರ್ಲಾಪೂರ್ ಮಾತನಾಡಿ, ಕ್ಯಾನ್ಸರ್ ಎಂಬ ಪದ ಕೇಳಿದಾಗಲೇ ಜನರಲ್ಲಿ ಭಯ ಉಂಟಾಗುತ್ತದೆ. ಆದರೆ ತಿಳುವಳಿಕೆ, ಜಾಗೃತಿ ಮತ್ತು ಸಮಯೋಚಿತ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ನ್ನು ಗೆಲ್ಲುವುದು ಸಾಧ್ಯ. ಕ್ಯಾನ್ಸರ್ ಎಂದರೆ ದೇಹದ ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುವುದರಿಂದ ಉಂಟಾಗುವ ರೋಗ. ಧೂಮಪಾನ, ಮದ್ಯಪಾನ, ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಪರಿಸರ ಮಾಲಿನ್ಯವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ.

ಇಂದಿನ ದಿನಗಳಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್ ಹೆಚ್ಚು ಕಂಡುಬರುತ್ತಿವೆ. ಆದರೆ ಸಂತಸದ ವಿಷಯವೆಂದರೆ, ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೇಮಾ ಮೇಟಿ ಮಾತನಾಡಿ, ನಿಯಮಿತ ಆರೋಗ್ಯ ತಪಾಸಣೆ, ಸ್ವಯಂ ಪರೀಕ್ಷೆ, ವೈದ್ಯರ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿಯು ಅತ್ಯಂತ ಅಗತ್ಯ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ಸಮತೋಲಿತ ಆಹಾರ ಸೇವಿಸುವುದು, ದಿನನಿತ್ಯ ವ್ಯಾಯಾಮ ಮಾಡುವುದು ಮತ್ತು ಧನಾತ್ಮಕ ಮನೋಭಾವ ಇವುಗಳು ಕ್ಯಾನ್ಸರ್ ತಡೆಯಲು ಸಹಾಯಕವಾಗುತ್ತವೆ ಎಂದು ನುಡಿದರು.

ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ ಮಾತನಾಡಿ, ಕ್ಯಾನ್ಸರ್ ರೋಗಿಗಳ ಬಗ್ಗೆ ಸಹಾನುಭೂತಿ ಮತ್ತು ಬೆಂಬಲ ತೋರಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಸರೋಜಾ ಪೈಲ್ ನಿರ್ವಹಿಸಿದರು. ಭಾಗ್ಯ ಶಿರೋಳ ವಂದಿಸಿದರು. ಕಾರ್ಯಕ್ರಮದಲ್ಲಿ ನೀಲಾ ಮುದರಡ್ಡಿ, ಸುಮಂಗಲ ರಡ್ಡರ್, ಗಿರಿಜಾ ಸುರೇಬಾನ್, ದೊಡ್ಡಮನಿ, ರಾಜೇಶ್ವರಿ ಶಿರೋಳ, ಸುಮಂಗಲ ಪಾಟೀಲ್ ಮುಂತಾದವರಿದ್ದರು.

ಹಿಂದೂಗಳ ಶಕ್ತಿ ಪ್ರದರ್ಶನವಾಗಬೇಕಿದೆ: ಶಾಸಕ ಕೆ. ನೇಮಿರಾಜ್ ನಾಯ್ಕ್

0
  • ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ. ನೇಮಿರಾಜ್ ನಾಯ್ಕ್

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಿಂದೂ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ಮಾತೃ ಸ್ಥಾನದಲ್ಲಿದೆ. ಫೆಬ್ರವರಿ 7ರಂದು ಪಟ್ಟಣದಲ್ಲಿ ನಡೆಯಲಿರುವ ಸಮಾವೇಶಕ್ಕೆ ಸಹಸ್ರಾರು ಜನ ಸೇರಬೇಕು. ಹಿಂದೂಗಳ ಶಕ್ತಿ ಎಷ್ಟಿದೆ ಎಂಬುದನ್ನು ಪ್ರದರ್ಶಿಸಬೇಕಿದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು.

ಅವರು ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಹಿಂದೂಗಳ ದೌರ್ಬಲ್ಯಗಳನ್ನು ಬಳಸಿಕೊಂಡು ಈ ದೇಶವನ್ನು ಮೊಘಲರು ಸುಮಾರು 800 ವರ್ಷಗಳ ಕಾಲ ಹಾಗೂ ಬ್ರಿಟಿಷರು 250 ವರ್ಷಗಳ ಕಾಲ ಆಳಿದ್ದಾರೆ. ಈಗಲೂ ಹಿಂದೂಗಳಾದ ನಾವೆಲ್ಲರೂ ಎಚ್ಚೆತ್ತುಕೊಳ್ಳದೇ ಹೋದರೆ ಹಿಂದೂ ಧರ್ಮದ ನಾಶ ನಿಶ್ಚಿತ. ಅಲ್ಲದೇ ನಮ್ಮ ರಾಷ್ಟ್ರದಲ್ಲಿ ಹಿಂದೂ ಧರ್ಮವನ್ನು ಉಚ್ಚಸ್ಥಿತಿಗೆ ಕೊಂಡೊಯ್ದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟರು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ ಮಾತನಾಡಿ, ನಾವೆಲ್ಲರೂ ಸರ್ವ ಸಮಾಜಗಳನ್ನು ಪ್ರೀತಿಸಬೇಕು. ಇಲ್ಲಿ ರಾಜಕೀಯ ಸಲ್ಲದು, ನಾವೆಲ್ಲರೂ ಪಕ್ಷಾತೀತ ಹಾಗೂ ಜಾತ್ಯತೀತರಾಗಿರಬೇಕು ಎಂದರು.

ಬಸವರಾಜ್ ರೆಡ್ಡಿ, ಬಣಜಿಗ ಸಮಾಜದ ಮುಖಂಡ ರಾಚೋಟೆಪ್ಪ ಹಾಗೂ ಕಾಂಗ್ರೆಸ್ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿದರು. ಮಾಧವಿ ಚಿದ್ರಿ ಪ್ರಾರ್ಥಿಸಿದರು. ಕನ್ನಿಹಳ್ಳಿ ಚಂದ್ರಶೇಖರ್ ಸ್ವಾಗತಿಸಿದರು. ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ ನಿರೂಪಿಸಿದರು. ಕಾರ್ಯಕ್ರಮದ ಆಶೀರ್ವಚನವನ್ನು ನಂದಿಪುರ ಕ್ಷೇತ್ರದ ಡಾ. ಮಹೇಶ್ವರ ಸ್ವಾಮಿಗಳು ನೀಡಿದರು. ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮಿಗಳು ಇದ್ದರು.

ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಅವಿನಾಶ್ ಜಾಧವ, ಸಂಚಿ ಶಿವಕುಮಾರ, ಗುರುಬಸವರಾಜ, ಸುಭಾಷ್ ಚಂದ್ರ, ಸಂದೀಪ್ ಶಿವಮೊಗ್ಗ, ಮಹಿಳಾ ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು, ಅಧ್ಯಕ್ಷರು ಉಪಸ್ಥಿತರಿದ್ದರು. ಹಿಂದೂ ಸಮಾವೇಶದ ರೂಪುರೇಷೆಗಳು ಹೇಗಿರಬೇಕೆಂದು, ಪುರಸಭೆ ಸದಸ್ಯರೂ ಆದ ಕಮಲಮ್ಮ ಶಿವಮೊಗ್ಗ, ಚಿಂತರಪಳ್ಳಿ ಬಿಜೆಪಿ ಮುಖಂಡ ಜಿ.ಎಸ್. ಬಣಕಾರ ಹಾಗೂ ಹೆಗ್ಡಾಳ ಶ್ರೀನಿವಾಸ್ ಸಲಹೆ-ಸೂಚನೆಗಳನ್ನು ನೀಡಿದರು.

ಪ್ರಾಸ್ತಾವಿಕವಾಗಿ ಡಾ. ಬಂಡ್ರಿ ವಿಶ್ವನಾಥ ಮಾತನಾಡಿ, ಸಂಸ್ಕಾರ, ಸತ್ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದೇ ಹಿಂದೂ ಸಮಾವೇಶದ ಉದ್ದೇಶವಾಗಿದೆ. ನಮ್ಮಲ್ಲಿ ಅಸಂಖ್ಯಾತ ಜಾತಿ, ಭಾಷೆಗಳಿದ್ದು, ಅವೆಲ್ಲವುಗಳನ್ನು ಒಂದುಗೂಡಿಸಿ, ಹಿಂದೂ ಧರ್ಮವನ್ನು ಬೆಳೆಸಬೇಕಿದೆ. ಇದೊಂದು ಪಕ್ಷಾತೀತ, ಜಾತ್ಯತೀತ ಕಾರ್ಯಕ್ರಮವಾಗಿದ್ದು, ಹಿಂದೂ ಪರಂಪರೆಯನ್ನು ಉಳಿಸಬೇಕಾಗಿದೆ ಎಂದರು.

ಗ್ರಾಮೀಣ ಜಾತ್ರೆಗಳಲ್ಲಿ ಪಿನ್ ಬಾಲ್ ಜೂಜು!

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದಲ್ಲಿ ಜರುಗಿರುವ ಜಾತ್ರಾ ಮಹೋತ್ಸವ ಸೇರಿದಂತೆ ಪ್ರತಿ ವರ್ಷ ನಡೆಯುವ ಗ್ರಾಮೀಣ ಜಾತ್ರೆಗಳು ಜನರ ಮನರಂಜನೆಗೆ ಪ್ರಮುಖ ಸ್ಥಳಗಳಾಗಿವೆ. ಇಂತಹ ಜಾತ್ರೆಗಳಲ್ಲಿ ವಿವಿಧ ಆಟಗಳು, ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಮಳಿಗೆಗಳು ಕಾಣಸಿಗುತ್ತವೆ. ಇವುಗಳ ಜೊತೆಗೆ ಪಿನ್ ಬಾಲ್ ಆಟದಂತಹ ಕೆಲವು ಆಟಗಳು ಜೂಜಿನ ರೂಪವನ್ನು ಪಡೆದುಕೊಳ್ಳುತ್ತಿರುವುದು ಯುವಕರನ್ನು ದಾರಿ ತಪ್ಪಿಸುವ ಕೇಂದ್ರಗಳಾಗಿವೆ.

ಪಿನ್ ಬಾಲ್ ಆಟದಲ್ಲಿ ಆಟಗಾರನು ನಿರ್ದಿಷ್ಟ ಮೊತ್ತದ ಹಣವನ್ನು ಪಾವತಿಸಿ ಚೆಂಡನ್ನು ಯಂತ್ರದಲ್ಲಿ ಬಿಡುತ್ತಾನೆ. ಚೆಂಡು ಬಿದ್ದ ಸ್ಥಳದ ಆಧಾರದ ಮೇಲೆ ಹಣ ನಿಗದಿಯಾಗುತ್ತದೆ. ಆಟವು ಕೇವಲ ಮನರಂಜನೆಯ ಮಟ್ಟವನ್ನು ಮೀರಿ ಜೂಜಿನ ಸ್ವರೂಪ ಪಡೆಯುತ್ತದೆ.

ಜಾತ್ರೆಯಲ್ಲಿ ನಡೆಯುವ ಪಿನ್ ಬಾಲ್ ಗ್ಯಾಂಬ್ಲಿಂಗ್ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳು ಮತ್ತು ಯುವಕರು ಸುಲಭವಾಗಿ ಆಕರ್ಷಿತರಾಗುತ್ತಾರೆ. ಹಣದ ನಷ್ಟ ಮತ್ತು ವ್ಯಸನಕ್ಕೆ ದಾರಿ ಮಾಡಿಕೊಡುತ್ತದೆ. ಅಕ್ರಮ ಜೂಜಿನ ಚಟ ಬೆಳೆಸುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಕಾನೂನು ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಜೂಜು ನಡೆಸುವುದು ಅಪರಾಧವಾಗಿದ್ದು, ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮಸ್ಥರು.

ಜಾತ್ರೆಗಳು ಆರೋಗ್ಯಕರ ಮನರಂಜನೆಯ ಕೇಂದ್ರಗಳಾಗಿರಬೇಕು. ಪಿನ್ ಬಾಲ್ ಆಟವನ್ನು ಗ್ಯಾಂಬ್ಲಿಂಗ್ ರೂಪದಲ್ಲಿ ನಡೆಸುವುದು ಸಮಾಜಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಇಂತಹ ಆಟಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಆಗ್ರಹಿಸಿದ್ದಾರೆ.

ಫೆಬ್ರವರಿ 7-8ರಂದು ಮಲೇಷ್ಯಾಕ್ಕೆ ಭೇಟಿ ಕೊಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ!

0

ನವದೆಹಲಿ:- ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಈ ವಾರದ ಕೊನೆಯಲ್ಲಿ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಈ ಭೇಟಿ ಫೆಬ್ರವರಿ 7 ಮತ್ತು 8ರಂದು ನಡೆಯಲಿದೆ ಮತ್ತು ಇದು ಮೋದಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿ. ಅಗಸ್ಟ್ 2024ರಲ್ಲಿ ಭಾರತ-ಮಲೇಷ್ಯಾ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಏರಿಸಿದ ನಂತರ, ಈ ಭೇಟಿ ಪ್ರಧಾನಿಯಾಗಿ ದ್ವಿಪಕ್ಷೀಯ ಚರ್ಚೆಗಳಿಗೆ ಮತ್ತು ವ್ಯಾಪಾರ, ಹೂಡಿಕೆ, ಭದ್ರತೆ, ಕಡಲ ಸಹಕಾರ, ಡಿಜಿಟಲ್ ತಂತ್ರಜ್ಞಾನ, ಹಣಕಾಸು, ಇಂಧನ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ.

ಮಲೇಷ್ಯಾದಲ್ಲಿ 2.9 ಮಿಲಿಯನ್ ಭಾರತೀಯ ವಲಸೆಗಾರರ ಹಾಜರಾತಿಯು ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ. ಪ್ರಧಾನಿಗಳು ದ್ವಿಪಕ್ಷೀಯ ಚರ್ಚೆಗಳಿಗೆ ಜೊತೆಗೆ ಭಾರತೀಯ ಸಮುದಾಯ ಮತ್ತು ಕೈಗಾರಿಕಾ, ವ್ಯಾಪಾರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಅನಧಿಕೃತ ಅಂಗಡಿ, ಮುಂಗಟ್ಟುಗಳ ತೆರವು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಪಾಲಾ-ಬದಾಮಿ ರಸ್ತೆ, ನರೇಗಲ್ಲ ರಸ್ತೆಯಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಬುಧವಾರ ಜರುಗಿತು.

ಅಬ್ಬಿಗೇರಿ ಗ್ರಾಮದ ಪಾಲಾ-ಬದಾಮಿ ರಸ್ತೆಯಲ್ಲಿನ ಸರ್ಕಾರಿ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಕೌಂಪೌಂಡ್ ಸುತ್ತಲೂ ನಿರ್ಮಿಸಲಾಗಿದ್ದ 30ಕ್ಕೂ ಅಧಿಕ ಅನಧಿಕೃತ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು, ಪಾಲಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ರೋಣ ತಾ.ಪಂ ಇಒ ಅವರಿಗೆ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡರು.

ರೋಣ ತಹಸೀಲ್ದಾರ ನಾಗರಾಜ ಕೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಜೆಇ ಸಂತೋಷ ನೀಲಣ್ಣವರ, ಸಂಗಯ್ಯ ಗದ್ದನಕೇರಿ, ಪಿಡಿಒ ಲೋಹಿತ್ ಎಂ, ಸಿಆರ್‌ಪಿ ಎಸ್.ಆರ್. ಮೂಲಿಮನಿ ಇದ್ದರು.

U19 World Cup: ದಾಖಲೆಯ ಚೇಸ್‌ನೊಂದಿಗೆ ಸತತ 6ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ

0

2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಯುವ ತಂಡ ಅಫ್ಘಾನಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸತತ 6ನೇ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಆಯುಷ್ ಮ್ಹಾತ್ರೆ ನಾಯಕತ್ವದ ತಂಡ 310 ರನ್ ಗುರಿಯನ್ನು 41.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ ತಲುಪಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಯಾಜೈ (101*) ಅವರ ಶತಕಗಳ ನೆರವಿನಿಂದ 310 ರನ್ ಗಳಿಸಿತು. ಭಾರತ ತಂಡ ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿತು. ವೈಭವ್ ಸೂರ್ಯವಂಶಿ 68 ರನ್ ಗಳಿಸಿದರೆ, ನಾಯಕ ಆಯುಷ್ ಮ್ಹಾತ್ರೆ 62 ರನ್ ಗಳಿಸಿದರು. ಮುಖ್ಯ ಆಟಗಾರ ಆರನ್ ಜಾರ್ಜ್ 115 ರನ್ (104 ಎಸೆತಗಳಲ್ಲಿ, 15 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡವನ್ನು ಗೆಲುವಿಗೆ ಕೊಂಡೊಯ್ದರು. ಕೊನೆಯಲ್ಲಿ ವಿಹಾನ್ ಮಲ್ಹೋತ್ರಾ ಉತ್ತಮ ಆಟದ ಮೂಲಕ ಜಯವನ್ನು ಖಚಿತಪಡಿಸಿದರು.

ಈ ಜಯದೊಂದಿಗೆ ಭಾರತ 10ನೇ ಬಾರಿಗೆ ಅಂಡರ್-19 ವಿಶ್ವಕಪ್ ಫೈನಲ್‌ಗೆ ತಲುಪಿದ್ದು, 8ನೇ ಬಾರಿ ಪ್ರಶಸ್ತಿ ಗೆಲ್ಲಲು ಭರ್ಜರಿ ಅವಕಾಶ ಹೊಂದಿದೆ. ಫೆಬ್ರವರಿ 6 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಆಡಲಿದೆ. ಭಾರತ ಸತತ 6ನೇ ಬಾರಿ ಫೈನಲ್ ಪ್ರವೇಶಿಸಿದ್ದರೆ, ಇಂಗ್ಲೆಂಡ್ 28 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಎದುರಾಗಲಿದೆ.

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ: ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಣ ಸೇವೆಯೊಂದಿಗೆ ಮಕ್ಕಳಲ್ಲಿ ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಮಗುವನ್ನು ಮನುಷ್ಯನ್ನಾಗಿಸಿದಾಗ ಮಾತ್ರ ಶಿಕ್ಷಣದ ಉದ್ದೇಶ ಸಾಫಲ್ಯವಾಗುತ್ತದೆ ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.

ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಕ್ಕಳಲ್ಲಿನ ಬುದ್ಧಿಶಕ್ತಿ ವಿಕಸನಗೊಳಿಸಿ ಸಮಾಜದ ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸುವುದು ಶಿಕ್ಷಣದ ಮೂಲ ಆಶಯವಾಗಿದೆ. ಶಿಕ್ಷಣ ಸೇವೆಯನ್ನೇ ಧ್ಯೇಯವಾಗಿಸಿಕೊಂಡ ತಾಯಂದಿರು ತಮ್ಮ ಶ್ರೇಷ್ಠ ಚಿಂತನೆಗಳಿಂದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಪ್ರಾರಂಭಿಸಿ 75 ವರ್ಷಗಳಿಂದ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿ ಅವರನ್ನು ಸುಸಂಸ್ಕೃತ ನಾಗರಿಕರನ್ನಾಗಿಸುತ್ತಿರುವ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದ್ದು, ಸೇವಾ ಕಾರ್ಯದಿಂದ ಸಂಸ್ಥೆ ಉತ್ತರೋತ್ತರವಾಗಿ ಪ್ರಗತಿ ಹೊಂದಲೆಂದು ಆಶೀರ್ವದಿಸಿದರು.

ಮುಕ್ತಿಮಂದಿರ ಧರ್ಮ ಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಶುಭಾಶೀರ್ವಾದ ನೀಡಿ, ನಡೆದಾಡಿದ ದೇವರು ಲಿಂ. ವೀರಗಂಗಾಧರ ಜಗದ್ಗುರುಗಳ ಅಭಯಾಶೀರ್ವಾದದಿಂದ ಗುರು-ಹಿರಿಯರ ಆಶೀರ್ವಾದ, ಸಹಕಾರದಿಂದ 1946ರಲ್ಲಿ ಮಹಿಳೆಯರೇ ಕಟ್ಟಿ ಬೆಳೆಸಿದ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಸೇವಾ ಕಾರ್ಯ ವಿಸ್ತಾರಗೊಳ್ಳಲಿ ಎಂದರು.

ಈ ವೇಳೆ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಸಂಸ್ಥೆಯ ಅಧ್ಯಕ್ಷರಾದ ಜಯಲಕ್ಷ್ಮೀ ಮಹಾಂತಶೆಟ್ಟರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರಮಠ, ಮುಖ್ಯೋಪಾಧ್ಯಾಯರಾದ ಜೆ.ಡಿ. ಲಮಾಣಿ, ಪಿಯು ಕಾಲೇಜಿನ ಪ್ರಾಚಾರ್ಯೆ ಸರಸ್ವತಿ ಹುಲ್ಲಣ್ಣವರ, ಪ್ರಭುಗೌಡ ಯಕ್ಕಿಕೊಪ್ಪ, ಸ್ವಾತಿ ಪೈ, ಜ್ಯೋತಿ ಅರಳಿಕಟ್ಟಿ ಹಾಗೂ ರೂಪಾ ನವಲೆ ಸೇರಿದಂತೆ ಹಿರಿಯರು, ಶಿಕ್ಷಕರು, ಸಿಬ್ಬಂದಿ, ಮಕ್ಕಳು ಇದ್ದರು.

ಫೆ.6ರಂದು ಅದ್ದೂರಿಯಾಗಿ ಜರುಗಲಿದೆ ಡಂಬಳದ ಹಜರತ್ ಜಮಾಲಶಾವಲಿ ಶರಣರ ಉರೂಸ್

0

ವಿಜಯಸಾಕ್ಷಿ ಸುದ್ದಿ, ಡಂಬಳ: ನೂರಾರು ವರ್ಷಗಳ ಕಾಲ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವ ಮುಗಿದ ನಂತರ ಜರುಗುವ ಸೂಫಿ ಸಂತರಾದ ಹಜರತ್ ಜಮಾಲಶಾವಲಿ ಶರಣರ ಗಂಧ ಈ ಬಾರಿ ಫೆ. 5ಕ್ಕೆ ಹಾಗೂ ಉರೂಸ್ ಫೆ. 6ಕ್ಕೆ ಜರುಗಲಿದೆ.

ಫೆ. 5ರಂದು ಗಂಧದ ಮೆರವಣಿಗೆ ರಾತ್ರಿ ಪ್ರಾರಂಭವಾಗಲಿದ್ದು, ರಾಮಣ್ಣ ಗದಗ ಅವರ ಮನೆತನದವರ ಚಕ್ಕಡಿಯಲ್ಲಿ ನಗಾರಿ ಹೊತ್ತ ಎತ್ತುಗಳ ಮೆರವಣಿಗೆ ವಿವಿಧ ಬಡಾವಣೆಗಳಲ್ಲಿ ಸಾಗಿ ದರ್ಗಾಕ್ಕೆ ತಲುಪಲಿದೆ. ಫೆ. 6ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ರೈತರು ತಮ್ಮ ಎತ್ತುಗಳನ್ನು ಮೆರವಣಿಗೆ ಮೂಲಕ ದರ್ಗಾದ ಸುತ್ತ ಐದು ಸುತ್ತು ಹಾಕಿ ಸಕ್ಕರಿ ಓದಿಸುತ್ತಾರೆ. ರಾತ್ರಿ ಅನ್ನಸಂತರ್ಪಣೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಹಜರತ್ ಜಮಾಲಶಾವಲಿ ಶರಣರು ಜಾತ್ಯಾತೀತ ಧಾರ್ಮಿಕ ಸಂತರು. ಅಖಂಡ ಮಾನವ ಸಮುದಾಯದ ಹಿತಾಸಕ್ತಿ ಬಗ್ಗೆ, ಕ್ರಿಯಾಶೀಲ ಬದುಕಿನ ಬಗ್ಗೆ, ಧರ್ಮದ ಗಡಿಯನ್ನು ದಾಟಿ ಚಿಂತಿಸಿ, ಲೋಕ ಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ವಿಶ್ವಧರ್ಮಿಗಳಾಗಿದ್ದರು. ಅವರ ಪವಾಡಗಳು ಇಂದಿಗೂ ಮನೆಮಾತಾಗಿದೆ.

ಗ್ರಾಮದಲ್ಲಿ ಎಲ್ಲ ರೈತಾಪಿ ವರ್ಗ ಉರೂಸ್‌ನಂದು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದರ್ಗಾದ ಸುತ್ತ ಐದು ಬಾರಿ ಸುತ್ತನ್ನು ಹಾಕಿಸಿ ಸಕ್ಕರೆ ಪೂಜೆಯನ್ನು ಮಾಡಿಸುವ ಮೂಲಕ ಭಕ್ತಿ ಮೆರೆಯುವುದು ಇಲ್ಲಿನ ವಿಶೇಷ.

ಈಗಲೂ ಎತ್ತುಗಳ ಆರೋಗ್ಯದಲ್ಲಿ ಏರುಪೇರಾದರೆ ರೈತರು ಜಮಾಲಶಾವಲಿ ಶರಣರ ದರ್ಗಾಕ್ಕೆ ಬಂದು ಭಕ್ತಿ ಸಮರ್ಪಿಸುತ್ತಾರೆ. ಎತ್ತುಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ ಎನ್ನುವ ಅಪಾರ ನಂಬಿಕೆ ರೈತರಲ್ಲಿದೆ. ಇದಲ್ಲದೇ ಭಕ್ತರ ಆಶಯಗಳು, ಇಷ್ಟಾರ್ಥಗಳು ಈಡೇರುತ್ತವೆ ಎಂದು ಅನಾದಿಕಾಲದಿಂದಲೂ ನಂಬಿಕೆಯಿದೆ.

ತೋಂಟದಾರ್ಯ ಜಾತ್ರೆ ಮುಗಿದ ಬಳಿಕ ಮಠದ ಈ ಹಿಂದಿನ ಶ್ರೀಗಳಿಂದ ಗಂಧ ಮತ್ತು ಉರೂಸ್ ಆಚರಿಸಲಾಗುತ್ತಿತ್ತು. ಅಲ್ಲದೆ ಉರೂಸ್‌ನ ದಿನ ಜರುಗುವ ಅನ್ನ ಸಂತರ್ಪಣೆಯಂದು ಮೊದಲು ಮಠದಲ್ಲಿರುವ ವೇದಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೂರಾರು ವರ್ಷಗಳಿಂದ ಜಾತ್ರೆ ಮುಗಿದ ಬಳಿಕ ಉರೂಸ್ ಜರುಗುತ್ತಿದ್ದು, ಜನಮಾನಸದ ಭಕ್ತರ ಜಾತ್ರೆಯಾಗಿ ರೂಪುಗೊಂಡಿದೆ.

ಜಮಾಲಶಾವಲಿ ದರ್ಗಾ ಸಮಿತಿಯ ಗೌರವಾಧ್ಯಕ್ಷ ಹನಮಂತಪ್ಪ ಗದಗಿನ, ಅಧ್ಯಕ್ಷ ಅಲ್ಲಿಸಾಬ ಮೂಲಿಮನಿ, ಉಪಾಧ್ಯಕ್ಷ ಶಫೀ ಮೂಲಿಮನಿ, ಇಂತಿಯಾಜ ದಪೇದಾರ, ರಜಾಕಸಾಬ ಉಮ್ಮರಸಾಬ, ಮೋದಿನ ಚಾಂದಖಾನವರ, ಖಾಜಾಹುಸೇನ ಹೊಸಪೇಟಿ, ಬಂದುಸಾಬ ಜಲಾಲನವರ, ಕರೀಂಸಾಬ ಸರಖಾವಾಸ, ಮುರ್ತುಜಾ ಮನಿಯಾರ, ಬುಡ್ನೆಸಾಬ ಅತ್ತಾರ, ಹುಸೇನ ದೊಡ್ಡಮನಿ, ಇಬ್ರಾಹಿಂ ಹೊಸಪೇಟಿ, ಕಾಸಿಂಸಾಬ ದೊಡ್ಡಮನಿ, ಡಿ.ಡಿ. ಸೊರಟೂರ, ಗೌಸುಸಾಬ ಆಲೂರ, ರಾಜು ಹಳ್ಳಿಕೇರಿ, ಅಲ್ಲಾವುದ್ದಿನ ಹೊಂಬಳ, ಬಾಬುಸಾಬ ಸರಕಾವಾಸ, ಇಮಾಮಸಾಬ ಹೊಂಬಳ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.

“ಹಜರತ್ ಜಮಾಲಶಾವಲಿ ಶರಣರು ಜಾತ್ಯಾತೀತ ಧಾರ್ಮಿಕ ಸಂತರು. ಗ್ರಾಮದಲ್ಲಿ ನೆಲೆಸಿ ಧರ್ಮ ಸಮನ್ವಯ ದೃಷ್ಟಿಯಿಂದ ಸಾಮರಸ್ಯ ಮೂಡಿಸಿ, ವಿವಿಧತೆಯಲ್ಲಿ ಏಕತೆಯನ್ನು ಸಾರಿ, ಭಕ್ತರ ಪಾಲಿನ ಆಶಾಕಿರಣವಾಗಿ ಜೀವನೋತ್ಸಾಹ ತುಂಬುತ್ತಿರುವ ಜಮಾಲಶಾವಲಿ ಶರಣರು ಹಾಕಿಕೊಟ್ಟ ಸದ್ವಿಚಾರಗಳು ಸದಾ ಕಾಲ ಇರುತ್ತವೆ”

  • ಮಹಮ್ಮದರಫೀಕಸಾಬ ಅಲ್ಲಾವುದ್ದಿನಸಾಬ ಹೊಸಪೇಟಿ.
    ಸಮಾಜ ಸೇವಕರು, ಡಂಬಳ.

ಬೆಂಗಳೂರಿನ ಪ್ರತಿಷ್ಠಿತ ಹೆದ್ದಾರಿಯಲ್ಲಿ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!

0

ಆನೇಕಲ್:- ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ದಿಢೀರ್ ಕುಸಿದುಬಿದ್ದಿದ್ದು, ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದ್ದು, ಚಂದಾಪುರದಿಂದ ಕರ್ನಾಟಕದ ಗಡಿ ಅತ್ತಿಬೆಲೆವರೆಗೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ರೋಗಿಗಳು, ಶಾಲಾ ಮಕ್ಕಳು ಸಕಾಲಕ್ಕೆ ತಲುಪಲು ಪರದಾಡಿದರು.

ಸ್ಥಳದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಡರ್ ಪಾಸ್ ಕಾಮಗಾರಿ ವೇಳೆ ಸಮೀಪದ ಲೇಔಟ್‌ಗಳಿಂದ ಹರಿದ ಸ್ಯಾನಿಟರಿ ನೀರು ರಸ್ತೆಯ ಅಡಿಭಾಗಕ್ಕೆ ನುಗ್ಗಿದ್ದು, ಮಣ್ಣು ಸಡಿಲಗೊಂಡು ಭಾರಿ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕಾರಣದಿಂದ ವಾಹನ ಸವಾರರು ಹೈರಾಣಾಗಿದ್ದು, ರೋಗಿಗಳು, ಶಾಲಾ ಮಕ್ಕಳು ಮತ್ತು ದಿನನಿತ್ಯ ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ತಲುಪಲು ತೊಂದರೆ ಅನುಭವಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ತುರ್ತು ಪರಿಶೀಲನೆ ನಡೆಸಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಟ್ಟ ದೃಶ್ಯವೂ ಕಂಡುಬಂದಿದೆ.

ಲಿಂಗಾಯತ ಸಮುದಾಯದ ಹಿತಕ್ಕಾಗಿ ಕಾಂಗ್ರೆಸ್ ಶಾಸಕರ ವಿಶೇಷ ಸಭೆ: ಎಂ.ಬಿ.ಪಾಟೀಲ್ ಸ್ಪಷ್ಟನೆ!

0

ಬೆಂಗಳೂರು: ಸಮಾಜದ ಹಿತಾಸಕ್ತಿ ಮತ್ತು ನ್ಯಾಯಬದ್ಧ ಪ್ರಾತಿನಿಧ್ಯವನ್ನು ಖಾತ್ರಿಪಡಿಸಲು ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆಯಿತು.

ಈ ಸಭೆಯಲ್ಲಿ ಯಾವುದೇ ನಾಯಕತ್ವದ ವಿವಾದ ಅಥವಾ ವೈಯಕ್ತಿಕ ಅಜೆಂಡಾಗಳಿರಲಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಲಿಂಗಾಯತ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಸಮುದಾಯವಾಗಿದೆ. ಹೋದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 57 ಟಿಕೆಟ್ ನೀಡಿದ್ದು, 34 ಶಾಸಕರು ಗೆದ್ದಿದ್ದಾರೆ. ಮೊನ್ನೆಯ ಸಭೆಗೆ 28 ಮಂದಿ ಹಾಜರಿದ್ದರು. ಸಚಿವರ ಪೈಕಿ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲಿಲ್ಲ, ಉಳಿದ ಎಲ್ಲ ಲಿಂಗಾಯತ ಸಚಿವರು ಹಾಜರಿದ್ದರು” ಎಂದರು.

ಸಭೆಯಲ್ಲಿ, ಸಮುದಾಯಕ್ಕೆ ಸರ್ಕಾರದ ವಿವಿಧ ಹಂತಗಳಲ್ಲಿ ದೊರೆಯಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯ ಮತ್ತು ಹಿತಾಸಕ್ತಿ ವಿಚಾರಗಳು ಚರ್ಚೆಯಾಗಿದೆ. “ಜನಪ್ರತಿನಿಧಿಗಳಾಗಿ ಆಯ್ಕೆಯಾಗುವುದಾದ ಮೇಲೆ ಸಮುದಾಯದ ಹಿತವನ್ನು ನೋಡುವುದು ನಮ್ಮ ಕರ್ತವ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 70 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, 17 ಮಂದಿ ಜಯ ಸಾಧಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

error: Content is protected !!