ವಿಜಯಸಾಕ್ಷಿ ಸುದ್ದಿ, ಗದಗ : ಬಸವಾದಿ ಶರಣರ ವಚನಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ವಿಶ್ವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ವಚನ ಸಾಹಿತ್ಯದ ನಾಯಕ ಬಸವಣ್ಣನವರು ಭಾರತದ ಸಾಂಸ್ಕೃತಿಕ ನಾಯಕರಾಗುವ ಕಾಲ ಬಹಳ ದೂರವಿಲ್ಲ. ಅಲ್ಲದೇ ವಿಶ್ವಕ್ಕೆ ಪ್ರಜಾಪ್ರಭುತ್ವವನ್ನು ಮೊಟ್ಟಮೊದಲು ಕೊಟ್ಟ ಕೀರ್ತಿ ಬಸವಣ್ಣನವರದ್ದು. ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಸಮಾನತೆಗಾಗಿ, ರಾಜಕೀಯವಾಗಿ, ನ್ಯಾಯಯುತವಾಗಿ, ಹೀಗೆ ಹತ್ತು ಹಲವಾರು ಕ್ರಾಂತಿಗಳನ್ನು ಮಾಡಿದವರು ಬಸವಣ್ಣ ಎಂದು ಶರಣೆ ಗಂಗಾಂಬಿಕೆ ಅಕ್ಕನವರು ಅಭಿಪ್ರಾಯಪಟ್ಟರು.
ಅವರು ಗದುಗಿನ ಶಿವಾನಂದ ನಗರದ ಬಸವ ಸಮುದಾಯಭವನದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಬಸವದಳದ 1593ನೇ ಶರಣ ಸಂಗಮದಲ್ಲಿ `ಶರಣರು ಕಂಡ ಬಸವಣ್ಣ’ ವಿಷಯದ ಕುರಿತು ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ ಭದ್ರಾವತಿಯ ಶರಣ ಎಚ್.ಎಸ್. ಬಸವರಾಜಪ್ಪ, ಅಧ್ಯಕ್ಷತೆ ವಹಿಸಿದ್ದ ಶರಣ ವಿ.ಕೆ. ಕರೇಗೌಡ್ರ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರು ವೇದಿಕೆಯ ಮೇಲಿದ್ದರು.
ಶರಣೆ ಮಂಜುಳಾ ಹಾಸಿಲಕರ ವಚನ ಪ್ರಾರ್ಥನೆ ಹಾಡಿದರು. ಶರಣ ಕೆ.ಎಸ್. ಬಾಳಿಕಾಯಿ ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಪ್ರಕಾಶ ಅಸುಂಡಿಯವರು ಮಾತನಾಡಿದರು. ಗೌರಕ್ಕ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿದರೆ, ಶರಣು ಸಮರ್ಪಣೆಯನ್ನು ಮಂಗಳಕ್ಕ ಕಾಮಣ್ಣವರ ನೆರವೇರಿಸಿದರು.
ಸಮಾರಂಭದಲ್ಲಿ ಶರಣರಾದ ಎಸ್.ಎನ್. ಹಕಾರಿ, ಎನ್.ಎಚ್. ಹಿರೇಸಕ್ಕರಗೌಡ್ರ, ಬಿ.ವಿ. ಕಾಮಣ್ಣವರ, ಎನ್.ಎಸ್. ಬಡಿಗಣ್ಣವರ, ಎಸ್.ಎ. ಮುಗದ, ಎಂ.ಬಿ. ಲಿಂಗಧಾಳ, ಮೃತ್ಯುಂಜಯ ಜಿನಗಾ, ಮಂಜುನಾಥ ಅಸುಂಡಿ, ಶರಣು ಅಂಗಡಿ, ಮಲ್ಲಣ್ಣ ಜಿನಗಾ, ಸೋಮು ಪುರಾಣಿಕ, ಅನಿಲ ಬುರ್ಲಿ, ಮಹಾಂತೇಶ ಅಂಗಡಿ, ಹಳ್ಳಿಕೇರಿ, ಬಂಡಿ, ಶರಣೆಯರಾದ ಗಿರಿಜಕ್ಕ ಧರ್ಮರಡ್ಡಿ, ಪಾರ್ವತೆಮ್ಮ ಬುರ್ಲಿ, ಜಯಶ್ರೀ ಹಳ್ಳಿಕೇರಿ, ಶಕುಂತಲಾ ಗುಡಗೇರಿ, ಬಸವಶ್ರೀ, ಶಿಲ್ಪಾ ಬುರ್ಲಿ, ಲೀಲಾವತಿ ಬಳ್ಳೊಳ್ಳಿ, ನಾಗರತ್ನ ಅಸುಂಡಿ, ಲಕ್ಷ್ಮೀ ಅಂಗಡಿ, ರೇಣುಕಾ ಹಾಸಿಲಕರ, ಗಿರಿಜಾ ಹಿರೇಮಠ, ರೂಪಾ ಕಾಮಣ್ಣವರ, ಗಂಗಮ್ಮ ಹೂಗಾರ ಮುಂತಾದವರು ಭಾಗವಹಿಸಿದ್ದರು.