Home Blog Page 3207

ಕಡಿಮೆ ಅವಧಿಯಲ್ಲೇ ಅಧಿಕ ಅಭಿವೃದ್ಧಿ; ಶಿವಯೋಗಿ ಶ್ರೀಗಳ ಪ್ರಶಂಸೆ

ಚಿಕ್ಕನರಗುಂದದಲ್ಲಿ ಉದ್ಯಾನವನ, ಗ್ರಾಮಸಭೆ ಕಟ್ಟೆ ಹಾಗೂ ಪಿಂಕ್ ಶೌಚಾಲಯ ಕಟ್ಟಡ ಉದ್ಘಾಟನೆ….ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಕಾರ್ಯ ವೈಖರಿಗೆ ಶ್ರೀಗಳ, ಗ್ರಾಮಸ್ಥರ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ನರಗುಂದ:

‘ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಹಳೆಯ ಕಾಲದ ಗ್ರಾಮೀಣ ಸೊಗಡನ್ನು ಗ್ರಾಮಸಭೆ ಕಟ್ಟೆಯನ್ನಾಗಿಸಿ ವಿಶೇಷ ಚೇತನರಿಗಾಗಿ ಉದ್ಯಾನವನ, ವಿದ್ಯಾರ್ಥಿನಿಯರಿಗಾಗಿ ಪಿಂಕ್ ಶೌಚಾಲಯ ನಿರ್ಮಿಸಲು ಶ್ರಮಿಸಿದ ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರ ಕಾರ್ಯ ಶ್ಲಾಘನೀಯ ಎಂದು ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ಶುಕ್ರವಾರ ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅವರಣದಲ್ಲಿ ನಿರ್ಮಿಸಿರುವ ಉದ್ಯಾನವನ, ಗ್ರಾಮಸಭೆ ಕಟ್ಟೆ ಹಾಗೂ ಪಿಂಕ್ ಶೌಚಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಡಿಮೆ ಅವಧಿಯಲ್ಲಿ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ರಾಯರೆಡ್ಡಿಯವರು ಇನ್ನಿತರರಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕವೇ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದ ಅವರು, ನವಲಗುಂದ ತಾಲೂಕಿನಲ್ಲಿ ಗುಮ್ಮಗೋಳ ಹಾಗೂ ನರಗುಂದ ತಾಲೂಕಿಗೆ ಚಿಕ್ಕನರಗುಂದದ ಗ್ರಾಮ ಪಂಚಾಯತಿಗಳು ಮಾದರಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ‘ಜನಪ್ರತಿನಿಧಿಗಳು ಕ್ರಿಯಾಶೀಲವಾಗಿದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರು ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಸಾಬೀತು ಪಡಿಸಿದ್ದಾರೆ. ಅದರಂತೆ, ಇನ್ನಿತರ ಗ್ರಾಪಂ ಸದಸ್ಯರು, ಪಿಡಿಒರವರ ಅಭಿವೃದ್ಧಿಶೀಲ ಚಿಂತನೆಗಳು ಗ್ರಾಮದ ಸುಧಾರಣೆಗೆ ಮುನ್ನುಡಿಯಾಗಿದ್ದು, ಜಿಲ್ಲೆಯಲ್ಲಿಯೇ ಚಿಕ್ಕನರಗುಂದ ಗ್ರಾಮ ನಿದರ್ಶನವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಮಾತನಾಡಿ, ‘ನಮ್ಮ ಗ್ರಾಮದ ಪ್ರಮುಖ ರಸ್ತೆಯೊಂದರ ಬಹುದಿನಗಳ ಸಮಸ್ಯೆ ಬಗೆಹರಿಸುವಲ್ಲಿ ಸಹಕರಿಸಿ ತಾಪಂನಿಂದ ಗ್ರಾಮದ ವಿವಿಧ ಅಭಿವೃದ್ಧಿ ಕಾಮಾಗಾರಿಗಳಿಗಾಗಿ ೧೯ ಲಕ್ಷ ರೂ. ಅನುದಾನ ಒದಗಿಸಿದ ಸಚಿವ ಸಿ.ಸಿ.ಪಾಟೀಲ ಅವರನ್ನು ಅಭಿನಂದಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳಾಗಲು ತಾಪಂ ಇಒ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಗ್ರಾಮಸ್ಥರ ಸಹಕಾರವೇ ಕಾರಣ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಹಳೆಮನಿ ಮಾತನಾಡಿ, ಹತ್ತಾರು ಅಭಿವೃದ್ಧಿ ಕೆಲಸಗಳಿಗೆ ಅಧ್ಯಕ್ಷರ ಉತ್ಸಾಹ, ಸರ್ವ ಸದಸ್ಯರ, ಪಿಡಿಒ ಅವರ ಸಂಪೂರ್ಣ ಬೆಂಬಲ ಕಾರಣ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪು ಹಿರೇಗೌಡ್ರ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಗ್ರಾಮದ ಹಿರಿಯರಾದ ಶಂಕ್ರಪ್ಪ ಯರಗಟ್ಟಿ, ರುದ್ರಗೌಡ ರಾಚನಗೌಡ್ರ, ಸಂಗಪ್ಪ ಬಾಚಿ, ಹನಮಂತ ಚಾವಡಿ, ಶ್ರೀನಿವಾಸ್ ರಾಯರೆಡ್ಡಿ, ಪಡಿಯಪ್ಪ ಮರಿಯಣ್ಣವರ, ಮಲ್ಲನಗೌಡ ಸರ್ವಮಾನೇದ, ಮಲ್ಲಿಕಾರ್ಜುನ ಸಾತನ್ನವರ, ಶಂಕರಗೌಡ ಚನ್ನಪ್ಪಗೌಡ್ರ, ಬಸನಗೌಡ ಮುದಿಗೌಡ್ರ, ಪಿಡಿಒ ಶೈನಾಜ್ ಮುಜಾವರ್ ಸೇರಿದಂತೆ ಇನ್ನಿತರರು ಇದ್ದರು.

ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ಮೂರು ತಿಂಗಳ ಗೌರವಧನದಲ್ಲಿ ಗ್ರಾಮದಲ್ಲಿರುವ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಉದ್ಯಾನವನ ನಿರ್ಮಿಸಿರುವುದು ರಾಜ್ಯದಲ್ಲಿಯೇ ಮಾದರಿ ಕಾರ್ಯವಾಗಿದೆ.

ಬಸವರಾಜ್ ಹೊಂಗಲ್, ಗ್ರಾಪಂ ಮಾಜಿ ಉಪಾಧ್ಯಕ್ಷ

ಚಿಕ್ಕನರಗುಂದ ಗ್ರಾಮದಲ್ಲಿ ನಿರ್ಮಿಸಲಾಗಿರುವ ಗ್ರಾಮ ಸಭಾಕಟ್ಟೆ ನಮ್ಮ ಮುಂದಿನ ಪೀಳಿಗೆಗೆ ಒಂದು ಪಳಿಯುಳಿಕೆಯಾಗಿ ಉಳಿಯುವಂತಾಗಿದೆ.

ಶ್ರೀನಿವಾಸ ರಾಯರೆಡ್ಡಿ, ಗ್ರಾಮಸ್ಥ

ಗದಗಗೆ ‘ಕೌರವ’ ಬೇಡ, ‘ಶ್ರೀರಾಮುಲು’ ಉಸ್ತುವಾರಿ ಬೇಕು!

ಗದಗ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಅಸಮಾಧಾನ! ಸಚಿವ ಶ್ರೀರಾಮುಲುಗೆ ಮುದ್ರಣಕಾಶಿ ಉಸ್ತುವಾರಿ ವಹಿಸುವಂತೆ ಅಭಿಮಾನಿಗಳ ಒತ್ತಾಯ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಐದು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುತ್ತಿದ್ದಂತೆ ಕೆಲ ಜಿಲ್ಲೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಗದಗ ಜಿಲ್ಲೆಯಲ್ಲೂ ಸದ್ಯ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನೇಮಕವಾಗಿರುವ ಸಚಿವ ಬಿ.ಸಿ. ಪಾಟೀಲರನ್ನು ಬದಲಾಯಿಸಿ ಎಂಬ ಅಪಸ್ವರ ಕಮಲ ಪಾಳೆಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸ್ವಂತ ಜಿಲ್ಲೆಯ ಮಂತ್ರಿಗಳಿಗೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಿದ್ದು, ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಿ.ಸಿ. ಪಾಟೀಲರಿಗೆ ಬಾಗಲಕೋಟೆ ಜಿಲ್ಲೆಯ ಜವಾಬ್ದಾರಿ ನೀಡಿದೆ. ನೆರೆಯ ಹಾವೇರಿ ಜಿಲ್ಲೆಯ ಬಿ.ಸಿ. ಪಾಟೀಲ್‌ಗೆ ಗದಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದು, ಬಿ.ಸಿ. ಪಾಟೀಲ ನೇಮಕಕ್ಕೆ ಸ್ವಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಮಂತ್ರಿ ಬದಲಾಯಿಸುವಂತೆ ಪಟ್ಟು ಹಿಡಿದಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಗದಗ ಜಿಲ್ಲೆ ದೂರವಾಗುತ್ತದೆ. ಅಲ್ಲದೆ, ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುವ ಸಾಧ್ಯತೆಗಳಿವೆ. ಹೀಗಾಗಿ ಗದಗ ಜಿಲ್ಲೆಯ ಜನರ ನಾಡಿಮಿಡಿತ ಅರಿತಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಉಸ್ತುವಾರಿ ಜೊತೆಗೆ ಅವರ ಕರ್ಮಭೂಮಿ ಗದಗ ಜಿಲ್ಲೆಯ ಉಸ್ತುವಾರಿಯನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತ ಸಂದೇಶವುಳ್ಳ ಪೋಸ್ಟ್‌ ಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

‘ಸಚಿವ ಬಿ. ಶ್ರೀರಾಮುಲು ಗದಗ ಜಿಲ್ಲೆ ಜನತೆಯ ಮನಗೆದ್ದಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ಬಳ್ಳಾರಿ ಉಸ್ತುವಾರಿ ಜೊತೆಗೆ ಗದಗ ಜಿಲ್ಲೆ ಉಸ್ತುವಾರಿಯನ್ನೂ ನೀಡಬೇಕು. ಇದರಿಂದ ಗದಗ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ, ಶ್ರೀರಾಮುಲು ಅವರಿಗೆ ಗದಗ ಜನರು ಅಂದರೆ ಬಹಳ ಪ್ರೀತಿ ಇದೆ. ಈ ಹಿಂದೆ 2006ರಲ್ಲಿ ಶ್ರೀರಾಮುಲು ಗದಗ ಉಸ್ತುವಾರಿ ಸಚಿವರಾಗಿದ್ದಾಗ ಬಹಳಷ್ಟು ಜನಪರ ಕೆಲಸಗಳಾಗಿವೆ ಹೀಗಾಗಿ ಶ್ರೀರಾಮುಲು ಅವರನ್ನು ಗದಗ ಜಿಲ್ಲೆ ಉಸ್ತುವಾರಿ ಮಂತ್ರಿಯನ್ನಾಗಿ ನೇಮಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಶ್ರೀರಾಮುಲು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಸಚಿವರೇ ಉಸ್ತುವಾರಿ ವಹಿಸಿಕೊಂಡರೆ ಆಡಳಿತ ವ್ಯವಸ್ಥೆ ಚುರುಕಾಗಿರುತ್ತದೆ. ಜಿಲ್ಲೆಯ ಆಗುಹೋಗುಗಳ ಬಗ್ಗೆ, ಜನರ ಅಪೇಕ್ಷೆಯ ಕುರಿತು ಅವರಿಗೆ ಸಂಪೂರ್ಣ ಅರಿವಿರುತ್ತದೆ. ಜನ ಸಾಮಾನ್ಯರ ಕೈಗೆಟುಕುತ್ತಾರೆ. ಅಲ್ಲದೆ, ಸಮಸ್ಯೆಗೆ ಶೀಘ್ರವೇ ಸ್ಪಂದಿಸುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಾದ ಕಾಳಜಿ ಮತ್ತು ನೀಲನಕ್ಷೆ ಹೊಂದಿರುತ್ತಾರೆ. ಆದರೆ, ಬೇರೆ ಜಿಲ್ಲೆಯವರು ಅದೂ, ಓರ್ವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಿದರೆ ಅಭಿವೃದ್ಧಿ ಕಷ್ಟಸಾಧ್ಯ. ಏಕೆಂದರೆ, ಈ ಹಿಂದೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉಸ್ತುವಾರಿಗಳಾಗಿದ್ದ ಅಷ್ಟೇನೂ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ ಎಂಬುವುದು ಜಿಲ್ಲೆಯ ಜನರ ಅಳಲು.

ಸಿಸಿಪಿ ಎತ್ತಂಗಡಿಗೆ ಅಸಮಾಧಾನ

ತವರು ಜಿಲ್ಲೆಯ ಸಿ.ಸಿ. ಪಾಟೀಲರನ್ನು ಬಾಗಲಕೋಟೆಗೆ ಎತ್ತಂಗಡಿ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಬೇರೆ ಜಿಲ್ಲೆಯ ಬಿ.ಸಿ. ಪಾಟೀಲ್‌ಗೆ ಗದಗ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ. ಇದು ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿದೆ. ಹೀಗಾಗಿ ಅವಳಿ ನಗರಕ್ಕೆ ಸಿಸಿಪಿ ಬಂದಾಗ ಜೇನು ಹುಳುಗಳಂತೆ ಮುತ್ತಿಕ್ಕಿಗೊಳ್ಳುತ್ತಿದ್ದ ಬಿಜೆಪಿಗರು ಬಿಸಿಪಿ ಆಗಮಿಸಿದಾಗ ಸೇರುವುದು, ಸಹಕಾರ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ, ಸಿ.ಸಿ. ಪಾಟೀಲರನ್ನು ಎತ್ತಂಗಡಿ ಮಾಡಿದರೇನಾಯ್ತು ಗದಗ ಜಿಲ್ಲೆಯ ಬಗ್ಗೆ ಸವಿಸ್ತಾರವಾಗಿ ಗೊತ್ತಿರುವ ಬಿ. ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಬೇಕೆಂಬ ಆಗ್ರಹ ಇದಕ್ಕೆ ಪುಷ್ಟಿ ನೀಡಿದಂತಿದೆ.

ಗದಗ ಜಿಲ್ಲೆಯ ಉಸ್ತುವಾರಿಗೆ ಬಿ. ಶ್ರೀರಾಮುಲು ಸೂಕ್ತ ವ್ಯಕ್ತಿ. ಅವರಿಗೆ ಗದುಗಿನ ಗಲ್ಲಿಗಲ್ಲಿಯ ಜನರು ಚಿರಪರಿಚಿತವಾಗಿದ್ದು, ಇದರಿಂದ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ. ಅವರು ಉಸ್ತುವಾರಿ ಮಂತ್ರಿಯಾಗಿದ್ದಾಗಲೇ ಗದಗ ಜಿಲ್ಲೆ ರಾಜ್ಯದಲ್ಲಿ ಬೆಳಕಿಗೆ ಬಂದಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಹೀಗಾಗಿ ಬಿ.ಸಿ. ಪಾಟೀಲ್ ಬದಲಿಗೆ ಸಮೀಪದ ಶ್ರೀರಾಮುಲು ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು.

ವಿಶ್ವನಾಥ ಖಾನಾಪುರ, ವಿಕಾಸ ವೇದಿಕೆ ಜಿಲ್ಲಾಧ್ಯಕ್ಷ

ಬೆಟ್ಟ ಅಗೆದು ಇಲಿ ಹಿಡಿದ ಅಧಿಕಾರಿಗಳು! ದೊಡ್ಡ ಸಾಧನೆ ಮಾಡಿದಂತೆ ಪೋಸ್ ಕೊಟ್ಟ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ: ಅಬಕಾರಿ‌ ದಾಳಿ, ಮದ್ಯ‌ ಅಕ್ರಮ ಮಾರಾಟ ಹತ್ತಿಕ್ಕುವ ಪೊಲೀಸರ ಯತ್ನ ಇದ್ದದ್ದೇ. ದೊಡ್ಡ ಮಿಕಗಳನ್ನು ಹಿಡಿದರೆ, ಪ್ರಶಂಸೆ ಮಾಡಬಹುದು. ಆದರೆ ಮುಂಡರಗಿ ತಾಲೂಕಿನ ಡಂಬಳದಲ್ಲಿ ಇತ್ತೀಚೆಗೆ ನಡೆದದ್ದೇ ಬೇರೆ!

ಡಂಬಳ ಗ್ರಾಮದ ಅಂಬೇಡ್ಕರ್ ಭವನದ ಬಳಿ ಇರುವ ಮಹೇಶ ಮೈಲಪ್ಪ ಹರಿಜನ ಎಂಬಾತನ ಮನೆಯಲ್ಲಿ ಅಕ್ರಮವಾಗಿ 5.94 ಲೀಟರ್ ಮಧ್ಯವನ್ನು (ಅಂದಾಜು ಮೌಲ್ಯ 2,319 ರೂಪಾಯಿ) ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಬ್ಬ ಆರೋಪಿಯನ್ನು ಹಿಡಿಯಲು ಅಬಕಾರಿ ಇಲಾಖೆ ಅಧಿಕಾರಿಗಳ ದಂಡೇ ಹೋಗಿದ್ದು ಗುಡ್ಡ ಅಗೆದು ಇಲಿ ಹಿಡಿದಂತೆ ಎನ್ನುವಂತಾಗಿದೆ. ಸಾಲದ್ದಕ್ಕೆ ಮಹಾನ್ ಸಾಧನೆ ಮಾಡಿದಂತೆ ಅಧಿಕಾರಿಗಳು ಆರೋಪಿಯನ್ನು ಮುಂದೆ ಕುಳ್ಳಿರಿಸಿ ಫೋಟೋ ಪೋಸ್ ಕೊಟ್ಟು ನಗೆಪಾಟಲಿಗೆ ಒಳಗಾಗಿದ್ದಾರೆ.

ರವಿ ಚನ್ನಣ್ಣವರ್ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

0

-ರಾಜ್ಯ ಸರಕಾರದಿಂದ ಅಧಿಕಾರಿಗಳ ಮತ್ತೊಂದು ಸರ್ಜರಿ

ವಿಜಯಸಾಕ್ಷಿ ಸುದ್ದಿ, ಗದಗ/ಕೊಪ್ಪಳ: ಈಚೆಗಷ್ಟೇ ರಾಜ್ಯ ಸರಕಾರ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಇದೀಗ ರವಿ ಚನ್ನಣ್ಣವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದೆ.

ರವಿ ಚನ್ನಣ್ಣವರ್ ಅವರನ್ನು ಅಪರಾಧ ತನಿಖಾ ವಿಭಾಗದಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಿದೆ. ಅಪರಾಧ ತನಿಖಾ ವಿಭಾಗದ ಎಸ್‌ಪಿಯಾಗಿದ್ದ ಡಾ.ಭೀಮಾಶಂಕರ ಗುಳೇದ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿಯಾಗಿದ್ದ ಅಬ್ದುಲ್ ಅಹ್ಮದ್ ಅವರನ್ನು ಕೆಎಸ್ಆರ್‌ಟಿಸಿಯ ಭದ್ರತಾ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದೆ. ಕೊಪ್ಪಳ ಎಸ್ಪಿಯಾಗಿದ್ದ ಟಿ.ಶ್ರೀಧರ್ ಅವರನ್ನು ನಾಗರಿಕ ಸೇವಾ ಹಕ್ಕು ನಿರ್ದೇಶನಾಲಯದ ಎಸ್‌ಪಿಯಾಗಿ ವರ್ಗಾಯಿಸಿದೆ. ಒಟ್ಟಾರೆ 9 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಜ.29ರಂದು ವಿಮಾನ ನಿಲ್ದಾಣ ನಿರ್ಮಾಣ ಜಾಗ ಪರಿವೀಕ್ಷಣೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವಿಷಯ ಚುರುಕು ಪಡೆದಿದೆ. ಈಚೆಗಷ್ಟೇ ವಿಮಾನ ನಿಲ್ದಾಣ ಜಾಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಬೆಂಗಳೂರಿನಲ್ಲಿ ತೀರ್ಮಾನಿಸಲಾಗಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಶಾಭಾವ ಮೂಡಿದೆ.

ಜನೇವರಿ 29ರಂದು ಕೊಪ್ಪಳಕ್ಕೆ ಕರ್ನಾಟಕ ಮೂಲಸೌಲಭ್ಯ‌ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಆಗಮಿಸಲಿದ್ದು, ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಜಾಗದ ಪರಿವೀಕ್ಷಣೆ ಮಾಡಲಿದ್ದಾರೆ. ನಂತರ ಅಂದು ಮಧ್ಯಾಹ್ನ 12-30ಕ್ಕೆ ಈ ವಿಷಯ ಕುರಿತಂತೆ ಜಿಲ್ಲಾಡಳಿತ ಭವನದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಸ್ಟೇರಿಂಗ್ ತುಂಡಾಗಿ ಉರುಳಿ ಬಿದ್ದ ಬಸ್; 15ಜನರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಹುಬ್ಬಳ್ಳಿಯಿಂದ ಬಾಗಲಕೋಟಿಗೆ ತೆರಳುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಸಮೀಪದ ಬೆಣ್ಣೆಹಳ್ಳದ ಸೇತುವೆ ತಿರುವಿನಲ್ಲಿ ಸ್ಟೇರಿಂಗ್ ತುಂಡಾಗಿ ಉರುಳಿ ಬಿದ್ದು ಪರಿಣಾಮ ಹದಿನೈದು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಜರುಗಿದೆ.

ಬಸ್ ನಲ್ಲಿ ಮೂವತ್ತು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡ ವೃದ್ಧೆಯೊಬ್ಬರ‌ನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ಕಲ್ಮೇಶ ಬನ್ನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಆನಂದ್‌ಸಿಂಗ್ ಧ್ವಜಾರೋಹಣ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣವನ್ನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ನೆರವೇರಿಸಿದರು. ಧ್ವಜವಂದನೆ ಸ್ವೀಕರಿಸಿ ಪರೇಡ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಒ ತರನ್ನುಮ್, ಎಸಿ ನಾರಾಯಣರಡ್ಡಿ, ಎಡಿಸಿ ಎಂ.ಪಿ.ಮಾರುತಿ, ಎಸ್‌ಪಿ ಟಿ.ಶ್ರೀಧರ್ ಇತರರು ಇದ್ದರು.

ಅಸಮಾಧಾನ ಇಲ್ಲ, ಬೇಕಾದರೆ ಮಂಪರು ಪರೀಕ್ಷೆ ಮಾಡಿಸಿ: ಆನಂದ್‌ಸಿಂಗ್

0

-ಕಾಂಗ್ರೆಸ್‌ನವರೇ ಬಿಜೆಪಿಗೆ ಬರ‌್ತಾರೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಿಕ್ಕ ನಂತರ ಮೊದಲ ಬಾರಿ ಜಿಲ್ಲಾಕೇಂದ್ರಕ್ಕೆ ಬಂದು ಗವಿಮಠದ ದರ್ಶನ ಪಡೆದಿದ್ದೇನೆ. ಉಸ್ತುವಾರಿ ಬದಲಾವಣೆ ಮಾಡಿದ್ದಕ್ಕೆ ಯಾವ ಅಸಮಾಧಾನವೂ ಇಲ್ಲ, ಬೇಕಾದರೆ ಮಂಪರು ಪರೀಕ್ಷೆ ಮಾಡಿಸಿ, ಆಗಲೂ ಇದೇ ಉತ್ತರ ಬರುತ್ತೆ ಎಂದು ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಹೇಳಿದರು.

ಕೊಪ್ಪಳದ ಗವಿಮಠದ ಕರ್ತೃ ಗದ್ದುಗೆಗೆ ಬುಧವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊಪ್ಪಳ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಕ್ಕೆ ಯಾವ ಅಸಮಾಧಾನವೂ ಇಲ್ಲ ಅಂತ ಸಾಕಷ್ಟು ಸಲ ಹೇಳಿದ್ದೇನೆ. ಬೇಕಾದರೆ ಮಂಪರು ಪರೀಕ್ಷೆ, ಎಲ್ಲಾ ಟೆಸ್ಟ್ ಮಾಡಿಸಿ, ಆಗಲೂ ಇದನ್ನೇ ಹೇಳುತ್ತೇನೆ ಎಂದರು.

ಬಿಜೆಪಿಯಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ, ಬಂದರೆ ಕಾಂಗ್ರೆಸ್‌ನವರೇ ಬಿಜೆಪಿಗೆ ಬರಬಹುದು. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ದೇಶದ 120 ಕೋಟಿ ಜನರಿಗೆ ಗೊತ್ತಿರುವ ವಿಚಾರ. ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗ್ತಾರೆ ಅನ್ನೋದು ಬಸನಗೌಡ ಯತ್ನಾಳ ಅವರ ಅಭಿಪ್ರಾಯ ಇರಬಹುದು, ನನ್ನ ಅಭಿಪ್ರಾಯದಲ್ಲಿ ಬಿಜೆಪಿಯವರು ಯಾರೂ ಕಾಂಗ್ರೆಸ್‌ಗೆ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರಗುಂದದಲ್ಲಿ ಯುವಕನ ಕೊಲೆ; ಸಚಿವ ಪಾಟೀಲ್, ಪೊಲೀಸರ ನಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ

ನರಗುಂದದಲ್ಲಿ ಭಜರಂಗದಳ, ಸಂಘ ಪರಿವಾರ ಬಾಲ ಬಿಚ್ಚಿರುವುದು ಅಪಾಯಕಾರಿ

ವಿಜಯಸಾಕ್ಷಿ ಸುದ್ದಿ, ನರಗುಂದ:

‘ನರಗುಂದದಲ್ಲಿ ಈ ರೀತಿಯ ಘಟನೆಗಳು ಯಾವತ್ತೂ ನಡೆದಿರಲಿಲ್ಲ. ಇಂತಹ ಘಟನೆಗಳು ಉಡುಪಿ, ಮಂಗಳೂರು ಕಡೆಗಳಲ್ಲಿ ನಡೆಯುತ್ತಿದ್ದವು. ಆದರೆ, ಈಗ ಇಲ್ಲಿಯೂ ಭಜರಂಗದಳ, ಸಂಘ ಪರಿವಾರದವರು ಬಾಲ ಬಿಚ್ಚಿರುವುದು ಅಪಾಯಕಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಕಳೆದ ಜ.17ರಂದು ಪಟ್ಟಣದಲ್ಲಿ ಕೊಲೆಯಾದ ಯುವಕನ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾತನಾಡಿದರು.

‘ಭಜರಂಗದಳ, ಸಂಘಪರಿವಾರದವರು ಕಾನೂನು ಕೈಗೆ ತೆಗೆದುಕೊಳ್ಳಲು ಶುರು ಮಾಡಿದ್ದು, ಅವರಿಗೆ ಪೊಲೀಸರ ಭಯವಿಲ್ಲದಾಗಿದೆ. ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಹೇಳಿದ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

‘ಘಟನೆಯ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ಗೊತ್ತಿದ್ದರೂ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ, ಹೀಗಾಗುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಹೀಗಾಗಿದ್ದು, ಭಜರಂಗದಳದವರ ಜೊತೆಗೆ ಅವರೂ ಶಾಮೀಲಾಗಿರಬೇಕು. ಇಲ್ಲದಿದ್ದರೆ ಭಜರಂಗದಳವರನ್ನು ಕಂಡು ಹೆದರಿಕೊಂಡಿರಬೇಕು ಎಂದು ಆರೋಪಿಸಿದ ಅವರು, ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು. ಭಜರಂಗದಳ, ಸಂಘಪರಿವಾರದವರ ಮೇಲೆ ಕ್ರಮ ಕೈಗೊಳ್ಳುವಂತೆ, ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಇದೇ ಊರಿನವರಾಗಿದ್ದರೂ, ಅವರ ಊರಿನಲ್ಲಿಯೇ ಕೊಲೆಯಾಗಿದ್ದರೂ ಇಲ್ಲಿಯವರೆಗೂ ಸೌಜನ್ಯಕ್ಕಾದರೂ ಮೃತ ಯುವಕನ ಮನೆಗೆ ಭೇಟಿ ನೀಡದಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ಮಂತ್ರಿಯಾಗಿರುವ ಸಿ.ಸಿ.ಪಾಟೀಲರು ಘಟನೆಯನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಅವರ ಕ್ಷೇತ್ರದಲ್ಲಿ ಕೋಮು ಗಲಭೆಯಾಗಿ ಕೊಲೆಯಾಗಿರುವುದು ಅವರಿಗೆ ಕಪ್ಪುಚುಕ್ಕಿಯಾಗಿದೆ ಎಂದ ಅವರು, ಮಂತ್ರಿಯೇ ಬಂದಿಲ್ಲ ಅಂದ್ರೆ, ಅಧಿಕಾರಿಗಳು ಹೇಗೆ ಬರುತ್ತಾರೆ ಹೇಳಿ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ವಾಟ್ಸಾಪ್‌ನಲ್ಲಿ ಶಾಸಕ ರಾಮಣ್ಣ ಲಮಾಣಿ ಶುಭಾಶಯ: ತರಾಟೆ ತೆಗೆದುಕೊಂಡ ಬಿಜೆಪಿ ಕಾರ್ಯಕರ್ತರು!

ವಿಜಯಸಾಕ್ಷಿ ಸುದ್ದಿ, ಗದಗ:

ರಾಷ್ಟ್ರೀಯ ಮತದಾರರ ದಿನದಂದೇ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರನ್ನು, ಸ್ವಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಇರುವ ಕಾರಣಕ್ಕೆ ಶಾಸಕ ರಾಮಣ್ಣ ಲಮಾಣಿ ಅವರು ವಾಟ್ಸಾಪ್ ಗ್ರುಪ್‌ವೊಂದರಲ್ಲಿ ‘ಸಂವಿಧಾನದ ಆಶಯದಂತೆ, ಪ್ರಜಾಪ್ರಭುತ್ವ ಅನ್ವಯ ತಮ್ಮ ಸೇವಕನನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯೇ ಮತದಾನ. ಇದು ಜಗತ್ತಿನ ಸರ್ವಶಕ್ತ ಸಾಂವಿಧಾನಿಕ ಜವಾಬ್ದಾರಿ. ನನ್ನನ್ನು ವಿಧಾನಸಭೆಗೆ ಆಯ್ಕೆಗೊಳಿಸಿ ಸೇವೆಗೆ ಅನುವು ಮಾಡಿಕೊಟ್ಟ ನಮ್ಮ ಕ್ಷೇತ್ರದ ಮತದಾರರ ಬಂಧುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂಬ ಶುಭಾಶಯವುಳ್ಳ ಪೋಸ್ಟರ್ ಹಾಕಿದ್ದಾರೆ. ಇದಕ್ಕೆ ಬಿಜೆಪಿಯ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆರಿಸಿ ಕಳಿಸಿದ್ದಕ್ಕೆ ನಿಮ್ಮ ಮನೆಯವರು ಎಲ್ಲರೂ ಸೇರಿ ಕಾಂಗ್ರೆಸ್‌ನವರಿಗೆ ಕೆಲಸ ಕೊಟ್ಟು ಬಿಜೆಪಿ ಕಾರ್ಯಕರ್ತರಿಗೆ ಸರಿಯಾಗಿ ಪಾಠ ಕಲಿಸ್ತಿದ್ದೀರಿ

‘ನಿಮ್ಮ ಎಲೆಕ್ಷನ್ ಸಲುವಾಗಿ ನಮ್ಮ ಊರಾಗ ಕೆರಾ, ಮಚ್ಚಿ ಹಿಡಕೊಂಡು ವೋಟ್ ಹಾಕಿಸೇವಿ. ನೀವು ಸೋತಾಗ 44 ವೋಟ್ ಇದ್ದ ಬಿಜೆಪಿ 450 ವೋಟ್ ಮಾಡಿದ್ದು ನಾವು. ನಿಮ್ಮ ಕೊಡುಗೆ ಏನು ಇಲ್ಲ. ಇವಾಗ ಕಾಂಗ್ರೆಸ್‌ನ ಜೊತೆ ಸೇರಿ ನಮಗೆ ಎಚ್ಚರ ಮಾಡ್ತಿದ್ದೀರಾ. ತಾಲೂಕಿನ ತುಂಬಾ ನಿಮ್ಮ ಹಿಂದೆ ತಿರುಗುವವರು ಸಮಯಕ್ಕಾಗಿ ಕಾಯ್ತಿದ್ದಾರೆ. ಇನ್ನೇನು ಬಹಳ ದಿನವಿಲ್ಲ. ನಿಮ್ಮ ಅವನತಿ ಶುರುವಾಗುತ್ತೆ…ನೆನಪಿರಲಿ
ಇದಕ್ಕೆ ಮಂಜುನಾಥ ಎಂಬವವರು ‘ಶಂಕರ ಏನಿದು? ಬಹಿರಂಗವಾಗಿ ಮಾತನಾಡುವೆ ಮನೆಗೆ ಹೋಗಿ ಎಂದಿದ್ದಾರೆ.

‘ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಸಮಾಧಾನವಿದ್ದಾರೆ. ಎಲ್ಲರೂ ಸಮಯಕ್ಕಾಗಿ ಕಾಯ್ತಿದ್ದಾರೆ. ಒಂದೇ ಸಾರಿ ಗುಮ್ಮೋಕೆ… ನಿದ್ದೆಯಲ್ಲಿದ್ದೀರಿ 30,000 ಲೀಡ್‌ನಲ್ಲಿ 315 ವೋಟ್‌ನಿಂದ ಸೋತಿದ್ದು ನೆನಪಿರಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.

‘ನಿಮಗೆ ಬುದ್ಧಿ ಹೇಳೋ ಯಾವ ನಾಯಕರನ್ನು ನಿಮ್ಮ ಜೊತೆ ಇಟ್ಟುಕೊಳ್ಳಲಿಲ್ಲ. ನಿಮಗೆ ಹೊಗಳಿಕೆ ಭಟ್ಟರು ಅಷ್ಟೇ ಬೇಕು. ಒಂದು ಶಾಸ್ತ್ರ ಇದೆ ಬೈದು ಹೇಳೋರು ಒಳ್ಳೆಯದಕ್ಕೆ, ನಕ್ಕು ಹೇಳೋರು ತಮ್ಮ ಲಾಭಕ್ಕೆ.. ನೆನಪಿರಲಿ ಎಂದು ಬುದ್ಧಿ ಹೇಳಿದ್ದಾರೆ.

‘ಹೋದ ಸಲ ಎಲೆಕ್ಷನ್ ಅನ್ನೋ ಹುಚ್ಚು ನೆತ್ತಿಗೆ ಏರಿತ್ತು. ನಿಮ್ಮ ಬಗ್ಗೆ ಯಾವುದನ್ನು ವಿಚಾರ ಮಾಡದೇ ಹೊತ್ತು ಕುಣಿದಿದ್ದಾರೆ. ಅದಕ್ಕೆ ನೀವು ಎಲ್ಲರಿಗೂ 5 ವರ್ಷದಲ್ಲಿ ನೀವು ನಿಮ್ಮ ಮನೆಯವರು ಸೇರಿ ಎಲ್ಲರಿಗೂ ಹುಚ್ಚು ಹಿಡಿಸಿದ್ದೀರಿ

‘ಎಲ್ಲರೂ ನಿಮ್ಮ ಆಟ ನೋಡಿ ಸುಮ್ಮನಿದ್ದಾರೆ ಅಂದ್ರೆ ಕೈಯಲ್ಲಿ ಏನು ಆಗಲ್ಲ ಅಂತಾ ಅಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು ಅಂತಾ. ಎಲ್ಲರೂ ಟೈಮ್‌ಗಾಗಿ ಕಾಯ್ತಿದ್ದಾರೆ. ನೆಕ್ಸ್ಟ್ ನವೆಂಬರ್‌ನಿಂದ ಸ್ಟಾರ್ಟ್ ಆಗುತ್ತೆ ಎಂದು ಶಾಸಕ ರಾಮಣ್ಣ ಲಮಾಣಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಮಹತ್ವದ ದಿಶಾ ಸಭೆಯಲ್ಲಿ ಶಾಸಕ ರಾಮಪ್ಪ ಲಮಾಣಿ, ಅಭಿವೃದ್ಧಿ ಚರ್ಚೆ: ಮಂಗಳವಾರ ಗದಗ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಗದಗ ಜಿಲ್ಲೆಯ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನಮ್ಮೆಲ್ಲರ ನೆಚ್ಚಿನ ಕ್ರಿಯಾಶೀಲ ಶಾಸಕರಾದ ರಾಮಪ್ಪ ಲಮಾಣಿ ಭಾಗಿಯಾಗಿದ್ದರು. ಸಂಸದ ಶಿವಕುಮಾರ ಉದಾಸಿಯವರ ನೇತೃತ್ವದಲ್ಲಿ ನಡೆದ ಮಹತ್ವದ ದಿಶಾ ಸಭೆಯಲ್ಲಿ ಗದಗ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಅವಲೋಕನ ಮತ್ತು ಭವಿಷ್ಯದ ಯೋಜನೆಗಳ ಸಾಕಾರಕ್ಕಾಗಿ ರಾಮಪ್ಪ ಲಮಾಣಿ, ಮಹತ್ವದ ದಾಖಲೆಗಳೊಂದಿಗೆ ಚರ್ಚಿಸಿದರು ಎಂದು ಪುನಃ ಅದೇ ಗ್ರುಪ್‌ನಲ್ಲಿ ಫೊಸ್ಟ್ ಬಂದಿದೆ.

ಇದಕ್ಕೆ ಒಬ್ಬರು ‘ಲಕ್ಷ್ಮೇಶ್ವರದಿಂದ ಮಾಗಡಿವರೆಗೆ ರಸ್ತೆ ಸರಿ ಮಾಡಿಸಿ ದಯವಿಟ್ಟು ಎಂದು ಕಮೆಂಟ್ ಮಾಡಿದ್ದಾರೆ.

‘ಮುಗಿದೆ ಹೋಗಿದೆ ಕ್ಷೇತ್ರದ ಅಭಿವೃದ್ಧಿ, ಇವಾಗ ನಿಮ್ಮ ಅಭಿವೃದ್ಧಿ ಅಷ್ಟೇ

ಇದಕ್ಕೆ ಮಂಜುನಾಥ ಎಂಬುವವರು ‘ಇನ್ನೂ ಸಮಯವಿದೆ ಶಂಕರ ದುಡುಕ ಬೇಡ ಎಂದಿದ್ದಾರೆ. ಮರು ಪ್ರತಿಕ್ರಿಯಿಸಿರುವ ಶಂಕರ ಎಂಬ ವ್ಯಕ್ತಿ ‘ನಾಲ್ಕು ವರ್ಷದಿಂದ ಅದೇ ಆಗಿದೆ ಎಲ್ಲರದೂ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವಾಗಲೇ ಹಾಲಿ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

error: Content is protected !!