Home Blog Page 3235

ಸಾರ್ವಜನಿಕರಿಂದ ಹಣ ವಸೂಲಿ; ಗದಗನ ಇಬ್ಬರು ನಕಲಿ ಪೊಲೀಸರ ಬಂಧನ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ. ಗದಗನ ವೀರನಾರಾಯಣ ಗುಡಿ ಬಳಿಯ ನಿವಾಸಿ ಸಂಜಯ್ ಕೊಪ್ಪದ (23), ನರಗುಂದದ ಸಂಜು ಚಲವಾದಿ (23) ಬಂಧಿತ ಆರೋಪಿಗಳು.

ನಗರದ ಆರ್ ಟಿಒ ಕಚೇರಿ ಹೊರವಲಯದ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಭೀಮೇಶ್ ಹುಗ್ಗಿ ಎಂಬುವರನ್ನು ತಡೆದು ದಾಖಲೆಗಳನ್ನು ಪರಿಶೀಲನೆಗೆ ಕೇಳಿದ್ದಾರೆ. ದಾಖಲೆ ಇಲ್ಲವೆಂದ ಮೇಲೆ ದಂಡ ಕಟ್ಟಬೇಕು ಇಲ್ಲವೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೇಳಿದ್ದಾರೆ.

ಆದರೆ ದಂಡ ಕಟ್ಟಲು ಹಣ ಇಲ್ಲ ಎಂದಾಗ ಕಪಾಳಕ್ಕೆ ಹೊಡೆದು ಜೇಬು ಪರಿಶೀಲಿಸಿ ಒಂದು ಸಾವಿರ ರೂ.ನಗದು, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ,  ಎಟಿಎಂ ಕಾರ್ಡ್ ಪಡೆದು ನಂತರ, ಅದರ ಪಾಸ್‍ವರ್ಡ್ ಕೇಳಿ, ಬ್ಯಾಂಕ್ ಖಾತೆಯಲ್ಲಿನ ರೂ. 1,500 ರೂ.  ಡ್ರಾ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಗಸ್ಟ್‌ 15 ರಂದು ಪ್ರಕರಣ ದಾಖಲಾಗಿತ್ತು
ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸೈ ಲಕ್ಕಪ್ಪ ಅಗ್ನಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ವೇಳೆಯಲ್ಲಿ ನಗರದ ಹೊರವಲಯದಲ್ಲಿ ಸಾರ್ವಜನಿಕರನ್ನು ತಡೆದು ಪೊಲೀಸ್ ಎಂದು ಬೆದರಿಸಿ ಹಣಕೀಳುವ ವೇಳೆಯಲ್ಲಿ ವಶಕ್ಕೆ ಪಡೆಯಲಾಗಿದೆ.

ಗದಗ ನಗರ, ಗ್ರಾಮೀಣ, ಅಣ್ಣಿಗೇರಿ, ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಮಣ್ಣಿನ ಮಕ್ಕಳ ಕಲ್ಲು; ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ಕೋಲಾರ

ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ನೀರಾವರಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ‘ಕಲ್ಲು’ಹಾಕಲು ಹವಣಿಸಿದ್ದ ಮಣ್ಣಿನಮಕ್ಕಳು, ಈಗ ನನ್ನ ತಲೆಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಮಾಲೂರು ತಾಲೂಕಿನ ದೊಡ್ಡಶಿವಾರ ಈಶ್ವರಕೆರೆ ನಾಲ್ಕು ದಶಕದ ಬಳಿಕ ಭರ್ತಿಯಾದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

ಮಳೆಯ ಜೂಜಾಟದಲ್ಲಿ ಪಾತಾಳಕ್ಕೆ ಕುಸಿದಿದ್ದ ಕೋಲಾರ ಜಿಲ್ಲೆಯಲ್ಲಿನ ಅಂತರ್ಜಲ ಈಗ ಕೆಸಿ ವ್ಯಾಲಿ ನೀರಾವರಿ ಯೋಜನೆಯಿಂದಾಗಿ ಪುನಶ್ಚೇತನ ಕಂಡಿದೆ. 800- 900 ಅಡಿಗೂ ನಿಲುಕದ ಅಂತರ್ಜಲ, ಯೋಜನೆಯ ಅನುಷ್ಠಾನದಿಂದಾಗಿ 300- 500ರ ಅಡಿಗೆ ನೀರು ಕಾಣುವಂತಾಗಿದೆ. ಯೋಜನೆಗೆ ಅಡ್ಡಿಗಾಲು ಹಾಕಿದ್ದ ಮಣ್ಣಿನಮಕ್ಕಳಿಗೆ ತಕ್ಕಪಾಠ ಕಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಅವರು ಸ್ವಘೋಷಿತ ಮಣ್ಣಿನಮಕ್ಕಳು. ನಾವು ರೈತರ ಮಕ್ಕಳು ಎಂದು ದೇವೇಗೌಡರನ್ನು ಕಾಲೆಳೆದ ಸಿದ್ದರಾಮಯ್ಯ, ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೇ. ಆಗ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆದರೆ, ಈಗಿನ ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳನ್ನ ಅನುಷ್ಠಾನಕ್ಕೆ ತರಲು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಛೇಡಿಸಿದರು.

ಅನ್ನಭಾಗ್ಯ ಯೋಜನೆ ಅಡಿ ನಮ್ಮ ಸರ್ಕಾರ ಪ್ರತಿ ವ್ಯಕ್ತಿಗೆ ಏಳು ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದೇವು. ಆದರೆ, ಈಗ ಬಿಜೆಪಿ ಸರ್ಕಾರ ಎರಡು ಕೆಜಿ ಕಡಿತಗೊಳಿಸಿದೆ. ಅಕ್ಕಿ ಕಡಿತಗೊಳಿಸಿದ ಸಚಿವ ಉಮೇಶ್ ಕತ್ತಿ ಅವರಿಗೆ ಸಕ್ಕರೆ ಕಾಯಿಲೆ ಇರಬೇಕು. ಅದಕ್ಕಾಗಿ ಅವರು ಅಕ್ಕಿಯನ್ನು ಕಡಿತಗೊಳಿಸಿದ್ದಾರೆ ಎಂದು ಕುಟುಕಿದರು.
ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಇತರರು ಇದ್ದರು.

ಬಾಗಿನ ಕಾರ್ಯಕ್ರಮದಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಮಾಯಿಸುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಕೇಳಿ ಬಂತು.

ಬಲವಂತದ ಮತಾಂತರಕ್ಕೆ ನಮ್ಮ ವಿರೋಧ: ಸಿದ್ದು

ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ತನ್ನ ಧರ್ಮದಿಂದ ತನಗೆ ಸರಿಕಾಣುವ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ, ಆಸೆ, ಆಮಿಷಗಳಿಗೆ ಒಳಗಾಗಿ, ಬಲವಂತದಿಂದ ಮತಾಂತರಕ್ಕೆ ಒಳಗಾದರೆ, ಅದಕ್ಕೆ ನಮ್ಮ ವಿರೋಧ ಇದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಕ್ರಿಯಿಸಿದರು.

ಜೇಬಿಗೆ ಕತ್ತರಿ ಹಾಕಿದ ದುಷ್ಕರ್ಮಿಗಳು

ಈಶ್ವರಕೆರೆ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಸಹಸ್ರಾರು ಜನಸ್ತೋಮ ಜಮಾಯಿಸಿತ್ತು. ಇಂಥಹ ಸಂದರ್ಭವನ್ನೇ ಅವಕಾಶವಾಗಿ ಬಳಸಿಕೊಂಡ ಪುಢಾರಿಗಳು, ತಾಲ್ಲೂಕಿನ ಹುಲ್ಕೂರು ಗ್ರಾಮದ ನಾಗೇಶ್ ಅವರ ಜುಬ್ಬಾದ ಜೇಬಿಗೆ ಕತ್ತರಿ ಹಾಕಿ, ಅವರ ಜೇಬಿನಲ್ಲಿದ್ದ ರೂ. 25ಸಾವಿರ ಹಣವನ್ನು ಎಗರಿಸಿದ ಘಟನೆ ನಡೆದಿದೆ.

ಮನೆಯ ಬೀಗ ಮುರಿದು ಕಳವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಹಾಡುಹಗಲೇ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಕಳವು ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಡೋಣಿತಾಂಡದಲ್ಲಿ ನಡೆದಿದೆ.

ಕಳೆದ ಸೆ. 26ರಂದು ಬೆಳಿಗ್ಗೆ 8ಗಂಟೆಯ ಸುಮಾರು ಬೀಗ ಮುರಿದು ಒಳನುಸುಳಿದ ಕಳ್ಳರು, ಮನೆಯ ಹಾಲ್‍ನಲ್ಲಿನ ತಿಜೋರಿಯ ಬೀಗ ಹೊಡೆದು, ಅದರಲ್ಲಿನ ರೂ. 78ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ರೂ. 20ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಮನೆಯ ಮಾಲೀಕ ಬಸಪ್ಪ ಚವ್ಹಾಣ್ ಮುಂಡರಗಿ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ; ಸಿಡಿಲು ಬಡಿದು ಮಹಿಳೆ ಸಾವು

ವಿಜಯಸಾಕ್ಷಿ ಸುದ್ದಿ, ರೋಣ

ರೋಣ ತಾಲೂಕಿನ ವಿವಿಧೆಡೆ ಶುಕ್ರವಾರ ಸಾಯಂಕಾಲ ಗುಡುಗು- ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತವಾಗಿದ್ದ ಮಹಿಳೆ ಒಬ್ಬರು ಸಿಡಿಲು ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ನೈನಾಪೂರ ಗ್ರಾಮದ ರೇಖಾ ಭೀಮಪ್ಪ ನಂದಿಕೇಶ್ವರ(20) ಎಂದು ಗುರುತಿಸಲಾಗಿದೆ. ಜಮೀನನಲ್ಲಿ ಶೇಂಗಾ ಕಟಾವು ಕೆಲಸದಲ್ಲಿ ರೇಖಾ ನಿರತರಾಗಿದ್ದರು.

ಸಾಯಂಕಾಲ ಗುಡುಗು ಸಿಡಿಲು ಸಹಿತ ಮಳೆ ಸುರಿಯಲು ಆರಂಭವಾಗಿದೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಮಹಿಳೆ ರೇಖಾ ದುರ್ಮಣಕ್ಕೆ ತುತ್ತಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿ ಕನೋಜ್ ಕೂಡ ಭೇಟಿ ನೀಡಿದ್ದಾರೆ. ಈ ಕುರಿತು ರೋಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ಒಂದೂವರೆ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ದೋಚಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು ಒಂದುವರೆ ಲಕ್ಷ ರೂ. ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜನತಾ ಪ್ಲಾಟ್ ನಿವಾಸಿ, ನಿವೃತ್ತ ನೌಕರ ಶೇಖರಪ್ಪ ರುದ್ರಪ್ಪ ದೊಡಮನಿ ಎಂಬುವವರು ರಾತ್ರಿ 9.30ರ ಸುಮಾರು ಮನೆಗೆ ಬೀಗ ಹಾಕಿ ಗ್ರಾಮದಲ್ಲಿರುವ ಸಹೋದರನ ಮನೆಗೆ ಹೋಗಿ ಊಟ ಮಾಡಿ ಅಲ್ಲಿಯೇ ಮಲಗಿ ಬೆಳಗ್ಗೆ 6.30ರ ಸುಮಾರಿಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಟ್ರಜರಿಯಲ್ಲಿಟ್ಟಿದ್ದ 3 ತೊಲ ಚಿನ್ನದ ಎರಡು ಚೈನ್, ತಲಾ ಅರ್ಧ ತೊಲ ಎರಡು ಚಿನ್ನದ ಉಂಗುರ, 15 ಗ್ರಾಂ ತೂಕದ ಬೆಳ್ಳಿಯ ಬ್ರಾಸ್ ಲೈಟ್, 12 ಗ್ರಾಂ ಬೆಳ್ಳಿಯ ಉಂಗುರ, 1 ಗ್ರಾಂನ ಎರಡು ಬೆಳ್ಳಿಯ ರಿಂಗ್, 15 ಗ್ರಾಂ ಬೆಳ್ಳಿಯ ಕಾಲಗಡಗ, ನಡಪಟ್ಟಿ, ಗುಣಗಡಗಿ, ಒಂದು ಟೈಟನ್ ವಾಚ್, 5 ಸಾವಿರ ರೂ. ನಗದು ಕಳ್ಳತನವಾಗಿದೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಬ್ಬಗಳು ಇರೋಂದ್ರಿಂದ ಯಡಿಯೂರಪ್ಪ ಪ್ರವಾಸ ಮುಂದಕ್ಕೆ; ಸಚಿವ ಕಾರಜೋಳ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಹಬ್ಬಗಳು ಇರೋದ್ರಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಮುಂದೂಡಿದ್ದಾರೆ. ಹಬ್ಬಗಳು ಮುಗಿದ ಬಳಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನವನಿಹಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ಮುಂದೆ ನಿಂತು ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ಆರ್ ಎಸ್ ಎಸ್ ನ್ನು ತಾಲಿಬಾನ್ ಗೆ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಪ್ರಚಾರಕ್ಕಾಗಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡಬಾರದು. ಅವರು ಸಿಎಂ ಆಗಿದ್ದವರು, ಸಾಕಷ್ಟು ಅನುಭವವಿದೆ. ಜನಪ್ರತಿನಿಧಿಗಳು ಎಲ್ಲರಿಗೂ ಆದರ್ಶವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಲು ಚಿತ್ರಮಂದಿರ ಓಪನ್ ಮಾಡಲಾಗಿದೆ. ಮಾಲೀಕರು ಕೋವಿಡ್ ನಿಯಮ ಉಲ್ಲಂಘಿಸಬಾರದು ಎಂದು ಸಲಹೆ ನೀಡಿದರು.

ಡಿಎಚ್ಒ ಕಚೇರಿ ಮೇಲೆ ಎಸಿಬಿ ದಾಳಿ; ಲಂಚ ಪಡೆಯುತ್ತಿದ್ದ ಅಧೀಕ್ಷಕ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಗುತ್ತಿಗೆ ಅವಧಿಯನ್ನು ಮುಂದುವರಿಸಲು ಡಿ ಗ್ರೂಪ್ ನೌಕರರ ಹೆಚ್ಚಳವಾಗಿರುವ ಗೌರವಧನವನ್ನು ಲಂಚವಾಗಿ ಪಡೆಯುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಅಧೀಕ್ಷಕನನ್ನು ಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿರುವ ಡಿಎಚ್ಒ ಕಚೇರಿಯಲ್ಲಿ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳು, ಅಧೀಕ್ಷಕ ಶಿವಾನಂದ ಸಿಂದೋಗಿ ಎಂಬುವವರು 19 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಐದು ಜನ ಡಿ ಗ್ರೂಪ್ ನೌಕರರಿಗೆ ಈ ಹಿಂದೆ ನೀಡಿರುವ ಗೌರವಧನ ಹೆಚ್ಚಾಗಿದೆ. ಆ ಹೆಚ್ಚುವರಿ ಹಣ ಮರಳಿಸಬೇಕು ಹಾಗೂ ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆ ಅವಧಿ ಮುಗಿಯಲು ಬಂದಿದ್ದು, ಅದೂ ಕೂಡ ಮುಂದುವರೆಯಬೇಕಾದರೆ ಹೆಚ್ಚಾದ ಹಣ ಕೊಡಲೇಬೇಕು ಎಂದು ಶಿವಾನಂದ ಸಿಂದೋಗಿ ಎಂಬುವವರು ಹಣ ಕೇಳಿದ್ದರು ಎನ್ನಲಾಗಿದೆ.

ಐದು ಜನರಲ್ಲಿ‌ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಶಂಕ್ರಯ್ಯ ಸಾರಂಗಮಠ ಎಂಬುವವರು ಬುಧವಾರ ಸಂಜೆ 19 ಸಾವಿರ ಹಣ ಕೊಡುವಾಗ ಈ ದಾಳಿ ನಡೆದಿದೆ.

ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ, ಡಿವೈಎಸ್ಪಿ ಎಂ ವಿ ಮಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಸಿಬ್ಬಂದಿಗಳಾದ ನಾರಾಯಣಗೌಡ್ ತಾಯಣ್ಣವರ್, ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರ, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ, ಹಾಗೂ ಬಿಸಿನಳ್ಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

2 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಸಚಿವ ಪಾಟೀಲ ಭೂಮಿ ಪೂಜೆ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ

ಚಿಕ್ಕನರಗುಂದ ಗ್ರಾಮದ ಅಭಿವೃದ್ಧಿಗಾಗಿ 2 ಕೋಟಿ 12 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಲೋಕೋಪಯೋಗಿ ಖಾತೆ ಸಚಿವ ಸಿ ಸಿ ಪಾಟೀಲ ಇತ್ತೀಚೆಗೆ ಚಾಲನೆ ನೀಡಿದರು.

ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 1 ಕೋಟಿ 82 ಲಕ್ಷ ರೂ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ‌ ನಿರ್ಮಾಣಕ್ಕಾಗಿ 20 ಲಕ್ಷ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 5 ಲಕ್ಷ ರೂ ಹಾಗೂ ಉದ್ಯೋಗ ಖಾತರಿ ಯೋಜನೆಯ 5 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರೆಡ್ಡಿ, ಸದಸ್ಯರಾದ ಶರಣಬಸಪ್ಪ ಹಳೇಮನಿ, ಬಾಪುಗೌಡ ಹಿರೇಗೌಡ್ರ, ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಓ ಶೈನಾಜ್ ಮುಜಾವರ್,

ಹಿರಿಯರಾದ ಅಶೋಕ ಸಾಲೂಟಗಿ, ಬಸನಗೌಡ ಮುದಿಗೌಡ್ರ, ಈರಣ್ಣ ಹೊಂಗಲ್, ಸುರೇಶ್ ಸಾತಣ್ಣವರ್, ಅಡಿವೆಪ್ಪ ಮರಿಯಣ್ಣವರ, ಚನ್ನಪ್ಪ ಬ್ಯಾಳಿ, ಬಿ ಸಿ ಹನಮಂತಗೌಡ್ರ, ಬಸು ಕೊಣನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತಿ ಕಚೇರಿಯಲ್ಲಿಯೇ ಸಿಬ್ಬಂದಿ ನೇಣಿಗೆ ಶರಣು

0

ವಿಜಯಸಾಕ್ಷಿ ಸುದ್ದಿ, ಡಂಬಳ

ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ವಾಟರ್ ಮನ್ ಒಬ್ಬನನ್ನು ಕೆಲಸದಿಂದ ತಗೆದು ಹಾಕಿದ್ದಕ್ಕೆ ಬೇಸತ್ತ ಆತ ಗ್ರಾಮ ಪಂಚಾಯತಿಯ ಅಧ್ಯಕ್ಷರ ಛೇಂಬರ್ ನಲ್ಲಿ ನೇಣು ‌ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಸಮೀಪದ ಹಿರೇವಡ್ಡಟ್ಟಿ ಗ್ರಾಮದಲ್ಲಿ ವಾಟರ್ ಮನ್ ಆಗಿದ್ದ 31 ವರ್ಷದ ಮಲ್ಲಪ್ಪ ಹೊಳಗುಂದಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಕಳೆದ ಹಲವು ವರ್ಷಗಳ ಕಾಲ ಗ್ರಾಮ ಪಂಚಾಯತಿಯಲ್ಲಿ ವಾಟರ್ ಮನ್ ಆಗಿದ್ದ ಮಲ್ಲಪ್ಪನನ್ನು ಅಡಳಿತ ಮಂಡಳಿ ಇತ್ತೀಚೆಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ‌ಆರೋಪ ಹೊರಿಸಿ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದ ಮಲ್ಲಪ್ಪ ನಿನ್ನೆ ರಾತ್ರಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ಛೇಂಬರ್ ನಲ್ಲಿ ಇರುವ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿದೆ.

ಮಲ್ಲಪ್ಪನ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಕೂಡ ಪ್ರತಿಭಟನೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

ನೊಂದ ಕುಟುಂಬಕ್ಕೆ ನ್ಯಾಯ ಕೊಡಿ, ಗ್ರಾಮ ಪಂಚಾಯತಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಡುಗೆ, ರಸಪ್ರಶ್ನೆ ಕಾರ್ಯಕ್ರಮಕ್ಕೆ ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನರಗುಂದ ಹಾಗೂ ಗ್ರಾಮ ಪಂಚಾಯತಿ ಚಿಕ್ಕನರಗುಂದ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುತ್ತು ರಾಯರಡ್ಡಿ, ನಮ್ಮ ಗ್ರಾಮದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಗರ್ಭಿಣಿ, ಬಾಣಂತಿಯರಿಗೆ ರಸಪ್ರಶ್ನೆ, ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆ ಹಾಗೂ ಮೊದಲ ಗರ್ಭಿಣಿಯರಿಗೆ ನಡೆದ ಸೀಮಂತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆದಿದ್ದು ಶ್ಲಾಘನೀಯ ಎಂದರು.

ಶಿಶು ಅಭಿವೃಧ್ದಿ ಅಧಿಕಾರಿ ರೂಪಾ ಗಂಧದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದು ಪ್ರಶಂಸನೀಯ ಎಂದರು.

ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಗರ್ಭಿಣಿ, ಬಾಣಂತಿಯರ ಮಕ್ಕಳ ಆರೋಗ್ಯದ ಬಗ್ಗೆ ಆಹಾರ ಪದ್ದತಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುತ್ತು ರಾಯರಡ್ಡಿ ಹೇಳಿದರು.

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ರೂಪಾ ಗಂಧದ ಮಾತನಾಡಿ, ವಿಶೇಷವಾಗಿ ಗರ್ಭಿಣಿ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಸಲುವಾಗಿ ಇರುವ ಸರಕಾರದ ಹಲವಾರು ಯೋಜನೆಯಗಳ ಸದುಪಯೋಗ ಪಡೆದುಕೊಳ್ಳಲು ಹಾಗೂ ಪಂಚಸೂತ್ರಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಶರಾವತಿ ಹಿರೇಮಠ ಮಾತನಾಡಿ, ಮನುಷ್ಯನ ದೇಹ ಮತ್ತು ಮೆದುಳಿನ ಬೆಳವಣಿಗೆಗೆ ಜೀವಸತ್ವ, ಪೌಷ್ಠಿಕಾಂಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

ಅದರಲ್ಲೂ ಗರ್ಭಿಣಿ, ಬಾಣಂತಿಯರು, ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ತುಂಬಾ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಕೊಬ್ಬಿನಾಂಶದ ಮಾತ್ರೆಗಳು ಮತ್ತು ವಯಸ್ಸಿಗೆ ಅನುಗುಣವಾಗಿ ಲಸಿಕೆಯನ್ನು ತೆಗೆದುಕೊಳ್ಳುವದರಿಂದ ಆರೋಗ್ಯವಂತ ಶಿಶುವನ್ನು ಪಡೆಯಬಹುದು ನೀವು ಕೂಡ ಆರೋಗ್ಯದಿಂದರಬಹುದು ಎಂದು ತಿಳಿಸಿದರು.

ಪೋಷಣ್ ಅಭಿಯಾನದ ಕಾರ್ಯಕ್ರಮ ಸಂಯೋಜಕ ಮಂಜು ಗುಗ್ರಿ, ಮೇಲ್ವಿಚಾರಕಿ ಅನ್ನಪೂರ್ಣ ಹಡಪದ‌, ಹಾಗೂ ಗ್ರಾ.ಪಂ ಸರ್ವಸದಸ್ಯರು ರಸಪ್ರಶ್ನೆ ಸ್ಪರ್ಧೆ ವಿಕ್ಷಣೆ ಹಾಗೂ ಅಡುಗೆ ರುಚಿ ನೋಡಿ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಘೋಷಿಸಿದರು.

ಕಾರ್ಯಕ್ರಮದಲ್ಲಿ ಶಿವಲೀಲಾ ಹಿರೇಮಠ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶಂಕ್ರಮ್ಮ ಚಲವಾದಿ, ಶಿಕ್ಷಕಿಯರಾದ ಎಸ್.ವ್ಹಿ.ಮಣ್ಣೂರ, ಆರೋಗ್ಯ ಇಲಾಖೆಯ ಶರಾವತಿ ಹಿರೇಮಠ, ಬಾಗ್ಯಜ್ಯೋತಿ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ಮೇಟಿ, ಭಾರತಿ ಪಾಟೀಲ್, ಸವಿತಾ ರಾಯರಡ್ಡಿ, ಗೀತಾ ಕಾಡದೇವರಮಠ, ವಿಜಯಲಕ್ಷ್ಮಿ ಹಿರೇಮಠ, ನೀಲಗಂಗಾ ಮಾದರ,


ಬೆನಕನಕೊಪ್ಪ, ಹಿರೆಕೊಪ್ಪ, ಸಂಕದಾಳ, ಸುರಕೋಡ ಗ್ರಾಮದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!