Home Blog Page 3248

ಮೂರನೇ ಅಲೆ ನಿಯಂತ್ರಣಕ್ಕಾಗಿ ಆ. 30 ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ, ನೈಟ್ ಕರ್ಫ್ಯೂ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973,

ಸಾಂಕ್ರಾಮಿಕ  ರೋಗ ಕಾಯ್ದೆ 1897  ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ  ಕಾಯ್ದೆ 2005 ರ ಪ್ರಕಾರ

ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಸರ್ಕಾರ ಹೊರಡಿಸಿದ ಮೊಹರಂ ಹಾಗೂ ಗಣೇಶ ಹಬ್ಬಗಳ ಮಾರ್ಗಸೂಚಿಗಳ ಆದೇಶಗಳಡಿ ಸಮೀಕ್ಷೆ, ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಮಾರ್ಗಸೂಚಿಗಳ ಎಲ್ಲ ಷರತ್ತು ಹಾಗೂ ಸಡಿಲಿಕೆಗಳಿಗೆ ಒಳಪಟ್ಟು

ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಆಗಸ್ಟ 30 ರ ಬೆಳಗಿನ 6 ಗಂಟೆಯವರೆಗೆ ಪ್ರತಿ ರಾತ್ರಿ 9 ಗಂಟೆಯಿಂದ ಬೆಳಗಿನ 5 ಗಂಟೆಯವರೆಗಿನ ರಾತ್ರಿ ಕಫ್ರ್ಯೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ಮುಂದುವರೆಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ  ರೂ.100 ದಂಡವನ್ನು ವಿಧಿಸಲಾಗುವುದು.

ಈ ಆದೇಶವನ್ನು  ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ತತ್ತಿ ತಿಂದದ್ದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇವರ ಖಾತೆ

ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ತತ್ತಿ ಖಾತೆಯಲ್ಲಿ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇವರ ಖಾತೆ ನೀಡಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆಗೆ ತತ್ತಿ ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತ ಖಾತೆ ನೀಡಲಾಗಿದೆ.

ದೇವರ ಜಪ ಮಾಡಲಿ, ಗುಡಿಗಳನ್ನು ಚೆನ್ನಾಗಿ ನೋಡಿಕೊಂಡು ಪೂಜೆ ಮಾಡಿಸಲಿ ಎಂದು ಮುಜರಾಯಿ ಖಾತೆ ಕೊಟ್ಟಿದ್ದಾರೆ. ಎಗ್ ಆದ ಮೇಲೆ ಮತ್ತೇನು ತಿಂತಾರೆ ಎನ್ನುವ ಚಿಂತೆ ಇತ್ತು. ಮುಂದೆ ಏನಾದರೂ ಅನಾಹುತ ಮಾಡಬಾರದು ಎಂದು ಮುಖ್ಯಮಂತ್ರಿ ಮುಜರಾಯಿ ಖಾತೆ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.

ಬಿಜೆಪಿಯವರು ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪಕ್ಷದಲ್ಲಿರುವವರೆಲ್ಲ ಸೇರಿ ಭ್ರಷ್ಟಾಚಾರ ಹಂಚಿಕೊಂಡಿರುತ್ತಾರೆ. ಹಾಗಾಗಿ ಶಶಿಕಲಾ ಜೊಲ್ಲೆ ವಿರುದ್ಧದ ಆರೋಪದ ಕುರಿತಂತೆ ತನಿಖೆ ಮಾಡಿಲ್ಲ. ಯಾರಾದರೂ ನ್ಯಾಯಾಲಯಕ್ಕೆ ಹೋಗಿಯೇ ಹೋಗುತ್ತಾರೆ. ತಡವಾದರೂ ತನಿಖೆ ಆಗುತ್ತದೆ. ಮರಳಿ ಶಶಿಕಲಾ ಅವರಿಗೆ ತತ್ತಿ ಖಾತೆ ನೀಡದಿರುವುದು ಸಂತೋಷ ತಂದಿದೆ ಎಂದರು.

ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ; ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೊರೊನಾ ನಿರ್ವಹಣೆ ಕುರಿತಾಗಿ ತಜ್ಞರೊಂದಿಗೆ ಬೆಂಗಳೂರಿನಲ್ಲಿಂದು ನಡೆಸಿದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸದಿರಲು ನಿರ್ಧರಿಸಲಾಗಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಸೆ.23ರಿಂದ 8ರಿಂದ 12ನೇ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ.

ಪೋಷಕರು, ಮಕ್ಕಳು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಶಾಲೆ ಆರಂಭವಾದ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾದಲ್ಲಿ ಒಂದು ವಾರಗಳ ಕಾಲ ಶಾಲೆ ಬಂದ್ ಮಾಡಿ ಸಂಪೂರ್ಣ ಸ್ಯಾನಿಟೈಜೇಶನ್ ಮಾಡಿ ಬಳಿಕ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

ಕೊರೊನಾ ಎರಡನೇ ಅಲೆ ಇನ್ನೂ ಸಂಪೂರ್ಣ ಹೋಗಿಲ್ಲ. ಈಗಲೂ ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ ಮುಂದಿನ ಎರಡು ವಾರಗಳ ಕಾಲ ಈಗಿರುವ ನಿಯಮಗಳೇ ಮುಂದುವರಿಯಲಿವೆ.

ಕೊರೊನಾ ನಿರ್ವಹಣೆಗೆ ಬಹಳ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕಿದೆ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಶನ್ ಹೆಚ್ಚಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಟೆಸ್ಟಿಂಗ್ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊರೊನಾ ಡೆಲ್ಟಾ ವೇರಿಯೇಶನ್ ಕಂಡು ಹಿಡಿಯಲು ಮುಂದಿನ ಮೂರು ವಾರಗಳಲ್ಲಿ ರಾಜ್ಯದ ಆರು ಕಡೆ ಜಿನೋಮ್ ಲ್ಯಾಬ್ ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಆ.23 ರಿಂದ ಶಾಲೆ ಆರಂಭಿಸಲು ಅಗತ್ಯ ಸಿದ್ಧತೆ; ಸಚಿವ ನಾಗೇಶ್

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಆ. 23 ರಿಂದ 9 ರಿಂದ 12ನೇ ತರಗತಿಯವರೆಗೆ ಶಾಲೆ ಆರಂಭಕ್ಕೆ ನಿರ್ಧರಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದು ವಾರ ನೋಡಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಗಡಿಭಾಗದ ಕೆಲ ತಾಲೂಕುಗಳನ್ನು ಹೊರತುಪಡಿಸಿ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಕಡಿಮೆಯಾಗಿದೆ. ಶಾಲೆ ಇಲ್ಲದಿರುವುದರಿಂದ ಅನೇಕ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಇನ್ನೂ ವಿಳಂಬ ಮಾಡಿದರೆ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಮಾಣ ಬೀರಲಿದೆ. ಹೆಚ್ಚಿನ ಪಾಲಕರು ಶಾಲೆ ಪ್ರಾರಂಭದ ಪರವಾಗಿದ್ದಾರೆ. 9 ರಿಂದ 12ನೇ ತರಗತಿ ಫೀಡ್ ಬ್ಯಾಕ್ ನೋಡಿಕೊಂಡು 1 ರಿಂದ 8ನೇ ತರಗತಿವರೆಗಿನ ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ
ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರ ಎಲ್ಲ ಮುನ್ನೆಚ್ಚರಿಕೆ ವಹಿಸಿಯೇ ಶಾಲೆ ಆರಂಭಿಸುತ್ತಿದೆ. ಹೀಗಾಗಿ ಪಾಲಕರು ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಮನವಿ ಮಾಡಿದರು.

ಆಫ್ ಲೈನ್ ಜೊತೆಗೆ ಆನಲೈನ್ ತರಗತಿ ಕೂಡ ಇರಲಿದೆ ಎಂದ ಸಚಿವರು, ಶಿಕ್ಷಕರ ವರ್ಗಾವಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರೆದುರು ಏಕವಚನದಲ್ಲೇ ಬೈದಾಡಿದ ಸಂಸದ, ಶಾಸಕರು

ವಿಜಯಸಾಕ್ಷಿ ಸುದ್ದಿ, ತುಮಕೂರು

ವಿದ್ಯುತ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ನಡುವೆ ಜಟಾಪಟಿ ನಡೆದು, ಪರಸ್ಪರ ಕೈ ಕೈ ಮಿಲಾಸುವ ಹಂತ ತಲುಪಿದ ಘಟನೆ ನಡೆಯಿತು.

ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಇಬ್ಬರು ನಾಯಕರು ಪರಸ್ಪರ ಏಕವಚನದಲ್ಲಿ ಮಾತಿನ ಚಕಮಕಿ ನಡೆಸಿದರು.

ಸಂಸದ ಬದವರಾಜು ಮಾತನಾಡುತ್ತ, ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು 550 ಕೋಟಿ ರೂಪಾಯಿ ತಂದಿದ್ದೇನೆ, ರೈತರಿಗೆ ಎಕರೆಗೆ ಒಂದು ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.

ಇದರಿಂದ ಆಕ್ರೋಶಗೊಂಡ ಜೆಡಿಎಸ್ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ ? ವಯಸ್ಸಾಗಿದೆ ಈಗಲಾದರೂ ನ್ಯಾಯಯುತ ಹೇಳಿಕೆ ನೀಡಬಾರದೇ? ಎಂದು ಪ್ರಶ್ನಿಸಿದರು.

ಇದರಿಂದ ಸಿಟ್ಟಾದ ಸಂಸದ ಬಸವರಾಜು, ಶಾಸಕ ಶ್ರೀನಿವಾಸರಿಗೆ ಏಕವಚನದಲ್ಲೇ ಮಾತಿನ ಚಾಟಿ ಬೀಸಿದರು. ಇಬ್ಬರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದನ್ನು ಕಂಡ ಜನರು ಕೆಲ ಕ್ಷಣ ದಂಗಾಗಿ ಹೋದರು.

ವಾಜಪೇಯಿ ಹೇವಿ ಡ್ರಿಂಕರ್, ಎಲ್ಲ ಬಾರ್ ಗಳಿಗೆ ವಾಜಪೇಯಿ ಹೆಸರು ಹಾಕ್ತೀರಾ ?

  • ಕಲಬುರಗಿಯಲ್ಲಿ ಪ್ರಿಯಾಂಕ ಖರ್ಗೆ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಕಲಬುರ್ಗಿ

ವಾಜಪೇಯಿವರು ಹೇವಿ ಡ್ರಿಂಕರ್ ಅಂತೆ. ಸಂಜೆಗೆ ಎರಡು ಪೆಗ್ ಡ್ರಿಂಕ್ ಬೇಕಾಗ್ತಿಂತೆ. ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಬಾರ್ ಎಂದು ಹೆಸರು ಹಾಕ್ತಿರಾ ಎಂದು
ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಸಿ.ಟಿ.ರವಿ ಅವರ ಹುಕ್ಕಾ ಬಾರ್ ಹೇಳಿಕೆಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿ ಪ್ರಿಯಾಂಕ್,
ಬಿಜೆಪಿಯವರು ಎಲ್ಲರೂ ಸಾಚಾಗಳೆಂದು ಭಾವಿಸಬೇಕೇ ? ಸೀಡಿ ಪ್ರಕರಣದಿಂದ ರಾಜ್ಯದ ಮರ್ಯಾದೆ ಕಳೆದರು ಎಂದು ಕುಟುಕಿದರು.

ನೆಹರು ಅವರ ಬಗ್ಗೆ ರವಿ ಮಾತಾಡುವುದರಿಂದ ನೆಹರು ಘನತೆ ಕಡಿಮೆ ಆಗಲ್ಲ. ನಾನು ವಾಜಪೇಯಿ ಅವರ ಬಗ್ಗೆ ಮಾತನಾಡುವುದರಿಂದ ವಾಜಪೇಯಿ ಅವರ ಘನತೆ ಕಡಿಮೆ ಆಗಲ್ಲ ಎಂದರು.

ಸಾವರ್ಕರ್ ಏನು ಕೊಡುಗೆ ಏನಿದೆ. ಪ್ಲೈ ಓವರ್ ಗೆ ಸಾವರ್ಕರ್ ಎಂದು ಹೆಸರಿಡುತ್ತಾರೆ. ಇವರು ಗೋಡ್ಸೆಯನ್ನು ನಂಬುತ್ತಾರೆ. ಆದರೆ, ಗಾಂಧಿಯವರನ್ನು ನಂಬಲ್ಲ.

ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದರೆ ಹಿಂಗೆ ಮಾತಾಡೋದು. ಇವರದು ಅವಿವೇಕಿತನದ ಪರಮಾವಧಿ ಎಂದು ಗುಡುಗಿದರು.

ಸಿ.ಟಿ. ರವಿ ನಾಲಿಗೆಯನ್ನು ಇಟ್ಟಿಗೆಯಿಂದ ಉಜ್ಜಿ ಸರಿ ಮಾಡಬೇಕಿದೆ

  • ತುಮಕೂರಿನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ವಾಗ್ದಾಳಿ.

ವಿಜಯಸಾಕ್ಷಿ ಸುದ್ದಿ, ತುಮಕೂರು

ಸಿಟಿ ರವಿ ನಾಲಿಗೆಯನ್ನು ಇಟ್ಟಿಗೆ ತಗೊಂಡು ಉಜ್ಜಿ ಸರಿ ಮಾಡಬೇಕು ಎಂದು ಕಾಂಗ್ರೆಸ್ ನ ಮಾಜಿ ಕೆ.ಎನ್. ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಜಣ್ಣ, ಆಲಮಟ್ಟಿ ಡ್ಯಾಂಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರು ಬದಲಾಯಿಸಿ ವಾಜಪೇಯಿ ಹೆಸರಿಡೋಕೆ ಆಗುತ್ತಾ? ಬಡವರ ಪರವಾದ ಹೊಸ ಯೋಜನೆ ತಂದು ತಮಗೆ ಬೇಕಾದ ಹೆಸರು ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ರಾಜೀವ್ ಗಾಂಧಿ ಹೆಸರು ಬದಲಾಯಿಸಿ ಧ್ಯಾನ್ ಚಂದ್ ಹೆಸರಿಡೋದು‌ ಸಣ್ಣ ತನದ ಪರಮಾವಧಿ. ರಾಜೀವ್ ಗಾಂಧಿ ದೇಶಕ್ಕೆ ಕೊಟ್ಟ ಕೊಡುಗೆಗಳಿಗೆ ಅಪಚಾರ ಮಾಡಿದಂತೆ. ಬೇಕಾದರೆ ಬೇರೆ ಪ್ರಶಸ್ತಿ ಮಾಡಿ ಧ್ಯಾನಚಂದ್ ಹೆಸರು ಇಡಲಿ.

ಯಾರ ಬೇಡ ಅಂತಾರೆ. ಇಂದಿರಾ ಗಾಂಧಿ ಹೆಸರು ಇಡೀ ಪ್ರಪಂಚಕ್ಕೆ ಗೊತ್ತು. ಇಂದಿರಾ ಎಂದರೆ ಇಂಡಿಯಾ ಅಂತ. ಅವರು ದೇಶದಲ್ಲಿ ಅತಿ ಹೆಚ್ಚು ಜನಮಾನಸದಲ್ಲಿ ಉಳಿದ ಪ್ರಧಾನಿ.

ಯಾರ್ರೀ ಅವನು ಸಿ.ಟಿ. ರವಿ. ಸ್ವಾತಂತ್ರ್ಯ ಬರೋವಾಗ ಇವನು ಹುಟ್ಟೇ ಇರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಎಷ್ಟು ಕಷ್ಟ ಅನುಭವಿಸಿದ್ದಾರೆಂಬ ಪರಿಚಯ ಇವರನಿಗಿದೆಯೇ ಎಂದು ಪ್ರಶ್ನಿಸಿದ ಅವರು,

ಆರ್ ಎಸ್ ಎಸ್ ಹೇಳಿಕೊಟ್ಟಿದ್ದನ್ನು ಹೇಳಿಕೊಂಡು ಓಡಾಡುತ್ತಾರೆ.‌ ಅದಕ್ಕೆ ಅವರ ನಾಲಿಗೆಗೆ ಇಟ್ಟಿಗೆ ತಗೊಂಡು ಉಜ್ಜಿ ಸರಿ ಮಾಡಬೇಕಿದೆ ಎಂದು ಕುಟುಕಿದರು.

ಮೇಕೆದಾಟು ವಿಚಾರದಲ್ಲಿ ಸಿ.ಟಿ.ರವಿ, ನಾನು ಭಾರತೀಯ ಅಂತಾನೆ. ಅವನು ಕರ್ನಾಟಕದ ಶಾಸಕ. ಮೊದಲು ರಾಜ್ಯದ ನೆಲ, ಜಲ‌, ಜನರ ಹಿತ ಕಾಪಾಡಿ ಬೇರೆಯವರ ಸುದ್ದಿಗೆ ಹೋಗಬೇಕು. ಮೊದಲು ನಮ್ಮ ಜನರ ಹಿತ ಆಮೇಲೆ ಬೇರೆಯವರ ವಿಚಾರ ಎಂದು ಬುದ್ಧಿವಾದ ಹೇಳಿದರು.

ಸಾವಿನಲ್ಲೂ ಒಂದಾದ ದಂಪತಿ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಪತ್ನಿಯ ಸಾವಿನ ಸುದ್ದಿ ಕೇಳಿ ಪತಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಕಂಚಾರಗಟ್ಟಿ ಗ್ರಾಮದಲ್ಲಿ ನಡೆದಿದೆ.

ಹೊನ್ನಮ್ಮ ಶೇಖರಗೌಡ ಹುಳ್ಯಾಳ (60), ಶೇಖರಗೌಡ ಹುಳ್ಯಾಳ (65) ಮೃತ ದಂಪತಿ. ಅನಾರೋಗ್ಯದಿಂದ ಬಳಲುತ್ತಿದ್ದ ಹೊನ್ನಮ್ಮ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಕೊನೆ ಉಸಿರೆಳೆದಿದ್ದರು.

ಪತ್ನಿಯ ಸಾವಿನ ಸುದ್ದಿ ಕೇಳಿದ ಶೇಖರಗೌಡ ಹೃದಯಾಘಾತ ಉಂಟಾಗಿ ತಕ್ಷಣ ಮೃತಪಟ್ಟಿದ್ದಾರೆ. ಬದುಕಿನ ಪಯಣದಲಿ ಸುಖ- ದುಃಖ ಹಂಚಿಕೊಂಡು ಬಾಳಿದ್ದ ಜೋಡಿ ಸಾವಿನಲ್ಲೂ ಒಂದಾಗಿ ಜೀವನದ ಪಯಾಣ ಮುಗಿಸಿದೆ.

ಎರಡು ಹಿರಿಯ ಜೀವಗಳು ಒಟ್ಟಿಗೆ ಅಗಲಿರುವುದು ಹುಲ್ಯಾಳ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ನೆಹರೂ ಹುಕ್ಕಾ ಸೇದಿದ್ದು ತಪ್ಪೋ? ರವಿ ಹೇಳಿದ್ದು ತಪ್ಪೋ?

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಹುಕ್ಕಾ ಬಾರಿನ ಬಗ್ಗೆ ಮಾತನಾಡಿದ್ದಕ್ಕೆ ಉರಿ ಹತ್ತಿಕೊಂಡಂತೆ ಮಾತನಾಡುತ್ತಿದ್ದಾರೆ. ನೆಹರೂ ಹುಕ್ಕಾ ಸೇದುತ್ತಿದ್ದದು ತಪ್ಪೋ, ರವಿ ಹೇಳಿದ್ದು ತಪ್ಪೋ? ರವಿ ಹೇಳಿದ್ದು ತಪ್ಪು ಎನ್ನುವುದಾದರೆ ಅವರಿಗೆ ನೆಹರೂ ಬಗ್ಗೆ ಇನ್ನೆಷ್ಟು ಆಕ್ರೋಶ ಇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ಕಾಂಗ್ರೆಸಿಗರಿಗೆ ನನ್ನ ಮೇಲೆ ಇಷ್ಟು ದ್ವೇಷ ಇದೆ ಅನ್ನೋದಾದರೆ ನೆಹರೂ ಬಗ್ಗೆ ಎಷ್ಟು ದ್ವೇಷ ಇರಬಹುದು? ನೆಹರೂ, ಇಂದಿರಾ ಬಗ್ಗೆ ನಾನು ಮಾತನಾಡಿದ್ದು ತಪ್ಪು ಅನ್ನುತ್ತಿದ್ದಾರೆ ಎಂದು ಕುಟುಕಿದರು.

ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಇಂದಿರಾ ಬಗ್ಗೆ ಮಾತನಾಡಿರುವುದನ್ನು ಕೇಳಿಸಬೇಕಾ? ಇಬ್ರಾಹಿಂ ಇಂದಿರಾ ಗಾಂಧಿಯನ್ನು ಏನೆಂದು ಕರೆದಿದ್ರು? ನಾನು ಆ ಮಟ್ಟಕ್ಕೆ ಇಳಿದಿಲ್ಲ. ನನಗೆ ಕುಡಿಯೋ ಅಭ್ಯಾಸವಿಲ್ಲ, ಕುಡುಕನ ಪಟ್ಟ ಕಟ್ಟಿದರು. ಆದರೆ, ದಿನಾ ಕುಡಿಯುವವರು ಅವರೇ ಎಂದು ತಿರುಗೇಟು ನೀಡಿದರು.

ನಾನು 5 ಗಂಟೆಗೆ ಎದ್ದು ಯೋಗ ಮಾಡುತ್ತೇನೆ. ಇಡೀ ದಿನ ಸಕ್ರಿಯವಾಗಿರುತ್ತೇನೆ. ನಾನು ಆರೆಸ್ಸೆಸ್ ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಕುಟುಕಿದರು.

ಯಡಿಯೂರಪ್ಪ ದುಡಕಿನ ನಿರ್ಧಾರ ಬೇಡ ಎಂದಿದ್ದಾರೆ; ಸಚಿವ ಆನಂದ ಸಿಂಗ್

ವಿಜಯಸಾಕ್ಷಿ ಸುದ್ದಿ, ವಿಜಯನಗರ

ಯಡಿಯೂರಪ್ಪ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದಿದ್ದಾರೆ. ಬೊಮ್ಮಾಯಿ ಹೇಗೆ ಸಮಸ್ಯೆ ಬಗೆಹರಿಸುತ್ತಾರೆ ಕಾದು ನೋಡೋಣ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.

ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಆಶೀರ್ವಾದ ಪಡೆಯಲು ಬೆಂಗಳೂರಿಗೆ ಹೋಗಿದ್ದೆ. ರಾಜಕೀಯ ಮಾತನಾಡಲು ಹೋಗಿರಲಿಲ್ಲ ಎಂದರು.

ವಿಜಯನಗರ ಜನರ ಋಣ ತಿರಿಸಲು ಆಗೋದಿಲ್ಲ. ಜಿಲ್ಲೆ ಮಾಡಿದ ಸಾಧನೆ ತೃಪ್ತಿ ಇದೆ.
ಯಡಿಯೂರಪ್ಪನವರು ಜಿಲ್ಲೆ ಘೋಷಣೆ ಮಾಡಿದರು. ಅವರ ಋಣ ತೀರಿಸಕ್ಕಾಗಲ್ಲ ಎಂದು ಹೇಳಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿ ಧ್ವಜಾರೋಹಣ ‌ಮಾಡುತ್ತಿದ್ದೇನೆ ಎಂಬ ಖುಷಿ ಇದೆ ಎಂದರು.

ಸಚಿವ ಸ್ಥಾನ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಿಗೆ ಏನು ಹೇಳಬೇಕು ಹೇಳಿದ್ದಾಗಿದೆ. ದೆಹಲಿಗೆ ‌ಹೋಗುತ್ತೇನೆ ಎಂದು ಹೇಳಿಲ್ಲ. ಹೋಗೋದು ಇಲ್ಲ ಎಂದು ಹೇಳಿದರು.

error: Content is protected !!